ಚಿಕ್ಕಬಳ್ಳಾಪುರ: ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ವತಿಯಿಂದ ಕೈಗೊಂಡಿರುವ 21 ನೇ ಜಾನುವಾರು ಗಣತಿ ಕಾರ್ಯಕ್ರಮದಡಿ ಕರ್ನಾಟಕದಲ್ಲಿ ಶೇ.35 ರಷ್ಟು ಸಾಧನೆಯನ್ನು ತೋರಲಾಗಿದೆ.
ರಾಜ್ಯದಲ್ಲಿ ಜಾನುವಾರು ಗಣತಿಗಾಗಿ ನಗರ ಪಟ್ಟಣ ಪ್ರದೇಶದ ವಾರ್ಡ್ ಗಳ ಜತೆಗೆ 36,426 ಗ್ರಾಮಗಳನ್ನು ಗುರುತಿಸಲಾಗಿದೆ. ಸರ್ವೇಗೆ 4868 ಗಣತಿದಾರರನ್ನು ಹಾಗೂ 725 ಮೇಲ್ವಿಚಾರಕ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ದೇಶದಲ್ಲಿ ಕಳೆದ ಅ.25 ರಿಂದ ಗಣತಿ ಕಾರ್ಯ ನಡೆಯುತ್ತಿದೆ. ದೇಶದ ಜಿಡಿಪಿಗೆ ಶೇ.3.6 ರಷ್ಟು ಕೊಡುಗೆ ಜಾನುವಾರು ಉತ್ಪನ್ನಗಳಿಂದ ಸಿಗುತ್ತಿದೆ. ಕರ್ನಾಟಕ ವು ದೇಶದಲ್ಲಿ ಹಾಲು ಉತ್ಪಾದನೆಯಲ್ಲಿ 8 ನೇ ಸ್ಥಾನ, ಮೊಟ್ಟೆ ಉತ್ಪಾದನೆಯಲ್ಲಿ 5 ನೇ ಸ್ಥಾನ ಹಾಗೂ ಮಾಂಸ ಉತ್ಪಾದನೆಯಲ್ಲಿ 9ನೇ ಸ್ಥಾನದಲ್ಲಿದೆ. ಇನ್ನು ಗಣತಿಯಿಂದ ಸರ್ಕಾರವು ಮುಂಬರುವ ಯೋಜನೆಗಳನ್ನು ಸಿದ್ಧಪಡಿಸುವುದು ಮುಖ್ಯ ಉದ್ದೇಶ, ರೈತರು ಹಾಗೂ ಹೈನುಗಾರಿಕೆ ಕ್ಷೇತ್ರಗಳಿಗೆ ಬೇಕಾದ ನೀತಿ ನಿಯಮಗಳನ್ನು ನಿರೂಪಿಸಲಾಗುತ್ತದೆ.
*20 ಗಣತಿ ಮುಕ್ತಾಯ*
1919 ರಿಂದಲೂ ಜಾನುವಾರು ಗಣತಿ ನಡೆಯುತ್ತಾ ಬಂದಿದ್ದು ಕಳೆದ 100 ವರ್ಷಗಳಲ್ಲಿ 20 ಗಣತಿ ಮುಗಿದಿದೆ. ಈಗ 21 ನೇ ಸರ್ವೇ ಕಾಯ ನಡೆಯುತ್ತಿದೆ. ನಗರ ಭಾಗದಲ್ಲಿ 6000 ಮನೆಗೊಬ್ಬ ಗಣತಿದಾರ ಇದ್ದರೆ, ಗ್ರಾಮೀಣ ಭಾಗದಲ್ಲಿ 4500 ಮನೆಗಳಿಗೊಬ್ಬ ಗಣತಿದಾರರನ್ನು ನಿಯೋಜಿಸಲಾಗಿದೆ. ಎಲ್ಲ ಮನೆಗಳಿಗೆ ಗಣತಿದಾರರು ಭೇಟಿ ನೀಡಿ, ಮಾಹಿತಿ ಪಡೆಯುತ್ತಿದ್ದಾರೆ. ಇದಕ್ಕೆ ಜನರು ಜಾನುವಾರುಗಳ ನಿಖರ ಮಾಹಿತಿಯನ್ನು ತಿಳಿಸಿ, ಗಣತಿಯನ್ನು ಯಶಸ್ವಿಗೊಳಿಸಬೇಕು ಎಂದು ಪಶು ವೈದ್ಯ ಮತ್ತು ಪಶುಪಾಲನಾ ಇಲಾಖೆ ಮನವಿ ಮಾಡಿದೆ.
*ಮಾಹಿತಿ ಸಂಗ್ರಹ*
ತಳಿಯ ಜಾನುವಾರುಗಳು ಎಷ್ಟು? ವಯಸ್ಸು, ರೈತರ ಸಂಖ್ಯೆ, ಯಾವ ವರ್ಗದ ರೈತರು, ಎಷ್ಟು ಮಂದಿ ಮಹಿಳೆಯರು ಇದ್ದಾರೆ ಎನ್ನುವುದು ಸೇರಿದಂತೆ ಇತರ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಮನೆಗಳಲ್ಲಿ ಸಾಕಲಾಗುವ ದನ, ಎತ್ತು ಎಮ್ಮೆ, ಕೋಣ, ಆಡು, ಕುರಿ, ಕೋಳಿ, ನಾಯಿ, ಕುದುರೆ, ಎಮು ಹಾಗೂ ಆಸ್ಟ್ರಿಚ್ ಹಕ್ಕಿಗಳ ಮಾಹಿತಿಯನ್ನು ಪಡೆಯುಲಾಗುತ್ತದೆ. ಬೀಡಾಡಿ ದನ, ನಾಯಿಗಳ ಮಾಹಿತಿಯನ್ನೂ ಸೇರಿಸಲಾಗುತ್ತದೆ.