ತಿರುಗೇಟಿನ ತವಕದಲ್ಲಿ ಟೀಮ್​ ಇಂಡಿಯಾ: ಇಂದಿನಿಂದ ಆಂಗ್ಲರ ಎದುರು ಎರಡನೇ ಟೆಸ್ಟ್​, ಗಿಲ್​ ಪಡೆ 11ರ ಬಳಗದ ಕುತೂಹಲ

blank

ರ್ಬಮಿಂಗ್​ಹ್ಯಾಂ: ಯುವ ತಂಡದೊಂದಿಗೆ ಇಂಗ್ಲೆಂಡ್​ ನೆಲದಲ್ಲಿ ಹೊಸ ಅಧ್ಯಾಯ ಆರಂಭಿಸಿರುವ ಭಾರತ ತಂಡ ಲೀಡ್ಸ್​ನಲ್ಲಿ ಮೊದಲ 4 ದಿನ ಮೇಲುಗೈ ಸಾಧಿಸಿದರೂ, ಕೊನೇ ದಿನದ ನೀರಸ ಬೌಲಿಂಗ್​ನಿಂದಾಗಿ ಸೋಲು ಕಂಡಿತ್ತು. ಜತೆಗೆ ಫೀಲ್ಡಿಂಗ್​ ಮತ್ತು ಬಾಲಂಗೋಚಿಗಳ ಬ್ಯಾಟಿಂಗ್​ ವೈಫಲ್ಯವೂ ಹಿನ್ನಡೆ ತಂದಿತ್ತು. ಇದೀಗ ಈ ತಪ್ಪು ತಿದ್ದಿಕೊಂಡು ಹೊಸ ಹರುಪಿನೊಂದಿಗೆ ಎಜ್​ಬಾಸ್ಟನ್​ ಅಂಗಳದಲ್ಲಿ ಕಣಕ್ಕಿಳಿಯಲು ಶುಭಮಾನ್​ ಗಿಲ್​ ಪಡೆ ಸಜ್ಜಾಗಿದೆ. ಆಂಡರ್​ಸನ್​-ತೆಂಡುಲ್ಕರ್​ ಟ್ರೋಫಿ ಟೆಸ್ಟ್​ ಸರಣಿಯ ಎರಡನೇ ಪಂದ್ಯ ಬುಧವಾರದಿಂದ ನಡೆಯಲಿದ್ದು, ಆತಿಥೇಯ ಇಂಗ್ಲೆಂಡ್​ಗೆ ತಿರುಗೇಟು ನೀಡುವ ತವಕ ಭಾರತ ತಂಡದ್ದಾಗಿದೆ. ಎಜ್​ಬಾಸ್ಟನ್​ನಲ್ಲಿ ಇದುವರೆಗೆ ಒಂದೂ ಟೆಸ್ಟ್​ ಗೆಲ್ಲದಿರುವ ಭಾರತ ತಂಡ, ಸರಣಿ ಸಮಬಲ ಸಾಧಿಸಲು ಹೊಸ ಇತಿಹಾಸ ಬರೆಯುವ ಸವಾಲು ಎದುರಿಸುತ್ತಿದೆ.

ಸ್ಟಾರ್​ ಬ್ಯಾಟರ್​ಗಳಾದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮ ಟೆಸ್ಟ್​ ನಿವೃತ್ತಿಯ ನಂತರ ಮೊದಲ ಸರಣಿ ಆಡುತ್ತಿರುವ ಭಾರತಕ್ಕೆ ಆಂಗ್ಲರ ನೆಲದಲ್ಲಿ ಬ್ಯಾಟಿಂಗ್​ ವಿಭಾಗದಲ್ಲಿ ಅನುಭವದ ಕೊರತೆ ಕಾಡುವ ಭೀತಿ ಇತ್ತು. ಆದರೆ ಹೆಡಿಂಗ್ಲೆಯಲ್ಲಿ ಕನ್ನಡಿಗ ಕೆಎಲ್​ ರಾಹುಲ್​, ಯಶಸ್ವಿ ಜೈಸ್ವಾಲ್​, ಉಪನಾಯಕ ರಿಷಭ್​ ಪಂತ್​, ನಾಯಕ ಶುಭಮಾನ್​ ಗಿಲ್​ ಬ್ಯಾಟ್​ನಿಂದ ಸಿಡಿದ ಒಟ್ಟು 5 ಶತಕಗಳು ಈ ಚಿಂತೆಯನ್ನು ದೂರ ಮಾಡಿತ್ತು. ಎಜ್​ಬಾಸ್ಟನ್​ನಲ್ಲಿ ಸಾಯಿ ಸುದರ್ಶನ್​ ಮತ್ತು 8 ವರ್ಷಗಳ ಬಳಿಕ ಮರಳಿರುವ ಕನ್ನಡಿಗ ಕರುಣ್​ ನಾಯರ್​ ಬ್ಯಾಟ್​ನಿಂದಲೂ ರನ್​ ಹರಿದುಬಂದರೆ ಭಾರತೀಯ ಬ್ಯಾಟಿಂಗ್​ ಮತ್ತಷ್ಟು ಬಲಿಷ್ಠಗೊಳ್ಳಲಿದೆ.

ಆದರೆ ಭಾರತಕ್ಕೆ ಈಗ ಪ್ರಮುಖ ತಲೆನೋವು ಇರುವುದು ಬೌಲಿಂಗ್​ ವಿಭಾಗದ್ದೇ ಆಗಿದೆ. ಭಾರತದ ಟ್ರಂಪ್​ಕಾರ್ಡ್​ ಜಸ್​ಪ್ರೀತ್​ ಬುಮ್ರಾರನ್ನು ಫಿಟ್ನೆಸ್​ ಕಾರಣದಿಂದಾಗಿ ಸತತ 2ನೇ ಟೆಸ್ಟ್​ನಲ್ಲಿ ಆಡಿಸಬೇಕೇ, ಬೇಡವೇ ಎಂಬ ಗೊಂದಲ ಕಾಡುತ್ತಿದೆ. ಅಲ್ಲದೆ ಅವರನ್ನು ಹೊರಗಿಟ್ಟರೆ ಆಂಗ್ಲರ 20 ವಿಕೆಟ್​ಗಳನ್ನು ಕಬಳಿಸಲು ಸಾಧ್ಯವೇ ಎಂಬ ಪ್ರಶ್ನೆಯೂ ಮೂಡಿದೆ. ಜತೆಗೆ ಎರಡನೇ ಸ್ಪಿನ್ನರ್​ ಯಾರೆಂಬ ಕೌತುಕವೂ ಇದೆ. ಹೀಗಾಗಿ ಎಜ್​ಬಾಸ್ಟನ್​ನಲ್ಲಿ ಭಾರತ ಗೆಲುವಿನ ಹಳಿ ಏರಲು ಸಮರ್ಥ ಆಡುವ ಹನ್ನೊಂದರ ಬಳಗವನ್ನು ಆರಿಸುವ ಸವಾಲು ಕೂಡ ಕೋಚ್​ ಗೌತಮ್​ ಗಂಭೀರ್​ ಮತ್ತು ನಾಯಕ ಶುಭಮಾನ್​ ಗಿಲ್​ ಮುಂದಿದೆ. ಇದು ಪಂದ್ಯದ ಫಲಿತಾಂಶದಲ್ಲೂ ನಿರ್ಣಾಯಕ ಪಾತ್ರ ವಹಿಸಲಿದೆ.

ಬುಮ್ರಾ ಆಡುವ ಬಗ್ಗೆ ಸಸ್ಪೆನ್ಸ್​
ಎರಡನೇ ಟೆಸ್ಟ್​ ಪಂದ್ಯಕ್ಕೆ ಮುನ್ನ ಎಲ್ಲರನ್ನೂ ಕಾಡುತ್ತಿರುವ ಪ್ರಶ್ನೆ ಎಂದರೆ, ಜಸ್​ಪ್ರೀತ್​ ಬುಮ್ರಾ ಆಡುವರೇ, ಇಲ್ಲವೇ ಎಂಬುದು. ಫಿಟ್ನೆಸ್​ ಕಾರಣದಿಂದಾಗಿ ಬುಮ್ರಾ ಸರಣಿಯಲ್ಲಿ 3 ಟೆಸ್ಟ್​ ಮಾತ್ರ ಆಡಲಿದ್ದಾರೆ ಎಂದು ಟೀಮ್​ ಮ್ಯಾನೇಜ್​ಮೆಂಟ್​ ಈಗಾಗಲೆ ಸ್ಪಷ್ಟಪಡಿಸಿದ್ದು, ಅವರು ಆಡಲಿರುವ ಸರಣಿಯ ಇನ್ನುಳಿದ 2 ಪಂದ್ಯಗಳು ಯಾವುವು ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ. ಲೀಡ್ಸ್​ ಟೆಸ್ಟ್​ನ ಕೊನೇ ಹಂತದಲ್ಲಿ ಬುಮ್ರಾಗೆ ಬೌಲಿಂಗ್​ ನೀಡದಿದ್ದಾಗ ಅವರನ್ನು ಎಜ್​ಬಾಸ್ಟನ್​ನಲ್ಲೂ ಆಡಿಸಲು ವಿಶ್ರಾಂತಿ ನೀಡಲಾಗುತ್ತಿದೆ ಎಂದೇ ಹೇಳಲಾಗಿತ್ತು.

ಬುಮ್ರಾರನ್ನು ಆಡಿಸುವ ಬಗ್ಗೆ ಕೊನೇಕ್ಷಣದಲ್ಲಿ ನಿರ್ಧರಿಸಲಾಗುವುದು ಎಂದು ಭಾರತ ತಂಡದ ಸಹಾಯಕ ಕೋಚ್​ ರ್ಯಾನ್​ ಟೆನ್​ ಡೋಶೆಟ್​ ಸೋಮವಾರ ತಿಳಿಸಿದ್ದರು. ಆದರೆ ಇದೀಗ ಬುಮ್ರಾ ಎಜ್​ಬಾಸ್ಟನ್​ನಲ್ಲಿ ಆಡುವ ಸಾಧ್ಯತೆ ಣಿಸಿದೆ. ಜುಲೈ 10ರಿಂದ ಲಾರ್ಡ್ಸ್​ನಲ್ಲಿ ನಡೆಯಲಿರುವ ಸರಣಿಯ 3ನೇ ಟೆಸ್ಟ್​ನಲ್ಲಿ ಬುಮ್ರಾರನ್ನು ಆಡಿಸುವ ಸಲುವಾಗಿ 2ನೇ ಟೆಸ್ಟ್​ನಿಂದ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಿದೆ. ಬುಮ್ರಾ ಪಂದ್ಯಕ್ಕೆ ಫಿಟ್​ ಇದ್ದರೂ, ಟಾಸ್​ಗೆ ಮುನ್ನ ಪಿಚ್​ ಪರಿಶೀಲಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ನಾಯಕ ಗಿಲ್​ ಮಂಗಳವಾರ ತಿಳಿಸಿದ್ದಾರೆ. ಬುಮ್ರಾ ಗೈರಾದರೆ ಅವರ ಸ್ಥಾನವನ್ನು ಆಕಾಶ್​ ದೀಪ್​ ಅಥವಾ ಎಡಗೈ ವೇಗಿ ಅರ್ಷದೀಪ್​ ಸಿಂಗ್​ ತುಂಬುವ ನಿರೀಕ್ಷೆ ಇದೆ.

ಎರಡನೇ ಸ್ಪಿನ್ನರ್​ ಯಾರು?
ಭಾರತ ಎಜ್​ಬಾಸ್ಟನ್​ನಲ್ಲಿ ಇಬ್ಬರು ಸ್ಪಿನ್ನರ್​ಗಳೊಂದಿಗೆ ಕಣಕ್ಕಿಳಿಯಲಿದೆ ಎಂದು ಡೋಶೆಟ್​ ಸೋಮವಾರವೇ ಖಚಿತಪಡಿಸಿದ್ದಾರೆ. ಆದರೆ 2ನೇ ಸ್ಪಿನ್ನರ್​ ಯಾರೆಂದು ಸ್ಪಷ್ಟಪಡಿಸಿಲ್ಲ. ಚೈನಾಮನ್​ ಸ್ಪಿನ್ನರ್​ ಕುಲದೀಪ್​ ಯಾದವ್​ ಮತ್ತು ಸ್ಪಿನ್​ ಬೌಲಿಂಗ್​ ಆಲ್ರೌಂಡರ್​ ವಾಷಿಂಗ್ಟನ್​ ಸುಂದರ್​ ಈ ರೇಸ್​ನಲ್ಲಿ ಮುಂಚೂಣಿಯಲ್ಲಿದ್ದಾರೆ. ಆದರೆ ಬ್ಯಾಟಿಂಗ್​ ಸಾಮರ್ಥ್ಯದಿಂದಾಗಿ ವಾಷಿಂಗ್ಟನ್​ ಆಡುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ. ಕುಲದೀಪ್​ರನ್ನು ಆಡಿಸಲು ಕೆಲ ಮಾಜಿ ಕ್ರಿಕೆಟಿಗರೂ ಸರಣಿ ಆರಂಭಕ್ಕೆ ಮೊದಲಿನಿಂದಲೂ ಆಗ್ರಹಿಸುತ್ತಿದ್ದಾರೆ. ಹೀಗಾಗಿ ಜಡೇಜಾ-ವಾಷಿಂಗ್ಟನ್​, ಜಡೇಜಾ-ಕುಲದೀಪ್​ ಅಥವಾ ಅಚ್ಚರಿಯ ಆಯ್ಕೆಯಾಗಿ ವಾಷಿಂಗ್ಟನ್​-ಕುಲದೀಪ್​ ಇಬ್ಬರು ಸ್ಪಿನ್ನರ್​ಗಳ ಸ್ಥಾನವನ್ನು ತುಂಬುವ ನಿರೀೆ ಇದೆ.

ನಿತೀಶ್​ ರೆಡ್ಡಿಗೆ ಚಾನ್ಸ್​ ?
ಎಜ್​ಬಾಸ್ಟನ್​ಗೆ ಆಗಮಿಸಿದ ಬಳಿಕ ನೆಟ್ಸ್​ನಲ್ಲಿ ಕಠಿಣ ಅಭ್ಯಾಸ ನಡೆಸುತ್ತಿರುವ ವೇಗದ ಬೌಲಿಂಗ್​ ಆಲ್ರೌಂಡರ್​ ನಿತೀಶ್​ ಕುಮಾರ್​ ರೆಡ್ಡಿ 2ನೇ ಟೆಸ್ಟ್​ನಲ್ಲಿ ಆಡುವ ಸಾಧ್ಯತೆ ಕಾಣಿಸಿದೆ. ಆದರೆ ಭಾರತ ಇಬ್ಬರು ಸ್ಪಿನ್ನರ್​ಗಳನ್ನು ಆಡಿಸುವುದಾಗಿ ಈಗಾಗಲೆ ಖಚಿತಪಡಿಸಿರುವುದರಿಂದ ನಿತೀಶ್​ ರೆಡ್ಡಿ ಯಾರ ಸ್ಥಾನದಲ್ಲಿ ಆಡಬಹುದು ಎಂಬುದು ಸ್ಪಷ್ಟವಾಗಿಲ್ಲ. ಮೊದಲ ಟೆಸ್ಟ್​ ಆಡಿದ್ದ ಶಾರ್ದೂಲ್​ ಠಾಕೂರ್​ 2ನೇ ಟೆಸ್ಟ್​ನಿಂದ  ಹೊರಗುಳಿಯುವುದು ಬಹುತೇಕ ಖಚಿತವೆನಿಸಿದೆ. ಆದರೆ ಅವರ ಸ್ಥಾನದಲ್ಲಿ 2ನೇ ಸ್ಪಿನ್ನರ್​ ಕಣಕ್ಕಿಳಿದರೆ, ನಿತೀಶ್​ ರೆಡ್ಡಿ ಆಡಬೇಕಾದರೆ ಯಾರಾದರೂ ಬ್ಯಾಟರ್​ ಅನ್ನೇ ಹೊರಗಿಡಬೇಕಾಗುತ್ತದೆ.

ನಿತೀಶ್​ ನೆಟ್ಸ್​ನಲ್ಲಿ ಸ್ಲಿಪ್​ ಕ್ಯಾಚಿಂಗ್​ ಅಭ್ಯಾಸವನ್ನೂ ನಡೆಸಿದ್ದು, ಅವರಿಗೆ ಯಾರು ಸ್ಥಾನ ಬಿಟ್ಟುಕೊಡಬಹುದು ಎಂಬ ಕುತೂಹಲವಿದೆ. ಕನ್ನಡಿಗ ಕರುಣ್​ ನಾಯರ್​ಗೆ 3ನೇ ಕ್ರಮಾಂಕಕ್ಕೆ ಬಡ್ತಿ ನೀಡಿ, ಸಾಯಿ ಸುದರ್ಶನ್​ರನ್ನು ಹೊರಗಿಡಬಹುದು ಎಂದೂ ಹೇಳಲಾಗುತ್ತಿದೆ. ಆದರೆ, ಕಳೆದ ಪಂದ್ಯದಲ್ಲಿ 4 ಕ್ಯಾಚ್​ ಕೈಚೆಲ್ಲಿದ ಜೈಸ್ವಾಲ್​ ಬದಲಿಗೆ ಸುದರ್ಶನ್​ ಸ್ಲಿಪ್​ ಕ್ಯಾಚಿಂಗ್​ ಅಭ್ಯಾಸದಲ್ಲಿ ಪಾಲ್ಗೊಂಡಿರುವುದರಿಂದ ಗೊಂದಲ ಇನ್ನಷ್ಟು ಹೆಚ್ಚಾಗಿದೆ.

ಎಜ್​ಬಾಸ್ಟನ್​ನಲ್ಲಿ ಭಾರತ
ಜಯ: 0
ಸೋಲು: 7
ಡ್ರಾ: 1

ಆರಂಭ: ಮಧ್ಯಾಹ್ನ 3.30
ನೇರಪ್ರಸಾರ: ಸೋನಿ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​

ಟೀಮ್​ ನ್ಯೂಸ್​:
ಭಾರತ: ಮೊದಲ ಟೆಸ್ಟ್​ ಸೋಲಿನ ಬಳಿಕ ಭಾರತ ತಂಡದಲ್ಲಿ ಒಂದು ಬದಲಾವಣೆಯಂತೂ ಬಹುತೇಕ ಖಚಿತಗೊಂಡಿತ್ತು. ಅದು ಈಗ 2 ಅಥವಾ 3 ಆಟಗಾರರ ಬದಲಾವಣೆಗೆ ಏರಿಕೆಯಾದರೂ ಅಚ್ಚರಿ ಇಲ್ಲ. ಶಾರ್ದೂಲ್​ ಠಾಕೂರ್​ ಸ್ಥಾನದಲ್ಲಿ 2ನೇ ಸ್ಪಿನ್ನರ್​ ಸ್ಥಾನಕ್ಕೆ ವಾಷಿಂಗ್ಟನ್​-ಕುಲದೀಪ್​ ನಡುವೆ ಸ್ಪರ್ಧೆ ಇದೆ. ಜತೆಗೆ ವೇಗದ ಬೌಲಿಂಗ್​ ಆಲ್ರೌಂಡರ್​ ನಿತೀಶ್​ ರೆಡ್ಡಿ ಕೂಡ ರೇಸ್​ನಲ್ಲಿದ್ದಾರೆ. ಇನ್ನು ಬುಮ್ರಾ ಪಂದ್ಯದಿಂದ ವಿಶ್ರಾಂತಿ ಪಡೆದರೆ ಆಕಾಶ್​ದೀಪ್​ ಅಥವಾ ಅರ್ಷದೀಪ್​ ಸಿಂಗ್​ ಆಡಬಹುದು. ಆಗ ಸಿರಾಜ್​ ಮತ್ತು ಕನ್ನಡಿಗ ಪ್ರಸಿದ್ಧ ಕೃಷ್ಣ ಇಬ್ಬರು ಅಗ್ರ ಆಯ್ಕೆಯ ವೇಗಿಗಳಾಗಿರುತ್ತಾರೆ.

ಇಂಗ್ಲೆಂಡ್​: ಮೊದಲ ಟೆಸ್ಟ್​ ಗೆದ್ದ ತಂಡದಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದು ಆತಿಥೇಯ ಇಂಗ್ಲೆಂಡ್​ ಸೋಮವಾರವೇ ಪ್ರಕಟಿಸಿದೆ. ಇದರಿಂದ ವೇಗಿ  ಆರ್ಚರ್​ ತಂಡಕ್ಕೆ ಸೇರ್ಪಡೆಯಾಗಿದ್ದರೂ ಆಡಲು ಇಳಿಯುವುದಿಲ್ಲ ಎಂಬುದು ಖಚಿತಗೊಂಡಿದೆ. ಜತೆಗೆ ತಂಡದ ಮೂವರು ವೇಗಿಗಳಾದ ಕ್ರಿಸ್​ ವೋಕ್ಸ್​, ಬೆಡನ್​ ಕರ್ಸ್​, ಜೋಶ್​ ಟಂಗ್​ ಮೇಲೆ ಇಂಗ್ಲೆಂಡ್​ ತಂಡ ಮತ್ತೆ ವಿಶ್ವಾಸವಿಟ್ಟಿದೆ.

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…