ಸೋಮವಾರಪೇಟೆ: ಸಿ ಮತ್ತು ಡಿ(ಕೃಷಿಗೆ ಯೋಗ್ಯವಲ್ಲದ ಭೂಮಿ) ಭೂತ ರೈತರ ಬದುಕನ್ನು ಹಾಳು ಮಾಡುವುದರ ಜತೆಗೆ ಕಂದಾಯ ಇಲಾಖೆಯ ಕೆಲ ಭ್ರಷ್ಟರು ವ್ಯವಸಾಯ ಭೂಮಿಯನ್ನು ಸಿ ಮತ್ತು ಡಿ ಜಾಗವೆಂದು ಪರಿವರ್ತನೆ ಮಾಡಿದ್ದಾರೆ ಎಂದು ರೈತ ಪ್ರಮುಖರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಒಕ್ಕಲಿಗರ ಸಮೂದಾಯ ಭವನದಲ್ಲಿ ಸೋಮವಾರ ಆಯೋಜಿಸಿದ್ದ ತಾಲೂಕಿನ 40 ಗ್ರಾಮಗಳ ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷರು ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಅರಣ್ಯ ಒತ್ತುವರಿ ತೆರವು ಹಾಗೂ ಸಿ ಮತ್ತು ಡಿ ಭೂಮಿ ಕುರಿತು ಸುದೀರ್ಘ ಬರ್ಬೆ ನಡೆಸಿದರು.
ಮಡಿಕೇರಿ ಶಾಸಕ ಡಾ.ಮಂತರ್ಗೌಡ ಸಭೆಯಲ್ಲಿ ರೈತರ ಸಮಸ್ಯೆ ಆಲಿಸಿದರು. ಶಾಂತಳ್ಳಿ ಹೋಬಳಿಯಲ್ಲಿ ಹೆಚ್ಚು ಸಿ ಮತ್ತು ಡಿ ಭೂಮಿಯಿದೆ. ಈ ಭೂಮಿಯಲ್ಲೇ ಕೃಷಿ ಮಾಡುತ್ತಿದ್ದಾರೆ. ಎರಡು ಎಕರೆಯಿಂದ 5 ಎಕರೆ ಆಸ್ತಿಯಿರುವ ಸಾವಿರಾರು ಕುಟುಂಬಗಳಿವೆ. ಸಿ ಮತ್ತು ಡಿ ಭೂಮಿಗೆ ಹಕ್ಕುಪತ್ರ ಸಿಕ್ಕಿಲ್ಲ. ಯಾವುದೇ ಸೌಲಭ್ಯಗಳು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡರು.
1991ರಲ್ಲಿ ಕೆಲ ಕಂದಾಯ ಇಲಾಖೆ ಅಧಿಕಾರಿಗಳು ಶಾಂತಳ್ಳಿ ಹೋಬಳಿಯಲ್ಲಿನ ನೂರಾರು ಎಕರೆ ಜಮೀನನ್ನು ಸಿ ಮತ್ತು ಡಿ ಭೂಮಿಯಾಗಿ ಪರಿವರ್ತನೆ ಮಾಡಲು ಸರ್ಕಾರಕ್ಕೆ ಬರೆದರು. ಆದರೆ ಜನರು ಹೋರಾಟ ಮಾಡಲಿಲ್ಲ. ಈಗ ಸುರ್ಪಿಂ ಕೋರ್ಟ್ ಆದೇಶದಂತೆ ಭೂಮಿಯನ್ನು ಕಳೆದುಕೊಳ್ಳಬೇಕಾದ ದುಸ್ಥಿತಿ ಬಂದಿದೆ. ಕಾನೂನು ಹೋರಾಟವನ್ನು ಮಾಡಲೇಬೇಕಾದ ಅನಿವಾರ್ಯತೆ ಒದಗಿದೆ ಎಂದು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಕೆ.ಬಿ.ಸುರೇಶ್ ಹೇಳಿದರು.
ಸಿ ಮತ್ತು ಡಿ ಭೂಮಿಯನ್ನಾಗಿ ಪರಿವರ್ತನೆ ಮಾಡಿರುವ ಬಗ್ಗೆ ಕಂದಾಯ ಇಲಾಖೆ ವಿರುದ್ಧ 20 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಈಗ ಕಾನೂನು ಹೋರಾಟ ಮಾಡದಿದ್ದರೆ ಎಷ್ಟೋ ಕುಟುಂಬ ಆಸ್ತಿ ಕಳೆದುಕೊಂಡು ನಿರ್ಗತಿಕರಾಗಬೇಕಾಗುತ್ತದೆ ಎಂದು ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಂ.ಲೋಕೇಶ್ ಹೇಳಿದರು.
ಕೊಡಗಿನ ಇಬ್ಬರು ಶಾಸಕರ ನೇತೃತ್ವದಲ್ಲಿ ಅರಣ್ಯ, ಕಂದಾಯ ಸಚಿವರು, ಲೋಕಸಭಾ ಸದಸ್ಯರು. ಮಾಜಿ ಶಾಸಕರು, ಮಾಜಿ ಸಂಸದರು ಹಾಗೂ ರೈತರ ಸಮ್ಮಖದಲ್ಲಿ ಸಭೆ ನಡೆಸಿ, ಮುಂದಿನ ಹೋರಾಟವನ್ನು ನಿಗದಿ ಮಾಡಿಕೊಳ್ಳಬೇಕಾಗಿದೆ ಎಂದರು.
ಸೋಮವಾರಪೇಟೆ ತಾಲೂಕಿನಲ್ಲಿ ಎಷ್ಟು ಸಿ ಮತ್ತು ಡಿ ಮತ್ತು ಸಾಮಾಜಿಕ ಅರಣ್ಯ ಭೂಮಿ ವಿಸ್ತೀರ್ಣವನ್ನು ಕಂಡುಕೊಳ್ಳಬೇಕಾಗಿದೆ. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆಯಿಂದ ಜಂಟಿ ಸರ್ವೇ ನಡೆಸಿದರೆ ಭೂಮಿಯ ವಿಸ್ತೀರ್ಣ ತಿಳಿಯಲಿದೆ. ನಂತರ ಕಾನೂನು ಹೋರಾಟ ಮುಂದುವರಿಸಲು ಸಾಧ್ಯ ಎಂದು ಸಾಮಾಜಿಕ ಹೋರಾಟಗಾರ ಬಿ.ಪಿ.ಅನಿಲ್ ಹೇಳಿದರು.
ಇದು ರಾಜಕೀಯ ರಹಿತ ಹೋರಾಟವಾಗಬೇಕು. ಜಿಲ್ಲೆಯ ಟೆನ್ಯೂರ್ಗಳ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಗೊತ್ತಿಲ್ಲ. ಕಂದಾಯ ಇಲಾಖೆಯ ಭ್ರಷ್ಟರಿಂದ ರೈತರ ಆಸ್ತಿ ದುರಸ್ತಿ ಆಗಿಲ್ಲ. ಇದೇ ಕಾರಣದಿಂದ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಲಂಚ ಕೊಟ್ಟವನ ಭೂಮಿ ದುರಸ್ತಿ ಆಗುತ್ತಿದೆ. ಹೊರ ರಾಜ್ಯದ ಬಂಡವಾಳ ಶಾಹಿಗಳು ಕೊಡಗಿನಲ್ಲಿ ಭೂಮಿ ಖರೀದಿಸಿದರೆ, ಕೂಡಲೇ ದುರಸ್ತಿ ಆಗುತ್ತದೆ. ಇದೊಂದು ದಂಧೆಯಾಗಿದೆ ಎಂದು ಪ್ರಮುಖರಾದ ಎಸ್.ಬಿ.ಭರತ್ ಮತ್ತಿತರರು ಆರೋಪಿಸಿದರು.
ರೈತ ಸಂಘದ ಅಧ್ಯಕ್ಷ ಕೆ.ಎಂ.ದಿನೇಶ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಎಸ್.ಜಿ.ಮೇದಪ್ಪ, ತಾಲ್ಲೂಕು ಅಧ್ಯಕ್ಷ ಎ.ಆರ್.ಮುತ್ತಣ್ಣ, ವಕೀಲ ಬಿ.ಜೆ.ದೀಪಕ್, ದಿವಾಕರ್, ಲಕ್ಷ್ಮಣ್, ಮುದ್ದಪ್ಪ ಮತ್ತಿತರರು ಸಲಹೆ ನೀಡಿದರು.
ಸಿ ಮತ್ತು ಡಿ ಭೂಮಿ, ಸಾಮಾಜಿಕ ಅರಣ್ಯ ಒತ್ತುವರಿ ತೆರವಿನ ಬಗ್ಗೆ ಕೂತಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ರೈತರಿಗೋಸ್ಕರ ಹೋರಾಟ ಮಾಡಲು ನಾನು ಮತ್ತು ವಿರಾಜಪೇಟೆ ಶಾಸಕರು ಸಿದ್ಧ. ಕಾನೂನು ಹೋರಾಟದಿಂದ ರೈತರಿಗೆ ನ್ಯಾಯ ಒದಗಿಸಿ ಕೊಡುವುದು ಜನಪ್ರತಿನಿಧಿಗಳ ಕರ್ತವ್ಯ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ, ಅರಣ್ಯ ಮತ್ತು ಕಂದಾಯ ಸಚಿವರನ್ನು ಜಿಲ್ಲೆಗೆ ಬರಮಾಡಿಕೊಂಡು ಎಲ್ಲ ಸಮಸ್ಯೆಗಳನ್ನು ಇತ್ಯಾರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಶಾಸಕ ಡಾ.ಮಂತರ್ಗೌಡ ಹೇಳಿದರು.
ಸುರ್ಪ್ರೀಕೋರ್ಟ್ ಆದೇಶದಂತೆ ನಿವೃತ್ತ ಕೆ.ಎ.ಎಸ್. ಅಧಿಕಾರಿ ರೇಣುಕಾಂಬ ನೇತೃತ್ವದಲ್ಲಿ ಸಮಿತಿ ರಚನೆಯಾಗಿದೆ. ಅಲ್ಲಿಂದ ಗ್ರಾಮಗಳಿಗೆ ನೋಟಿಸ್ ಜಾರಿಯಾಗುತ್ತದೆ. ಒತ್ತುವರಿಗೆ ಸಂಬಂಧಿಸಿದ ಆಸ್ತಿ ದಾಖಲೆ ಇದ್ದವರು ಸಮಿತಿಗೆ ಒದಗಿಸಬಹುದು. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೂ ಚರ್ಚಿಸಲಾಗುವುದು. ಡಿಸಿಎಫ್ ಅವರಿಂದ ಸಂಪೂರ್ಣ ಮಾಹಿತಿ ಪಡೆದುಕೊಳ್ಳುತ್ತೇನೆ. ಮಂತ್ರಿಗಳೊಂದಿಗೆ ಚರ್ಚಿಸಿ ಮುಂದಿನ ಸಭೆಯನ್ನು ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.