ಮಂಡ್ಯ (ಸಂಚಿ ಹೊನ್ನಮ್ಮ, ತ್ರಿವೇಣಿ ವೇದಿಕೆ): ವ್ಯಾಪಕ ರೂಪ ಪಡೆದುಕೊಂಡಿರುವ ರೈತಾಪಿ ಗಂಡು ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ ಎನ್ನುವ ವಿಷಯ ಸಮ್ಮೇಳನದ ಕವಿಗೋಷ್ಠಿಯಲ್ಲಿಯಲ್ಲಿಯೂ ರಿಂಗಣಿಸಿತು.
ಸಮ್ಮೇಳನದ ಅಂತಿಮ ದಿನ ನಡೆದ ಕವಿಗೋಷ್ಠಿ ತಿಳಿ ಹಾಸ್ಯ, ಒಂದಿಷ್ಟು ನವಿರು, ಕೊಂಚ ಬೇಸರದ ಜತೆಗೆ ದೇವರನ್ನೂ ಪ್ರಶ್ನೆ ಮಾಡುವ ಮೂಲಕ ಕವಿಗಳು ತಮ್ಮದೇ ದಾಟಿಯಲ್ಲಿ ಸಮಾಜದ ಅಂಕು-ಡೊಂಕುಗಳನ್ನು, ಆಸೆ-ಆಶಯಗಳನ್ನು ತಮ್ಮ ಕವಿತೆಯ ಮೂಲಕ ವೇದಿಕೆಯಲ್ಲಿ ವ್ಯಕ್ತಪಡಿಸಿ ಸಭಿಕರ ಮನಗೆಲ್ಲುವಲ್ಲಿ ಯಶಸ್ವಿಯಾದರು.
ಕಂಕಣ ಭಾಗ್ಯ ಕೊಡಿಸಿ: ಕವಿ ಮಹೇಶ್ ಊಗಿನಹಳ್ಳಿ ತಮ್ಮ ಕವಿತೆ ಮೂಲಕ ಹಳ್ಳಿ ಹೈಕಳಿಗೆ ಹೆಣ್ಣು ಸಿಗದ ಕಷ್ಟವನ್ನು ತೆರೆದಿಟ್ಟರು. ಹೆಣ್ಣು ಕೊಡಿ ಸ್ವಾಮಿ, ಹೆಣ್ಣುಕೊಡಿ, ಮಣ್ಣಿನ ಮಕ್ಕಳಿಗೆ ಹೆಣ್ಣು ಕೊಡಿ ಎಂದು ಸಾಲುಗಳನ್ನು ಆರಂಭಿಸುವ ಮೂಲಕ, ನಾವೇನು ಯಾರಿಗೇನೂ ಕಡಿಮೆ ಇಲ್ಲ, ಪುಂಡ ಪೋಕರಿಗಳೂ ಅಲ್ಲ. ನಮಗೂ ಹೆಣ್ಣು ಕೊಡಿ ಎಂದು ಕೋರಿಕೊಂಡರು. ಒಂದು ಹೆಜ್ಜೆ ಮುಂದೆ ಹೋಗಿ ಸರ್ಕಾರವನ್ನೇ ನೇರವಾಗಿ ಕೋರಿದ ಕವಿ ಹಲವಾರು ಭಾಗ್ಯಗಳನ್ನು ಜಾರಿಗೆ ತಂದ ಸರ್ಕಾರ, ರೈತರ ಗಂಡು ಮಕ್ಕಳಿಗೆ ಕಂಕಣ ಭಾಗ್ಯವನ್ನು ಕೊಡಿಸಿ ಎಂದು ಮನವಿ ಮಾಡಿ ಸರ್ಕಾರದ ಕಣ್ಣು ತೆರೆಸುವ ಕೆಲಸವನ್ನು ಮಾಡಿದರು.
ನೀನು ಅಲ್ಲೇ ಇರು: ಒಂದೆಡೆ ರೈತಾಪಿ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ ಎಂದು ಕವಿತೆ ಮೂಲಕ ಮಹೇಶ್ ಊಗಿನಹಳ್ಳಿ ಅಳಲು ತೋಡಿಕೊಂಡರೆ, ಕವಿ ಅರುಣ ಕುಲಕರ್ಣಿ ಹೆಂಡತಿಯನ್ನು ಕರೆಯುವವರೆಗೂ ತವರಲ್ಲೇ ಇರು ಎನ್ನುವ ಮೂಲಕ ಗಂಡನ ಸಮಸ್ಯೆಯನ್ನು ತಿಳಿ ಹಾಸ್ಯದ ಮೂಲಕ ವ್ಯಕ್ತಪಡಿದ್ದು ಇಡೀ ಸಭೆ ನಗೆಗಡಲಲ್ಲಿ ತೇಲುವಂತೆ ಮಾಡಿತು.
ನೀನು ತವರಿಗೆ ಹೋದಾಗಿನಿಂದ ನಾನಿಲ್ಲಿ ಆರಾಮದಿಂದ ಇದ್ದೇನೆ ಎಂದು ಕವಿತೆ ಆರಂಭಿಸಿ, ನೀನು ತವರಿನಲ್ಲಿಯೇ ಇರು, ಖಂಡಿತವಾಗಿಯೂ ನಿನ್ನನ್ನು ಕರೆಯಲು ಬರುತ್ತೇನೆ, ಅಲ್ಲಿಯವರೆಗೂ ಬರಬೇಡ, ಕನಸಲ್ಲೂ ಕಾಡಬೇಡ ಎಂದು ಹೇಳಿ ಹೆಂಡತಿ ತವರಿನಲ್ಲಿ ಇದ್ದರೆ ಎಷ್ಟೆಲ್ಲಾ ಆಗುತ್ತದೆ ಎನ್ನುವ ಹಾಸ್ಯವನ್ನು ಕವಿತೆ ಮೂಲಕ ಪ್ರಸ್ತುತಪಡಿಸಿದರು.
ಗೋಷ್ಠಿಯನ್ನು ಜಿ.ಎಲ್ ಲಕ್ಷ್ಮಮ್ಮ ನಿರ್ವಹಣೆ ಮಾಡಿದರೆ, ನಯನಾ ಎಸ್ ನಿರೂಪಿಸಿದರು, ಕಿರಣ್ ಪಿ.ಎಲ್ ಸ್ವಾಗತ ಕೋರಿದರು, ಕೆ.ಎ.ಶ್ರೀಹರಿ ವಂದಿಸಿದರು.