ಲೋಕಾಪುರ: ಬಸವಣ್ಣನವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಸಾಕಷ್ಟು ಶ್ರಮಿಸಿದ್ದು, ಅವರ ತತ್ವಾದರ್ಶಗಳನ್ನು ಇಂದಿನ ಯುವ ಪೀಳಿಗೆ ಪಾಲಿಸಬೇಕು ಎಂದು ಹಿರಿಯ ಮುಖಂಡ ವಿ.ಎಂ. ತೆಗ್ಗಿ ಹೇಳಿದರು.

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬಸವ ಜಯಂತಿ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಶ್ವಗುರು ಬಸವಣ್ಣನವರು 12ನೇ ಶತಮಾನದಲ್ಲಿ ಭಕ್ತಿಯ ಮೂಲಕ ಆಧ್ಯಾತ್ಮಿಕ ಜ್ಞಾನೋದಯ ಪ್ರಚಾರ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಅನುಭವ ಮಂಟಪ ಸ್ಥಾಪಿಸುವ ಮೂಲಕ ಎಲ್ಲ ವರ್ಗದ ಜನರಿಗೆ ಅವಕಾಶ ಕಲ್ಪಿಸುವುದರೊಂದಿಗೆ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಶ್ರಮದ ಪ್ರಾಮುಖ್ಯತೆ ಸಾರಿದ್ದಾರೆ. ವಿಶ್ವದ ಪ್ರಥಮ ಸಂಸತ್ತು ಅನುಭವ ಮಂಟಪದ ಸಂಸ್ಥಾಪಕರಾಗಿ ವಿಶ್ವಕ್ಕೆ ಪ್ರಜಾತಂತ್ರದ ಮಹತ್ವ ಸಾರಿದ್ದು ಅವರು ಹಾಕಿಕೊಟ್ಟ ಆದರ್ಶದ ಮಾರ್ಗದಲ್ಲಿ ನಾವೆಲ್ಲ ಸಾಗಬೇಕಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಶಿವಾನಂದ ಉದಪುಡಿ ಮಾತನಾಡಿ, ಜಾತಿ ವ್ಯವಸ್ಥೆ ಸಾಮಾಜಿಕ ತಾರತಮ್ಯ ಶೋಷಣೆ, ಮೂಢನಂಬಿಕೆಯ ವಿರುದ್ಧ ಸಮರ ಸಾರಿದ ಬಸವೇಶ್ವರರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಅವರು ಕೇವಲ ಒಂದು ಜಾತಿಗೆ ಆಥವಾ ಒಂದು ರಾಜ್ಯಕ್ಕೆ ಸೀಮಿತವಲ್ಲದ ವ್ಯಕ್ತಿ ಎಂದು ಬಣ್ಣಿಸಿದರು.
ಲಿಂಗಾಯತ ಸಮಾಜದ ಹಿರಿಯ ಮುಖಂಡ ಎಸ್.ಎನ್.ಹಿರೇಮಠ, ಗಣಿ ಉದ್ಯಮಿ ರವಿ ಬೋಳಿಶೆಟ್ಟಿಯವರು ಮಾತನಾಡಿದರು.
ಸ್ಥಳೀಯ ಮುಖಂಡರಾದ ಲೋಕಣ್ಣ ಕೊಪ್ಪದ, ಅಡಿವೆಪ್ಪ ಕೃಷ್ಣಗೌಡರ, ಬಸವರಾಜ ಕಾರತಕಿ, ಶಿವಪ್ಪ ಚೌಧರಿ, ಸಂಗಮೇಶ ಪಲ್ಲೇದ, ಸುರೇಶ ಹವಳಖೋಡ, ಸುರೇಶ ಅಂಕಲಗಿ, ಗುರುರಾಜ ಉದಪುಡಿ, ಮಲ್ಲಪ್ಪ ಅಂಗಡಿ, ವಿರುಪಾಕ್ಷಪ್ಪ ಮುದಕವಿ, ಮುತ್ತಪ್ಪ ಚೌಧರಿ, ಚನ್ನವೀರ ಮುದ್ನೂರ, ವಿವೇಕಾನಂದ ಹವಳಖೋಡ, ಎಂ.ಎಂ.ರಾಮದುರ್ಗ, ಶಾಂತೇಶ ಬೋಳಿಶೆಟ್ಟಿ, ಸದಾಶಿವ ನಾವಿ, ಪ್ರಭು ಬೋಳಿಶೆಟ್ಟಿ, ಕಾಶಿನಾಥ ಬೋಳಿಶೆಟ್ಟಿ, ಬಸವರಾಜ ಕುಂದರಗಿ, ಲೋಕಣ್ಣ ಶೆಟ್ಟರ, ಸುಭಾಸ ಗಸ್ತಿ, ಚನ್ನಬಸು ಹುಬ್ಬಳ್ಳಿ, ಕುಮಾರ ಪತ್ತಾರ, ಶಿವಾನಂದ ಹವಳಖೋಡ ಮತ್ತಿತರು ಇದ್ದರು.