ದೇಶ ಗಣರಾಜ್ಯೋತ್ಸವ ಸಂಭ್ರಮಕ್ಕೆ ಸಜ್ಜಾಗಿದೆ. ರಾಷ್ಟ್ರಪತಿ ದ್ರೌಪದಿ ಮುಮು ಇಂದು (ಭಾನುವಾರ) ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಗಣರಾಜ್ಯೋತ್ಸವ ಸಾಗಿಬಂದ ಹಾದಿ, ವೈಶಿಷ್ಟ್ಯಗಳ ವಿವರ ಇಲ್ಲಿದೆ.
ಗಣರಾಜ್ಯೋತ್ಸವ ಸಮಾರಂಭ ನಮ್ಮ ದೇಶದ ಸಂವಿಧಾನದ ಹೆಮ್ಮೆಯನ್ನು ಮಾರ್ದನಿಸುತ್ತದೆ. ಮಾತ್ರವಲ್ಲ ಭಾರತದ ಶಕ್ತಿ, ಶೌರ್ಯ, ಶ್ರೇಷ್ಠ ಸಂಸ್ಕೃತಿ, ಹಿರಿಮೆ-ಗರಿಮೆ, ಏಕತೆ, ಶ್ರೇಷ್ಠ ಮೌಲ್ಯಗಳನ್ನು ನೆನಪಿಸಿ, ಪ್ರೇರಣೆ ಹರಡುತ್ತದೆ. ರಾಜಧಾನಿ ದೆಹಲಿಯಲ್ಲಿ ನಡೆಯುವ ಈ ಗಣರಾಜ್ಯೋತ್ಸವದ ಪ್ರಧಾನ ಸಮಾರಂಭವನ್ನು ಕಣ್ತುಂಬಿಕೊಳ್ಳುವುದೆಂದರೆ ಭಾರತದ ಪರಂಪರೆಯ ಪ್ರವಾಹದಲ್ಲಿ ವಿಹರಿಸಿದಂತೆ.
ಶೌರ್ಯದ ಪ್ರತೀಕ: ಶೌರ್ಯವನ್ನು ಗೌರವಿಸಿ ನೀಡಲಾಗುವ ಪರಮವೀರ ಚಕ್ರ, ಮಹಾವೀರ ಚಕ್ರ ಮತ್ತು ವೀರ ಚಕ್ರ ಪ್ರಶಸ್ತಿಗಳು ಸ್ಥಾಪನೆಯಾದದ್ದು 1950ರ ಜನವರಿ 26ರಂದೇ. ಗಣರಾಜ್ಯೋತ್ಸವ ದಿನದಂದು ರಾಷ್ಟ್ರಪತಿಗಳು ಈ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಾರೆ. ಸೇನೆಯ ಕುಮಾವು ರೆಜಿಮೆಂಟ್ನ ಮೇಜರ್ ಮನೋಜ್ ಶರ್ಮಾ ಅವರಿಗೆ ಮೊದಲ ಪರಮವೀರ ಚಕ್ರ ಲಭಿಸಿತ್ತು.
ಸಂಸ್ಕೃತಿಯ ಸಂಗಮ: ಗಣರಾಜ್ಯೋತ್ಸವ ಸಮಾರಂಭದಲ್ಲಿ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳ ಪ್ರದರ್ಶನ ಆರಂಭವಾಗಿದ್ದು 1953ರ ಜ.26ರಿಂದ. ಆಗಿನಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 22ರಿಂದ 30 ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. 1981ರಿಂದ 3 ಉತ್ತಮ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಿ, ಅವುಗಳನ್ನು ಗೌರವಿಸುವ ಸಂಪ್ರದಾಯ ಆರಂಭವಾಯಿತು.
ಪಾಕ್ಗೆ ಎರಡು ಬಾರಿ ಅತಿಥಿ ಗೌರವ: ಗಣರಾಜ್ಯೋತ್ಸವ ಸಮಾರಂಭಕ್ಕೆ ಪ್ರತಿವರ್ಷ ಅನ್ಯರಾಷ್ಟ್ರದ ಅಧ್ಯಕ್ಷರನ್ನು ಆಹ್ವಾನಿಸುವುದು, ಆ ಮೂಲಕ ಎರಡೂ ರಾಷ್ಟ್ರಗಳ ರಾಜತಾಂತ್ರಿಕ ಸಂಬಂಧ, ಸೌಹಾರ್ದವನ್ನು ಬಲಗೊಳಿಸುವುದು ವಾಡಿಕೆ. ಪಾಕಿಸ್ತಾನ ಆರಂಭದಿಂದಲೂ ಭಾರತದ ಶತ್ರುರಾಷ್ಟ್ರವಾಗಿದ್ದರೂ, ನಮ್ಮ ಸರ್ಕಾರಗಳು ಉದ್ವಿಗ್ನತೆ ತಗ್ಗಿಸಲು ಹಾಗೂ ಸಂಬಂಧ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಿವೆ. ಈ ಹಿನ್ನೆಲೆಯಲ್ಲಿ ಪಾಕ್ ಸರ್ಕಾರದ ಪ್ರತಿನಿಧಿಗಳನ್ನು ಎರಡು ಬಾರಿ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. 1955ರಲ್ಲಿ ಪಾಕ್ ಗವರ್ನರ್ ಮಲಿಕ್ ಗುಮಾರ್ ಮೊಹಮ್ಮದ್ ಅತಿಥಿಯಾಗಿ ಆಗಮಿಸಿದ್ದರು. 1965ರಲ್ಲಿ ಪಾಕಿಸ್ತಾನದ ಕೃಷಿ ಹಾಗೂ ಆಹಾರ ಸರಬರಾಜು ಸಚಿವ ರಾಣಾ ಅಬ್ದುಲ್ ಹಮೀದ್ ಅವರನ್ನು ಆಹ್ವಾನಿಸಲಾಗಿತ್ತು. ಹಮೀದ್ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಪಥಸಂಚಲನದ ವೈಭವ…: ಗಣರಾಜ್ಯೋತ್ಸವದ ಮೊದಲ ಪಥಸಂಚಲನ ನಡೆದದ್ದು 1950ರ ಜನವರಿ 26ರಂದು ದೆಹಲಿಯ ಇರ್ವಿನ್ ಕ್ರೀಡಾಂಗಣದಲ್ಲಿ. 1950 ರಲ್ಲಿ ಇಂಡೋನೇಷ್ಯಾ ಅಧ್ಯಕ್ಷ ಡಾ. ಸುಕನೋ ಮುಖ್ಯ ಅತಿಥಿಯಾಗಿದ್ದರು. ಆ ಬಳಿಕ 1951, 52 ಮತ್ತು 53ರ ಪಥಸಸಂಚಲನವೂ ಇರ್ವಿನ್ ಸ್ಟೇಡಿಯಂನಲ್ಲಿ ನಡೆಯಿತು. 1950ರಿಂದಲೂ ಪಥಸಂಚಲನ ಗಣರಾಜ್ಯೋತ್ಸವದ ಪ್ರಮುಖ ಆಕರ್ಷಣೆ. ಸೇನೆಯ ಮೂರೂ ಪಡೆಗಳು ದೇಶದ ಶಕ್ತಿಯನ್ನು ಪ್ರತಿನಿಧಿಸುತ್ತವೆ. ಸೇನಾಪಡೆಗಳ ಸಾಹಸ ಪ್ರದರ್ಶನ ರೋಮಾಂಚನ ಮೂಡಿಸುತ್ತದೆ. ಪಥಸಂಚಲನದಲ್ಲಿ ಸೇನೆಯ 55 ರೆಜಿಮೆಂಟ್, ಅರೆಸೇನಾಪಡೆಯ 12 ತಂಡಗಳು ಭಾಗವಹಿಸುತ್ತವೆ. ಅಲ್ಲದೆ, ಆಯಾ ರಾಜ್ಯಗಳ ಸ್ತಬ್ಧಚಿತ್ರಗಳು ದೇಶದ ಸಂಸ್ಕೃತಿಯ ವೈಭವವನ್ನು ಸಾರಿ ಹೇಳುತ್ತವೆ.
ಶ್ರೀಸಾಮಾನ್ಯರಿಗೆ ವಿಶೇಷ ಆಮಂತ್ರಣ: ಶ್ರಮಿಕ ಕಾರ್ವಿುಕರು, ಆಟೋ ರಿಕ್ಷಾ ಚಾಲಕರು, ಪೌರ ಕಾರ್ವಿುಕರು, ಆರೋಗ್ಯ ಸೇವೆಗಳ ಮುಂಚೂಣಿ ಕಾರ್ಯಕರ್ತರು, ಸಾಧಕ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು, ಸದಸ್ಯರು ಸೇರಿ ತೆರೆಮರೆಯಲ್ಲಿ ಕಾರ್ಯನಿರ್ವಹಿಸುವ ಶ್ರೀಸಾಮಾನ್ಯರನ್ನು ಗಣರಾಜ್ಯೋತ್ಸವ ಸಮಾರಂಭ ವೀಕ್ಷಿಸಲು ವಿಶೇಷ ಆಮಂತ್ರಣ ನೀಡುವ ಪದ್ಧತಿ 2022ರಿಂದ ಪ್ರಾರಂಭವಾಗಿದೆ.
ಸ್ತ್ರೀಶಕ್ತಿಯ ಕೊಡುಗೆ: ಸಂವಿಧಾನ ಸಭೆಯಲ್ಲಿ ಒಟ್ಟು 299 ಸದಸ್ಯರಿದ್ದರು. ಇದರಲ್ಲಿ 15 ಮಹಿಳೆಯರಿದ್ದರು. ಅಮ್ಮು ಸ್ವಾಮಿನಾಥನ್, ಬೇಗಂ ಕುದಾಸಿಯಾ, ದಾಕ್ಷಾಯಿಣಿ ವೇಲಾಯುಧನ್, ಎನಿ ಮ್ಯಾಸ್ಕರಿನ್, ದುರ್ಗಾಬಾಯಿ ದೇಶಮುಖ್, ಹಂಸಾ ಜೀವರಾಜ್ ಮೆಹ್ರಾ, ಸರೋಜನಿ ನಾಯ್ಡು, ಸುಚೇತಾ ಕೃಪಲಾನಿ, ವಿಜಯಲಕ್ಷ್ಮಿ ಪಂಡಿತ್, ಕಮಲಾ ಚೌಧರಿ, ಲೀಲಾ ರಾಯ್, ಮಾಲತಿ ಚೌಧರಿ, ರೇಣುಕಾ ರಾಯ್, ರಾಜಕುಮಾರಿ ಅಮೃತಾ ಕೌರ್, ಪೂರ್ಣಿಮಾ ಬ್ಯಾನರ್ಜಿ.
ಮುಖ್ಯಾಂಶಗಳು
- ಸಮಾರಂಭಕ್ಕೆ ರಾಷ್ಟ್ರಪತಿ ಅವರನ್ನು ಕರೆತರುವುದೇ ವಿಶೇಷವಾಗಿರುತ್ತದೆ.
- ಸೇನಾಪಡೆಗಳು ಆಗಸ್ಟ್ನಿಂದಲೇ ಅಭ್ಯಾಸ ಆರಂಭಿಸುತ್ತವೆ.
- ಸೇನಾಪಡೆಗಳಿಂದ ಆರು ನೂರು ಗಂಟೆಗಳ ಅಭ್ಯಾಸ.
- 2016ರಲ್ಲಿ ಮೊದಲ ಬಾರಿ ವಿದೇಶಿ ಸೇನೆಯ ನಮ್ಮ ಪಥಸಂಚಲನದಲ್ಲಿ ಪಾಲ್ಗೊಂಡಿತು. ಫ್ರಾನ್ಸ್ ಸೇನೆಯ ತಂಡ ಮತ್ತು ಅವರ ಬ್ಯಾಂಡ್ ಪಾಲ್ಗೊಂಡಿತ್ತು.
- 60 ದೇಶಗಳ ಸಂವಿಧಾನವನ್ನು ಸಮಗ್ರವಾಗಿ ಅಧ್ಯಯನ ಮಾಡಿ, ನಮ್ಮ ಸಂವಿಧಾನವನ್ನು ರೂಪಿಸಲಾಯಿತು.
- ಮೂರು ಸೇನೆಗಳು ಜನವರಿ 29ಕ್ಕೆ ವಿಜಯ ಚೌಕ್ನಲ್ಲಿ ಸೇರಿ ಗಣರಾಜ್ಯೋತ್ಸವ ಮುಕ್ತಾಯ ಘೊಷಣೆ ಮಾಡುತ್ತವೆ.
ಆತ ವೈಟ್ಬಾಲ್ ಕ್ರಿಕೆಟ್ನ… Virat Kohli ಕುರಿತಾಗಿ ಅಚ್ಚರಿಯ ಹೇಳಿಕೆ ನೀಡಿದ ಮಾಜಿ ಸ್ಟಾರ್ ಆಟಗಾರ
ಸ್ಯಾಂಡಲ್ವುಡ್ನ ಹಿರಿಯ ನಟ ಅನಂತ್ನಾಗ್ಗೆ Padma Bhushan ಪ್ರಶಸ್ತಿ