ಹೊಸನಗರ: ಶಾಲಾ ಗೇಟ್ ಪ್ರವೇಶಿಸುತ್ತಿದ್ದಂತೆ ಹಲಸಿನದ್ದೇ ಘಮ ಘಮ. ಕಾರಿಡಾರ್ನತ್ತ ದೃಷ್ಟಿ ಹಾಯಿಸುತ್ತಿದ್ದಂತೆ ಪುಟ್ಟ ಮಕ್ಕಳು ಅವರ ಮುಂದಿನ ಟೇಬಲ್ನಲ್ಲಿ ವ್ಯಾಪಾರಕ್ಕಿಟ್ಟಂತೆ ಕಾಣುವ ಬರ್ಫಿ, ಹಲ್ವಾ, ಕಡುಬು, ಹೋಳಿಗೆ, ತರಹೇವಾರಿ ಖಾದ್ಯಗಳು… ಎಲ್ಲವೂ ಹಲಸು ಹಣ್ಣಿನದ್ದೇ.
ಹೌದು, ಇದು ಪಟ್ಟಣ ಸಮೀಪದ ದ್ಯಾವರ್ಸಾದ ಶ್ರೀ ಗುರೂಜೀ ಇಂಟರ್ನ್ಯಾಷನಲ್ ಸ್ಕೂಲ್ನ ಆವರಣದಲ್ಲಿ ಕಂಡುಬಂದ ದೃಶ್ಯ. ಹಲಸಿನ ಹಬ್ಬ ಆಚರಿಸುವ ಮೂಲಕ ಮಕ್ಕಳಿಗೆ ಹಲಸಿನ ಬಗ್ಗೆ ಅರಿವು ಮತ್ತು ವ್ಯಾಪಾರ ವಹಿವಾಟಿನ ಜ್ಞಾನ ವೃದ್ಧಿಯಾಗುವಂತೆ ಮಾಡುವ ಕಾರ್ಯಕ್ರಮ ಇದಾಗಿತ್ತು.
30ಕ್ಕೂ ಹೆಚ್ಚು ಹಲಸಿನ ಖಾದ್ಯಗಳು ಒಂದಕ್ಕಿಂತ ಇನ್ನೊಂದು ರುಚಿ ಎನ್ನುವಷ್ಟು ಚೆನ್ನಾಗಿತ್ತು. ಹಾಗಂತ ಇಲ್ಲಿ ಯಾವುದೂ ಉಚಿತ ಇರಲಿಲ್ಲ. ಮಕ್ಕಳೇ ತಯಾರಿಸಿ ತಂದು, ಅದಕ್ಕೊಂದು ದರ ನಿಗದಿ ಮಾಡಿ ವ್ಯಾಪಾರ ಮಾಡಿದರು. 5 ರೂ.ನಿಂದ 25 ರೂ.ವರೆಗಿನ ಹಲಸಿನ ತಿನಿಸುಗಳು ಮಾರಾಟವಾದವು.
ಕಾರ್ಯಕ್ರಮಕ್ಕೆ ಹಾಜಬ್ಬ ಮೆರುಗು: ಹಲಸಿನ ಹಬ್ಬಕ್ಕೆ ಮೆರುಗು ತಂದಿದ್ದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಜಬ್ಬ. ಖುದ್ದು ಕಾರ್ಯಕ್ರಮಕ್ಕೆ ಆಗಮಿಸಿ ಹಲಸು ಉತ್ಕೃಷ್ಟ ಆಹಾರ, ಅದನ್ನು ತಿಂದೇ ನಮ್ಮ ದೇಹ ಗಟ್ಟಿಮುಟ್ಟಾಗಿರೋದು. ಎಷ್ಟೋ ಬಡ ಕುಟುಂಬಗಳ ಬಡತನದ ಹಸಿವನ್ನು ನೀಗಿಸಿದ ಮಹತ್ವದ ಸ್ಥಾನ ಹಲಸಿಗಿದೆ. ಹಲಸನ್ನು ಮತ್ತೆ ಆಹಾರ ಪದ್ಧತಿಯಾಗಿ ಕಂಡುಕೊಳ್ಳುವ ದಿನ ಬಂದಿದೆ ಎಂದು ಹಾಜಪ್ಪ ಹೇಳಿದರು.
58 ಬಗೆಯ ಖಾದ್ಯಗಳು: 198 ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲೇ ತಯಾರಿಸಿ ತಂದ 58 ಬಗೆಯ ಖಾದ್ಯಗಳನ್ನು ಮೇಳದಲ್ಲಿಡಲಾಗಿತ್ತು. ಹಲಸಿನ ಹಣ್ಣಿನ ಶರಬತ್ತಿನಿಂದ ಹಿಡಿದು ಹಲಸಿನ ಕೇಕ್ವರೆಗಿನ ಆಧುನಿಕ ತಿನಿಸುಗಳನ್ನು ಮೀರಿಸುವಂಥ ತಿಂಡಿಗಳು ಅಲ್ಲಿದ್ದವು. ಮೇಳ ಮುಗಿಯುವಷ್ಟರಲ್ಲಿ ತಿಂಡಿ ತಿನಿಸು ಖಾಲಿಯಾಗಿದ್ದವು.