ಹುಬ್ಬಳ್ಳಿ: ವರ್ಷವಿಡೀ ಅಧ್ಯಯನದಲ್ಲಿ ತೊಡಗಿರುವ ಮಕ್ಕಳಿಗೆ ಪರೀಕ್ಷೆ ನಂತರ ಬೇಸಿಗೆ ರಜೆಯಲ್ಲಿ ಪಾಲಕರು ಯಾವುದಾದರೂ ಒಂದು ಕಲೆಯಲ್ಲಿ ತರಬೇತಿ ಕೊಡಿಸುವುದು ಅಗತ್ಯ ಎಂದು ಪ್ರಸಿದ್ಧ ನಟ, ನಿರ್ದೇಶಕ ಯಶವಂತ ಸರದೇಶಪಾಂಡೆ ಹೇಳಿದರು.
ಇಲ್ಲಿಯ ಲಕ್ಷ್ಮಣರಾವ್ ಪೈಕೋಟಿ ಲ್ಯಾಮಿಂಗಟನ್ ಶಾಲೆಯಲ್ಲಿ ಅಭಿನಯ ಲೋಕ ಏರ್ಪಡಿಸಿರುವ ಮಕ್ಕಳ ಅಭಿನಯ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಜೆಯಲ್ಲಿ ಮಕ್ಕಳು ಇಂಥ ಶಿಬಿರಗಳ ಪ್ರಯೋಜನ ಪಡೆಯಬೇಕು. ನಾಟಕಗಳಲ್ಲಿ ಪಾತ್ರ ಮಾಡುವ ಅವಕಾಶ ಒಮ್ಮೆ ಮಾತ್ರ ಸಿಗುವುದು. ಆಗ ಪಾತ್ರ ಸಣ್ಣದೇ ಇರಲಿ, ದೊಡ್ಡದೇ ಇರಲಿ, ಪ್ರಾಮಾಣಿಕವಾಗಿ ನಟಿಸಬೇಕು ಎಂದರು.
ಎನ್ಎಲ್ಇ ಸೊಸೈಟಿ ಜಂಟಿ ಕಾರ್ಯದರ್ಶಿ ಸದಾನಂದ ಕಾಮತ ಮಾತನಾಡಿ, ಮೊಬೈಲ್, ಟಿವಿಗಳಲ್ಲಿ ಮುಳುಗಿ ಕಾಲ ಕಳೆಯದೇ ನಾಟಕ ತರಬೇತಿ ಪಡೆಯಲು ಬಂದಿರುವ ಮಕ್ಕಳು ಮತ್ತು ಅವರಿಗೆ ಈ ಅವಕಾಶ ಒದಗಿಸಿಕೊಟ್ಟಿರುವ ಪಾಲಕರು ಅಭಿನಂದನಾರ್ಹರು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯೋಪಾಧ್ಯಾಯಿನಿ ಸೌಮ್ಯ ಪ್ರಭು, ಶಾಲಾ ದಿನಗಳಲ್ಲೇ ಮಕ್ಕಳಿಗೆ ಸಂಗೀತ, ಚಿತ್ರಕಲೆ, ನತ್ಯ, ನಾಟಕ ಮೊದಲಾದ ಕಲೆಗಳಲ್ಲಿ ತರಬೇತಿ ಕೊಡಿಸಿದರೆ ಅವರಿಗೆ ಯಾವುದರಲ್ಲಿ ಆಸಕ್ತಿ ಇದೆ ಎಂಬುದು ಗೊತ್ತಾಗುತ್ತದೆ ಎಂದರು.
ಮಕ್ಕಳಿಗೆ ಮೇಕಪ್ ಪಾಠ ಹೇಳಿ, ಮೇಕಪ್ ಮಾಡಿದ ಪ್ರಸಾಧನ ಕಲಾವಿದ ಸಂತೋಷ ಮಹಾಲೆ ಅವರನ್ನು ಸನ್ಮಾನಿಸಲಾಯಿತು.
ಶಿಬಿರದ ನಿರ್ದೇಶಕ ವಿಶ್ವನಾಥ ಕುಲಕರ್ಣಿ ಸ್ವಾಗತಿಸಿದರು. ಎನ್ಎಲ್ಇ ಸೊಸೈಟಿ ಸದಸ್ಯ ಗುರುರಾಜ ಕೌಜಲಗಿ ನಿರೂಪಿಸಿದರು. ಅರುಣ ಪ್ರಭು, ನತ್ಯ ಕಲಾವಿದೆ ಸಾರಿಕಾ ಅವರಾದಿ ಅತಿಥಿಗಳನ್ನು ಸತ್ಕರಿಸಿದರು. ರಂಗಕರ್ಮಿ ಫಕ್ಕಿರೇಶ ಬಡಿಗೇರ ವಂದಿಸಿದರು.