ಅರಸೀಕೆರೆ ಗ್ರಾಮಾಂತರ: ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳಲ್ಲಿ ಏಕತೆ, ಸಂಘಟನೆ ಮತ್ತು ರಾಷ್ಟ್ರೀಯತೆ ಭಾವೈಕ್ಯತೆಯೊಂದಿಗೆ ಏಕತೆಯ ಸಂದೇಶ ನೀಡಲಿದೆ ಎಂದು ಆದಿಚುಂಚನಗಿರಿ ಹಾಸನ ಮತ್ತು ಕೊಡಗು ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದ ಮೈಸೂರು ರಸ್ತೆಯಲ್ಲಿರುವ ಕಸ್ತೂರ ಬಾ ಗಾಂಧಿ ಆಶ್ರಮದಲ್ಲಿ ಆದಿಚುಂಚನಗಿರಿ ಯೂನಿವರ್ಸಿಟಿ ಮತ್ತು ಕಸ್ತೂರಬಾ ಗಾಂಧಿ ಸ್ಮಾರಕ ಟ್ರಸ್ಟ್ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ವಾರ್ಷಿಕ ವಿಶೇಷ ರಾಷ್ಟ್ರೀಯ ಸೇವಾ ಯೋಜನೆ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಅನುಭವಿದಾರರು, ಇತಿಹಾಸ ತಜ್ಞರು ಮತ್ತು ಸಂಪನ್ಮೂಲ ವ್ಯಕ್ತಿಗಳು ಆಗಮಿಸಿದ್ದಾರೆ. ಯಶೋದರಮ್ಮ ದಾಸಪ್ಪ ನಿರ್ಮಾಣ ಮಾಡಿರುವ ಗಾಂಧಿ ಸ್ಮಾರಕ ಅವಿಸ್ಮರಣೀಯ ಪುಣ್ಯಭೂಮಿ. ಇಂತಹ ಸಂದರ್ಭವನ್ನು ಶಿಬಿರಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅತ್ಯುತ್ತಮ ಸಮಯ ಕಳೆದುಕೊಂಡರೆ ಮತ್ತೆ ಪಡೆಯಲು ಸಾಧ್ಯವಿಲ್ಲ. ವ್ಯಕ್ತಿತ್ವ ವಿಕಸನಕ್ಕೆ ಇಂತಹ ಶಿಬಿರಗಳು ಸಹಕಾರಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ.ಕೃಷ್ಣ, ಗಾಂಧೀಜಿ ಅವರ ಕನಸಿನಂತೆ ರಾಮರಾಜ್ಯ ನಮ್ಮದಾಗಬೇಕು. ಗಾಂಧೀಜಿ ಇಲ್ಲದ ಭಾರತವನ್ನು ಊಹಿಸಿಕೊಳ್ಳಲೂ ಸಾದ್ಯವಿಲ್ಲ ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆಯ ಸಹ ಸಂಯೋಜಕ ಡಾ.ಎ.ಟಿ.ಶಿವರಾಮು ಮಾತನಾಡಿ, ಕಾರ್ಯಕ್ರಮಕ್ಕೆ 150 ಸ್ವಯಂ ಸೇವಕರು ಆಗಮಿಸಿದ್ದು, ಯುವ ಶಕ್ತಿ ದೇಶದ ಶಕ್ತಿಯಾಗಿದೆ. ಸೇವಾ ಅವಧಿಯಲ್ಲಿ ವಿದ್ಯಾರ್ಥಿಗಳು ಉತ್ತಮ ಅನುಭವ ಪಡೆದು ಸಮಾಜಕ್ಕೆ ಆರೋಗ್ಯಪೂರ್ಣ ಸಂದೇಶ ನೀಡಬೇಕು ಎಂದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯ ಕುಲಸಚಿವ ಡಾ.ಸಿ.ಕೆ.ಸುಬ್ಬರಾಯ, ಅಕಾಡೆಮಿ ಮುಖ್ಯಸ್ಥ ಡಾ.ರಮೇಶ್, ಅನಂತ್ ಇಂಟರ್ ನ್ಯಾಷನಲ್ ಶಿಕ್ಷಣ ಸಂಸ್ಥೆ ಸಮೂಹ ಚೇರ್ಮನ್ ಆರ್.ಅನಂತಕುಮಾರ್ ಮಾತನಾಡಿದರು. ಪ್ರಾಂಶುಪಾಲ ಡಾ.ಲಿಂಗರಾಜು, ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ, ಮಾನವ ಸಂಪನ್ಮೂಲ ವ್ಯಕ್ತಿ ಮೋಹನ ಕುಮಾರ್, ಮೇಲ್ವಿಚಾರಕರಾದ ಮೇರಿ, ಪುಷ್ಪಾ ಇತರರಿದ್ದರು.