9 ವರ್ಷಗಳ ಬಳಿಕ ಹಳೇಬೀಡಲ್ಲಿ ಜಾತ್ರೆ ವೈಭವ

blank

ಹಳೇಬೀಡು: ಕರಿಯಮ್ಮ ಮಹಾದೇವಿ ಎಂದೇ ಪ್ರಸಿದ್ಧಿ ಪಡೆದಿರುವ ಇಲ್ಲಿನ ಗ್ರಾಮದೇವತೆ ಕಾಳಿಕಾಂಬ ಅಮ್ಮನವರ ದೇಗುಲದ ಮರು ನಿರ್ಮಾಣ ಕಾರ್ಯ ಸತತ 9 ವರ್ಷ ನಡೆದು ಇತ್ತೀಚೆಗೆ ಲೋಕಾರ್ಪಣೆಗೊಂಡಿದ್ದು, ಇದೀಗ ವಾರ್ಷಿಕ ಜಾತ್ರೆ ಆರಂಭಗೊಂಡಿದೆ.

blank

2015ರಲ್ಲಿ ಆರಂಭವಾಗಿದ್ದ ದೇಗುಲ ಜೀರ್ಣೋದ್ಧಾರ ಕಾರ್ಯವು 9 ವರ್ಷಗಳ ಕಾಲ ಮುಂದುವರಿದು ಫೆಬ್ರವರಿಯಲ್ಲಿ ಲೋಕಾರ್ಪಣೆಗೊಂಡಿದೆ. ಏ.14ರಿಂದ ಜಾತ್ರೆಯ ಪ್ರಾಥಮಿಕ ಕೈಂಕರ್ಯ ಆರಂಭವಾಗಿದ್ದು, 18ರಂದು ಸಂಪನ್ನಗೊಳ್ಳಲಿದೆ. ಮಣ್ಣಿನಿಂದ ಕಟ್ಟಲಾಗಿದ್ದ ಪ್ರಾಚೀನ ಕರಿಯಮ್ಮ ದೇಗುಲ ಶಿಥಿಲವಾಗಿದ್ದರಿಂದ ಅದನ್ನು ಕೆಡವಿ ಅಂದಾಜು 3.5 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣ ಶಿಲಾಮಯ ದೇವಸ್ಥಾನವನ್ನು ನಿರ್ಮಿಸಲಾಗಿದೆ. ಜಾತ್ರೆ ನಿಮಿತ್ತ ಹಳೇಬೀಡು ಪಟ್ಟಣವನ್ನು ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿದ್ದು, ಹಬ್ಬದ ವಾತಾವರಣ ಕಂಡುಬಂದಿದೆ.

ಸಿಡಿ ಆಚರಣೆ: ಜಾತ್ರೆಯಲ್ಲಿ ದೇವಿಗೆ ಬಹುಮುಖ್ಯವಾದ ಸೇವೆ ಎಂದರೆ ಸಿಡಿಕಂಬದ ಆಚರಣೆ. ಕರಿಯಮ್ಮನಿಗೆ ಕೆಂಡದ ಸೇವೆ ಹಾಗೂ ಉಡುಸಲಮ್ಮನಿಗೆ ಸಿಡಿ ಸೇವೆ ಎಂಬ ಗಾದೆ ಮಾತು ಈ ಭಾಗದಲ್ಲಿ ಜನಜನಿತವಾಗಿದೆ. ಪ್ರತಿ ವರ್ಷ ಚೈತ್ರ ಮಾಸದ ಮೂರನೇ ಸೋಮವಾರದಿಂದ ಜಾತ್ರೆ ಆರಂಭವಾಗಿ ಶುಕ್ರವಾರದ ಗೋಧೂಳಿ ಲಗ್ನದಲ್ಲಿ ಸಂಪನ್ನವಾಗುತ್ತದೆ. ಜಾತ್ರೆಯ ಕೊನೆಯ ದಿನವಾದ ಶುಕ್ರವಾರ ಮುಂಜಾನೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಪಲ್ಲಕ್ಕಿಯಲ್ಲಿ ಕರಿಯಮ್ಮ ದೇವಿಯನ್ನು ಉಡುಸಲಮ್ಮ ದೇವತೆಯ ಸನ್ನಿಧಾನಕ್ಕೆ ಕರೆತರಲಾಗುತ್ತದೆ. ದೇವಿಯ ಗಣಗಳಾದ ಚೋಮದೇವರ ಜತೆಗೆ ಸಂಜೆಯವರೆಗೂ ಉತ್ಸವ, ಕುಣಿತದೊಂದಿಗೆ ಮೆರೆಸಲಾಗುತ್ತದೆ. ಸಾಯಂಕಾಲ ನಾಲ್ಕು ಮೂವತ್ತಕ್ಕೆ ಸಿಡಿ ಕಂಬವನ್ನು ಮೇಲಕ್ಕೇರಿಸಿ ದೇವಿಯನ್ನು ಹೊತ್ತ ಭಕ್ತರೊಬ್ಬರನ್ನು ಮೂರು ಸುತ್ತು ತಿರುಗುತ್ತಾರೆ. ನಂತರ ಪುನಃ ಉಡುಸಲಮ್ಮ ದೇವಿಯ ಮುಂದೆ ಕರಿಯಮ್ಮನನ್ನು ಕೂರಿಸಿ ಜಾತ್ರೆಯ ಸಂಪನ್ನತೆ ಬಗ್ಗೆ ಪ್ರಸಾದ ಬೇಡಲಾಗುತ್ತದೆ. ಪ್ರಸಾದ ದೊರೆತ ಬಳಿಕ ಎರಡು ದೇವರಿಗೂ ಮಹಾಮಂಗಳಾರತಿ ನೆರವೇರಿಸಿ ಜಾತ್ರೆಗೆ ತೆರೆ ಎಳೆಯಲಾಗುತ್ತದೆ.

ಏ.16ರಂದು ದೇವಿಯನ್ನು ಬಸ್ತಿಹಳ್ಳಿಗೆ ಕರೆದೊಯ್ದು ತವರುಮನೆ ಉಡುಗೊರೆಯೊಙಂದಿಗೆ ಅರಿಶಿಣ ಹಚ್ಚಿ, ಬಳೆ ತೊಡಿಸಿ, ಮಾಂಗಲ್ಯ ಸಮರ್ಪಿಸುವ ಸಂಪ್ರದಾಯವನ್ನು ಗ್ರಾಮಸ್ಥರು ವೈಭವದಿಂದ ನೆರವೇರಿಸುತ್ತಾರೆ. ಪದ್ಧತಿಯಂತೆ ಕರಿಯಮ್ಮ ದೇವಿ ನಿತ್ಯ ಪೂಜಿಸಲ್ಪಡುತ್ತಾಳೆ. ಪ್ರತಿ ವರ್ಷ ಚೈತ್ರಮಾಸದ ಮೂರನೇ ಶುಕ್ರವಾರ ಕರಿಯಮ್ಮ ಹಾಗೂ ಉಡುಸಲಮ್ಮ ದೇವತೆಗಳ ಜಾತ್ರೆ ಗ್ರಾಮದಲ್ಲಿ ವೈಭವದಿಂದ ನಡೆಯಲಿದೆ. ಸೋಮವಾರ ದೇವಿಗೆ ಎಣ್ಣೆಮಜ್ಜನದ ಬಳಿಕ ವಿಶೇಷ ಅಲಂಕಾರ ಮಾಡಿ ಪಟ್ಟಕ್ಕೆ ಕೂರಿಸಲಾಗುತ್ತದೆ. ಮಂಗಳವಾರ ಕುಲಾಚಾರದಂತೆ ವಿಶೇಷ ಖಾದ್ಯಗಳನ್ನು ತಯಾರಿಸಿ ‘ಬಾನ’ ಎಂಬ ಶಾಸ್ತ್ರ ನಿವೇದಿಸಲಾಗುತ್ತದೆ. ಬುಧವಾರ ಬಸ್ತಿಹಳ್ಳಿ ಗ್ರಾಮಕ್ಕೆ ತೆರಳುವ ದೇವಿಯು ಅಲ್ಲಿ ತವರುಮನೆಯ ಉಪಚಾರಗಳನ್ನು ಸ್ವೀಕರಿಸಿ ಗುರುವಾರ ಮುಂಜಾನೆ ಬೀಳ್ಕೊಡುಗೆ ಪಡೆದುಕೊಂಡು ಪಲ್ಲಕ್ಕಿಯಲ್ಲಿ ಉಡುಸಲಮ್ಮ ದೇಗುಲಕ್ಕೆ ಆಗಮಿಸುತ್ತಾಳೆ. ಅಲ್ಲಿ ಪೂಜೆಯಾದ ಬಳಿಕ ಶುಕ್ರವಾರದ ಜಾತ್ರೆಗೆ ಸಿಡಿ ಕಂಬ ಏರಿಸಿ ದೇವಿಯನ್ನು ಸ್ವಸ್ಥಾನಕ್ಕೆ ಕರೆತರಲಾಗುತ್ತದೆ.

ಕರಿಯಮ್ಮನ ಸಹೋದರಿಯೇ ಉಡುಸಲಮ್ಮ: ಗ್ರಾಮದೇವತೆ ಕಾಳಿಕಾಂಬ ಅಥವಾ ಕರಿಯಮ್ಮ ದೇವಿಯ ಸಹೋದರಿಯೇ ಉಡುಸಲಮ್ಮ ಎಂಬ ಪ್ರತೀತಿ ಜನಪದದಲ್ಲಿ ಹಾಸುಹೊಕ್ಕಾಗಿದ್ದು, ಸಂಹಾರ ರೂಪಿಣಿ ದುರ್ಗಿಯ ಅವತಾರದಲ್ಲಿದ್ದರೂ ಶಾಂತ ಸ್ವಭಾವದ ವರಪ್ರದಾಯಕ ದೇವಿ ಎಂಬ ನಂಬಿಕೆ ಭಕ್ತರಲ್ಲಿದೆ. ಆದ್ದರಿಂದಲೇ ಪ್ರತಿ ಮಂಗಳವಾರ ಮತ್ತು ಶುಕ್ರವಾರ ದೇಗುಲಕ್ಕೆ ಭೇಟಿ ನೀಡುವ ಭಕ್ತರು ಮೊಸರನ್ನ ನೈವೇದ್ಯ ಸೇವೆಯನ್ನು ವಿಶೇಷವಾಗಿ ಸಲ್ಲಿಸುತ್ತಾರೆ. ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಿಡುಬು ಅಥವಾ ಅಮ್ಮ ಎನ್ನಲಾಗುವ ಕಾಯಿಲೆಯನ್ನು ಹೋಗಲಾಡಿಸಲು ದೇವಿಯ ಬಳಿ ಪ್ರಾರ್ಥಿಸಿಕೊಳ್ಳುವುದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಚರ್ಮರೋಗದಿಂದ ಜ್ವರವು ಉಲ್ಬಣಿಸಿದಾಗ ವೈದ್ಯರು ನೀಡುವ ಔಷಧ ಜತೆಗೆ, ದೇವಿಗೆ ಬೇವಿನಸೊಪ್ಪು ಅರ್ಪಿಸಿ ಅದನ್ನೇ ಪ್ರಸಾದರೂಪದಲ್ಲಿ ಸ್ವೀಕರಿಸಿ ಅದರ ರಸವನ್ನು ಮಕ್ಕಳ ಶರೀರಕ್ಕೆ ಲೇಪಿಸಿ ಗುಣಮುಖವಾಗಲು ಕೋರಿಕೊಳ್ಳುವುದು ವಾಡಿಕೆ.

ಹೊಸ ಸಿಡಿ ಕಂಬ: ಅನೇಕ ವರ್ಷಗಳಿಂದ ಬಳಕೆಯಲ್ಲಿದ್ದ ಸಿಡಿ ಕಂಬ ಶಿಥಿಲವಾಗಿದ್ದರಿಂದ ಈ ಬಾರಿ ಜಾತ್ರೆಗಾಗಿ ಹೊಸ ಸಿಡಿ ಕಂಬ ತಯಾರಿಸಲಾಗಿದೆ. 18 ಅಡಿ ಉದ್ದ ಹಾಗೂ 3 ಅಡಿ ವ್ಯಾಸದ ಕಂಬದ ರಚನೆಗೆ ನೇರಳೆಮರ ಬಳಸಲಾಗಿದೆ. ಸತತ ಎರಡು ತಿಂಗಳು ಮರಗೆಲಸ ನಡೆಸಿ ಕಂಬಕ್ಕೆ ಸಾಂಪ್ರದಾಯಿಕ ರೂಪ ನೀಡಲಾಗಿದೆ. ಕಂಬದ ಜತೆಗೆ ತಿರುಗಣಿಯನ್ನೂ ಹೊಸದಾಗಿ ನಿರ್ಮಿಸಲಾಗಿದ್ದು, ಜಾತ್ರೆಯ ಪ್ರಯುಕ್ತ 15 ದಿನಗಳ ಹಿಂದೆ ವಿಶ್ವಕರ್ಮ ಆಚಾರ್ಯರು ಪೂಜೆ ನೆರವೇರಿಸಿ ದೇಗುಲಕ್ಕೆ ಹಸ್ತಾಂತರಿಸಿದ್ದಾರೆ. ಗುರುವಾರ ಮಧ್ಯಾಹ್ನದ ಬಳಿಕ ಸಿಡಿ ಕಂಬವನ್ನು ಉಡುಸಲಮ್ಮ ದೇಗುಲ ಮುಂಭಾಗದ ಜಾತ್ರಾ ಮೈದಾನಕ್ಕೆ ತಂದು ಪ್ರತಿಷ್ಠಾಪಿಸಲಾಗುತ್ತದೆ.

ದೇಗುಲ ಮರು ರ್ನಿಮಾಣ ಬಳಿಕ ನಡೆಯುತ್ತಿರುವ ಮೊದಲ ಜಾತ್ರೆ ಇದಾಗಿದ್ದು, ಭಕ್ತರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ. ಜಾತ್ರಾ ಮಹೋತ್ಸವದ ಯಶಸ್ಸಿಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದೇವೆ. ಕರಿಯಮ್ಮ ದೇಗುಲ ಆವರಣದಲ್ಲಿ ಶಿಥಿಲವಾಗಿದ್ದ ಗಣಪತಿ ಹಾಗೂ ಆಂಜನೇಯ ದೇಗುಲವನ್ನೂ ಮರು ರ್ನಿಮಿಸಲಾಗಿದ್ದು, ಪೂಜೆ ನಡೆಯುತ್ತಿದೆ.
> ಎಚ್.ಎಂ. ಕುಮಾರಸ್ವಾಮಿ ದೇಗುಲ ಸಮಿತಿ ನಿರ್ದೇಶಕ, ಹಳೇಬೀಡು
 
ಕರಿಯಮ್ಮ ದೇವಿ ಕಾಳಿಯ ಸ್ವರೂಪವಾದರೆ ಉಡುಸಲಮ್ಮ ಸೌಮ್ಯ ರೂಪದವಳೆಂಬ ಪ್ರತೀತಿ ಇದೆ. ಅದರಂತೆ ಕುಲಾಚಾರವನ್ನು ಬಿಡದೆ ಸಂಪ್ರದಾಯವನ್ನು ಪಾಲಿಸಿಕೊಂಡು ಪೂಜೆ ನಡೆಸುತ್ತಿದ್ದೇವೆ. ಸೋಮವಾರ, ಮಂಗಳವಾರ, ಶುಕ್ರವಾರ ಮತ್ತು ಪ್ರತಿ ಮಾಸದ ಹುಣ್ಣಿಮೆಯಂದು ವಿಶೇಷ ಪೂಜೆ ನೆರವೇರಲಿದೆ.
> ಕಾರ್ತಿಕ್ ಅರ್ಚಕ, ಕರಿಯಮ್ಮ ದೇವಸ್ಥಾನ, ಹಳೇಬೀಡು

ಉಡುಸಲಮ್ಮ ದೇವಿ ಸೌಮ್ಯ ಸ್ವರೂಪಳಾಗಿದ್ದು ಅದಕ್ಕೆ ತಕ್ಕ ಹಾಗೆ ಕುಲಾಚಾರವನ್ನು ಬಿಡದೆ ಸಂಪ್ರದಾಯವನ್ನು ಪಾಲಿಸಿಕೊಂಡು ಪೂಜೆ ನಡೆಸುತ್ತಿದ್ದೇವೆ. ಸೋಮವಾರ, ಮಂಗಳವಾರ, ಶುಕ್ರವಾರ ವಿಶೇಷ ಪೂಜೆಗಳು ಜರುಗುತ್ತವೆ. ಪ್ರತಿ ವರ್ಷ ಚೈತ್ರ ಮಾಸದ ಮೂರನೇ ಶುಕ್ರವಾರ ಜಾತ್ರೆ ಪ್ರಯುಕ್ತ ಸಿಡಿ ಸೇವೆ ನಡೆಯುತ್ತದೆ.
> ಗಣೇಶ ಅರ್ಚಕ, ಉಡುಸಲಮ್ಮ ದೇವಸ್ಥಾನ, ಹಳೇಬೀಡು

ಪ್ರಾಚೀನ ಕಾಲದಲ್ಲಿ ಮಣ್ಣಿನಿಂದ ನಿರ್ಮಿಸಿದ್ದ ದೇಗುಲ ಶಿಥಿಲವಾಗಿ ಬೀಳುವ ಹಂತವನ್ನು ತಲುಪಿತ್ತು. ಇದನ್ನು ಮನಗಂಡ ಸುತ್ತಲಿನ ಗ್ರಾಮಸ್ಥರು ನೂತನ ಶಿಲಾ ದೇಗುಲವನ್ನು ನಿರ್ಮಿಸಲು ಮುಂದಾಗಿ ಉದಾರ ದೇಣಿಗೆಯನ್ನು ನೀಡಿದ ಪರಿಣಾಮ ದೇಗುಲ ಲೋಕಾರ್ಪಣೆಗೊಂಡಿದೆ. ದೇಶ, ರಾಜ್ಯ ಹಾಗೂ ಗ್ರಾಮದ ಸುಭಿಕ್ಷಕ್ಕಾಗಿ 9 ವರ್ಷದ ಬಳಿಕ ಜಾತ್ರೆಯನ್ನು ಅತ್ಯಂತ ಶಿಸ್ತಿನಿಂದ ಆಯೋಜಿಸಲಾಗುತ್ತಿದೆ.
> ಬಿ.ಸಿ.ತುಕಾರಾಮ್ ರಾವ್ ಅಧ್ಯಕ್ಷ, ಕರಿಯಮ್ಮ ದೇಗುಲ ನಿರ್ಮಾಣ ಸಮಿತಿ

 

Share This Article

ಒಣಗಿದ ಮಾವು, ಪೇರಲ ಮತ್ತು ಹಲಸಿನ ಎಲೆಗಳಿಗೆ ಹೆಚ್ಚಿದ ಬೇಡಿಕೆ! ಒಂದು ಪ್ಯಾಕೆಟ್ ಬೆಲೆ 500 ರೂ. dried mango leaves

dried mango leaves : ಹಿಂದೂ ಧರ್ಮದಲ್ಲಿ ಮಾವಿನ ಎಲೆಗಳಿಗೆ ವಿಶೇಷ ಸ್ಥಾನವಿದೆ. ಶುಭ ಸಮಾರಂಭಗಳು…

ಈ ಜ್ಯೂಸ್ ಕುಡಿದರೆ ಸಾಕು.. ತೂಕ ಇಳಿಸಿಕೊಳ್ಳಲು ಬೆವರು ಸುರಿಸಿ ಕಷ್ಟಪಡುವ ಅಗತ್ಯವಿಲ್ಲ! juice

juice: ತೂಕ ಇಳಿಸಿಕೊಳ್ಳಲು ಜನರು ಅನೇಕ ಪ್ರಯತ್ನಗಳನ್ನು ಮಾಡುತ್ತಾರೆ. ಅವರು ಜಿಮ್‌ನಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಾರೆ,…

ಪ್ರತಿದಿನ ಸ್ನಾನ ಮಾಡುವ ಮೊದಲು ಇವುಗಳನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ.. ಆಗ ನಿಮ್ಮ ಮುಖ ಖಂಡಿತವಾಗಿಯೂ ಸುಂದರವಾಗಿ ಹೊಳೆಯುತ್ತದೆ! Beauty Tips

Beauty Tips : ಮಹಿಳೆಯರು ಸಾಮಾನ್ಯವಾಗಿ ಸುಂದರವಾಗಿ ಕಾಣಲು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಕ್ರೀಮ್‌ಗಳನ್ನು ಬಳಸುತ್ತಾರೆ.…