ಶ್ರೀ ದೇವಿರಮ್ಮ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ಜಾತ್ರೆ
ಆಲೂರು : ಕಣತೂರು ಗ್ರಾಮದೇವತೆ ಶ್ರೀ ದೇವಿರಮ್ಮ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿ ಅವರ ಜಾತ್ರೆ, ಕೊಂಡೋತ್ಸವ, ಸಿಡಿ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶನಿವಾರ ಬಹಳ ವಿಜೃಂಭಣೆಯಿಂದ ನಡೆಯಿತು.
ತಾಲೂಕಿನ ಪಾಳ್ಯ ಹೋಬಳಿ ಕಣತೂರು ಗ್ರಾಮದಲ್ಲಿ ನೆಲೆಸಿರುವ ಶ್ರೀ ದೇವಿರಮ್ಮ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯು ದೇವಿರಮ್ಮನ ಸಹೋದರಿಯರಾದ ವಲಹಳ್ಳಿ ಮತ್ತು ಕಾಮತಿ ಗ್ರಾಮದ ನೆಲೆಸಿರುವ ಶ್ರೀ ಮುದಿಯಮ್ಮ, ಶ್ರೀ ಕೆಂಪಮ್ಮ ಶ್ರೀ ಬೆಳ್ಳಿ ಮುಖದಮ್ಮ ದೇವರುಗಳು, ಕಣತೂರು ಗ್ರಾಮ ಶ್ರೀ ದೇವಿರಮ್ಮನ ದೇವಿಯೂ ಸೇರಿ ಎಲ್ಲರೂ ಕಣತೂರು ಗ್ರಾಮದ ಆಂಜನೇಯ ದೇವಸ್ಥಾನದ ಪಕ್ಕದಲ್ಲಿರುವ ಗಂಗೆಕಟ್ಟೆಯ ಬಳಿ ತೆರಳಿದಾಗ ಲ್ಲಿ ಗಂಗೆಪೂಜೆ ಸಲ್ಲಿಸುವ ಮೂಲಕ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಗಾಮದ ಮುತ್ತೈದೆಯರು ದೇವಿಯರಿಗೆ ಮಡಿಲಕ್ಕಿ ಕೊಡುತ್ತಾರೆ. ನಂತರ ದೇವೀರಮ್ಮನವರ ಮತ್ತು ವೀರಭದ್ರಸ್ವಾಮಿಯ ಉತ್ಸವ ನಡೆಯಿತು. ರಾತ್ರಿಯಿಡೀ ಚೋಮ ದೇವರ ಕುಣಿತವನ್ನು ಭಕ್ತರು ಕಣ್ಣುಂಬಿಕೊಂಡರು. ಯುವಕರು ಕರ್ಪೂರ ಹಚ್ಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಶನಿವಾರ ಬೆಳಗಿನ ಜಾವ ದೇವಸ್ಥಾನದ ಆವರಣದಲ್ಲಿ ಎಲ್ಲ ದೇವರ ಮೂರ್ತಿಗಳಿಗೆ ವಿಶೇಷ ಪೂಜೆ ಮಾಡಿ ಪೂಜೆ ನಂತರ ದೇವಾಲಯದ ಮುಂಭಾಗ 7.15 ಕ್ಕೆ ಕೊಂಡೋತ್ಸವಕ್ಕೆ ಚಾಲನೆ ನೀಡಲಾಯಿತು. ಗ್ರಾಮದ ಯುವಕರು ದೇವರ ಅಡ್ಡೆಗಳನ್ನು ಹೊತ್ತು ಕೆಂಡ ತುಳಿದು ಭಕ್ತಿಪರವಶರಾದರು. ಸಿಡಿ ಕಾರ್ಯವನ್ನು ಪ್ರತಿ ವರ್ಷ ನಡೆಸಿಕೊಂಡು ಬಂದಿರುವ ಕಣತೂರು ಗ್ರಾಮದ ಪಾಲಾಕ್ಷ ರವರು ಕಳೆದ ಮೂರು ದಿನಗಳಿಂದ ಉಪವಾಸ ವ್ರತ ಕೈಗೊಂಡು ಸಿಡಿ ಮಹೋತ್ಸವವನ್ನು ಯಶಸ್ವಿಯಾಗಿ ನೆರವೇರಿಸಿದರು.
ಕಣತೂರು, ಕೊಡಗಿಹಳ್ಳಿ, ಡೀಪ್ ಕಟ್ಟಿಂಗ್, ನಾಕಲಗೂಡು, ಕುಂಬಾರಹಳ್ಳಿ, ಗೇಕರವಳ್ಳಿ, ತೊರಳ್ಳಿ, ಭಾವಸುವಳ್ಳಿ, ಸಿದ್ದಾಪುರ, ಕೋಡಿಗೆಹಳ್ಳಿ, ಹಳೆ ಆಲೂರು, ಮರಸು, ಟಿ. ಗುಡ್ಡನಹಳ್ಳಿ, ತಾಳೂರು, ಚಿಕ್ಕಕಣಗಾಲು ಕಾರ್ಜುವಳ್ಳಿ, ಕಾಮತಿ, ವಲ್ಲಳ್ಳಿ ಸೇರಿದಂತೆ ಆಲೂರು, ಹಾಸನ ಮುಂತಾದ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ಅಲಂಕೃತಗೊಂಡಿದ್ದ ದೇವೀರಮ್ಮ ಹಾಗೂ ಶ್ರೀ ವೀರಭದ್ರೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಆಲೂರು ಪೊಲೀಸ್ ಠಾಣೆಯ ವತಿಯಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ ನೆರೆದಿದ್ದ ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.