ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಕರ್ನಾಟಕದಲ್ಲಿ ಹುಟ್ಟಿ, ಸ್ಯಾಂಡಲ್ವುಡ್ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿ, ನಂತರ ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಿಂಚಿರುವ ನಟ ಚರಣ್ ರಾಜ್. ಕನ್ನಡದಲ್ಲಿ ನೂರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಅವರು ತಮಿಳು, ತೆಲುಗಿನಲ್ಲಿ ತಲಾ 50 ಪ್ಲಸ್ ಹಾಗೂ ಹಿಂದಿಯಲ್ಲಿ 10ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಮಿಂಚಿದ್ದಾರೆ. ಮಾತ್ರವಲ್ಲದೇ ತಮಿಳಿನಲ್ಲಿ ಎರಡು, ತೆಲುಗಿನಲ್ಲಿ ಒಂದು ಚಿತ್ರ ನಿರ್ದೇಶಿಸಿದ್ದಾರೆ. ಇಂತಹ ಚರಣ್ ರಾಜ್ ಇದೀಗ ಕನ್ನಡದಲ್ಲಿ ಆ್ಯಕ್ಷನ್-ಕಟ್ ಹೇಳಲು ಸಿದ್ಧತೆ ನಡೆಸುತ್ತಿದ್ದಾರೆ. ಹೆಸರು “ಕರುನಾಡ ಕಣ್ಮಣಿ’.
ಇದೇ ಮಾರ್ಚ್ನಲ್ಲಿ ಚಿತ್ರದ ಶೂಟಿಂಗ್ ಆರಂಭವಾಗಲಿದ್ದು, ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಮೂಡಿಬರಲಿದೆ. ವಿಶೇಷ ಅಂದರೆ ಚರಣ್ ದ್ವೀತಿಯ ಪುತ್ರ ದೇವ್, ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರ ಜತೆ ಕಿಶೋರ್ ಕುಮಾರ್ ಕೂಡ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಕರುನಾಡ ಕಣ್ಮಣಿ’ಗೆ ಸಾಗರ್ ಗುರುರಾಜ್ ಸಂಗೀತ, ಪೃಥ್ವಿ ಛಾಯಾಗ್ರಹಣವಿರಲಿದೆ. ಸದ್ಯ ತಾರಾಗಣದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.
ಚಿತ್ರದ ಬಗ್ಗೆ ಚರಣ್ ರಾಜ್, “”ಕರುನಾಡ ಕಣ್ಮಣಿ’ ಮರ್ಡರ್ ಮಿಸ್ಟರಿ ಜಾನರ್ ಸಿನಿಮಾ. ನಾನೇ ಚಿತ್ರಕಥೆ ಬರೆದು ನಿರ್ದೇಶಿಸುತ್ತಿದ್ದೇನೆ. ಚಿತ್ರದ ಬಹುತೇಕ ಚಿತ್ರೀಕರಣ ಕಾಲೇಜ್ನಲ್ಲಿ ನಡೆಯಲಿದ್ದು, ಕಾಲೇಜ್ ಪರೀೆಗಳು ಮುಗಿದು ರಜೆ ಪ್ರಾರಂಭವಾದ ತಕ್ಷಣ ಶೂಟಿಂಗ್ ಪ್ರಾರಂಭಿಸಲಿದ್ದೇವೆ. ಕನ್ನಡ ಭಾಗದ ಶೂಟಿಂಗ್ ಬೆಂಗಳೂರಿನಲ್ಲಿ, ತಮಿಳು ವರ್ಷನ್ ಪಾಂಡಿಚೆರಿ ಮತ್ತು ಕಡಲೂರಿನಲ್ಲಿ ಹಾಗೂ ಹೊಂಗನೂರಿನಲ್ಲಿ ತೆಲುಗು ಭಾಷೆಯ ಚಿತ್ರೀಕರಣ ನಡೆಸಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ.