ಸಿದ್ದಾಪುರ: ರಾಜ್ಯ ಕಾಂಗ್ರೆಸ್ ಸರ್ಕಾರದ ದುರಾಡಳಿತ, ಬಸ್ ಪ್ರಯಾಣ ದರ ಏರಿಕೆ, ಗುತ್ತಿಗೆದಾರರ ಮತ್ತು ಅಧಿಕಾರಿಗಳ ಆತ್ಮಹತ್ಯೆಯನ್ನು ತಾಲೂಕು ಬಿಜೆಪಿ ಖಂಡಿಸಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ನಂತರ ತಹಸೀಲ್ದಾರ್ ಅವರ ಮೂಲಕ ರಾಜ್ಯಪಾಲರಿಗೆ ಸೋಮವಾರ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಡಿದ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ತಿಮ್ಮಪ್ಪ ಎಂ.ಕೆ., ಗ್ಯಾರಂಟಿ ಯೋಜನೆಯನ್ನು ಸಮರ್ಪಕವಾಗಿ ನಿಭಾಯಿಸಲಾಗದ ರಾಜ್ಯ ಸರ್ಕಾರ ಈಗ ಬಸ್ ದರವದರವನ್ನು ಶೇ.15ರಷ್ಟು ಏರಿಕೆ ಮಾಡಿ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಮುಂದಾಗಿದೆ. ಆರಂಭದಲ್ಲಿ ಕಾಂಗ್ರೆಸ್ ಸರ್ಕಾರ ಒಂದು ಕೈಯಿಂದ ಕೊಟ್ಟು ಒಂದು ಕೈಯಿಂದ ಕಸಿದು ಕೊಳ್ಳುತ್ತಿತ್ತು. ಆದರೆ ಈಗ ಎರಡೂ ಕೈಯಿಂದ ಕಸಿದುಕೊಳ್ಳುವಂತಹ ಕೆಲಸ ಮಾಡುತ್ತಿದೆ.
ಗುತ್ತಿಗೆದಾರರ ಸರಣಿ ಸಾವಾಗುತ್ತಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆರೋಪಿಸಿದರು.
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳು ಒತ್ತಡದಿಂದ ಕೆಲಸ ಮಾಡುತ್ತಿದ್ದು, ಈಗಾಗಲೇ ಕೆಲವರು ಒತ್ತಡ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆಡಳಿತದ ಚುಕ್ಕಾಣಿ ಹಿಡಿದವರು ಉದ್ದಟತನದಿಂದ ವರ್ತಿಸುತ್ತಿರುವುದು ಬೇಸರದ ಸಂಗತಿ ಎಂದರು.
ಜಿಲ್ಲಾ ಬಿಜೆಪಿ ಎಸ್. ಸಿ. ಮೋರ್ಚಾದ ಜಿಲ್ಲಾಧ್ಯಕ್ಷ ನಂದನ್ ಬೋರ್ಕರ್, ಪ್ರಮುಖರಾದ ಗುರುರಾಜ ಶಾನಭಾಗ, ಮಾರುತಿ ಟಿ.ನಾಯ್ಕ ಕಾನಗೋಡ ಮಾತನಾಡಿದರು.
ಸಿದ್ದಾಪುರ ಮಂಡಲ ಬಿಜೆಪಿ ವತಿಯಿಂದ ರಾಜ್ಯ ಸರ್ಕಾರಕ್ಕೆ ಬಸ್ ದರಏರಿಕೆ ಹಿಂಪಡೆಯುವಂತೆ ಸೂಚಿಸಬೇಕು ಮತ್ತು ದುರಾಡಳಿತ, ಭ್ರಷ್ಟಾಚಾರದ ಬಗ್ಗೆ ಎಚ್ಚರಿಕೆಕೊಡಬೇಕು ಎಂಬ ಮನವಿಯನ್ನು ಉಪತಹಸೀಲ್ದಾರ ಜಿ.ಎಲ್.ಶಾಮಸುಂದರ ಅವರ ಮೂಲಕ ರಾಜ್ಯಪಾಲರಿಗೆ ನೀಡಲಾಯಿತು.
ಪಪಂ ಸದಸ್ಯ ರವಿಕುಮಾರ ನಾಯ್ಕ, ಎಸ್. ಕೆ. ಮೇಸ್ತ, ತೋಟಪ್ಪ ನಾಯ್ಕ , ಕೃ?್ಣಮೂರ್ತಿ ಕಡಕೇರಿ, ಮಂಜುನಾಥ ಭಟ್ಟ, ವಿಜಯ ಹೆಗಡೆ, ರಾಘವೇಂದ್ರ ಶಾಸ್ತಿ›, ಸುಮನಾ ಕಾಮತ್, ರಾಧಿಕಾ ಕಾನಗೋಡ,ಅಣ್ಣಪ್ಪ ನಾಯ್ಕ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸರ್ಕಾರದ ಧೋರಣೆ ನೋಡಿದರೆ ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಸಿದುಕೊಂಡಂತಿದೆ. ಹೊರಗಡೆ ಓಡಾಡಿ ಮನೆಯ ವ್ಯವಹಾರ ಮಾಡುವವರು ಗಂಡಸರು. ಅವರಿಗೆ ನಿತ್ಯ ಓಡಾಟ ಇರುತ್ತದೆ. ಆದರೆ ನಿತ್ಯ ಪ್ರಯಾಣ ಮಾಡುವವರಿಗೆ ರಿಯಾಯತಿ ನೀಡುವ ಬದಲು ಮನೆಯಲ್ಲಿರುವ ಮಹಿಳೆಯರು ಓಡಾಡುವಂತೆ ರಾಜ್ಯ ಸರ್ಕಾರ ಮಾಡಿ ಕುಟುಂಬಂದ ವ್ಯವಸ್ಥೆಯನ್ನೇ ಹದಗೆಡಿಸಿದೆ. ಈಗ ಶೇ.15ರಷ್ಟು ಪ್ರಯಾಣ ದರ ಏರಿಕೆ ಮಾಡಿದ್ದು ಗಾಯದ ಮೇಲೆ ಬರೆ ಎಳೆದಂತಾಗಿದೆ.
| ಗಣಪತಿ ಹೆಗಡೆ ಗುಂಜಗೋಡ, ಬಸ್ ಪ್ರಯಾಣಿಕ ಸಿದ್ದಾಪುರ