ಹಿರೀಸಾವೆ : ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯೊಬ್ಬರ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಆಕೆಯ ಕುಟುಂಬದ ಸದಸ್ಯರು ನೋವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಹಿರೀಸಾವೆ ಹೋಬಳಿ ಹೊನ್ನಶೆಟ್ಟಿಹಳ್ಳಿ ನಿವಾಸಿ ಎಚ್.ಎಸ್. ರಮ್ಯಾ(28) ಜ.9ರಂದು ತಮ್ಮ ಪತಿ ಮಂಜೇಗೌಡರ ಜತೆಯಲ್ಲಿ ಬೈಕ್ನಲ್ಲಿ ಹಿರಿಸಾವೆ ಹೋಬಳಿ ಕಾವಲುಬಾರ ಗ್ರಾಮದಲ್ಲಿ ಹೋಗುತ್ತಿದ್ದಾಗ ಹಿಂಬದಿಯಿಂದ ಬಂದ ಬೈಕ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ತಲೆಗೆ ತೀವ್ರ ಗಾಯವಾಗಿತ್ತು. ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಗಾಯಾಳುವನ್ನು ಪರೀಕ್ಷಿಸಿದ ನರರೋಗ ತಜ್ಞ ಡಾ. ಗುರುಪ್ರಸಾದ್ ಅವರ ತಂಡವು ಆಕೆಯ ಮಿದುಳು ನಿಷ್ಕ್ರಿಯವಾಗಿರುವುದನ್ನು ಖಚಿತಪಡಿಸಿದರು. ಇದಾದ ನಂತರ ರಮ್ಯಾ ಕುಟುಂಬದವರು ಆದಿಚುಂಚನಗಿರಿ ಆಸ್ಪತ್ರೆಗೆ ಅಂಗಾಂಗಳನ್ನು ದಾನ ಮಾಡಲು ನಿರ್ಧರಿಸಿದರು. ಆಸ್ಪತ್ರೆಯ ಮುಖ್ಯಸ್ಥ ಡಾ.ಕೆ.ಎಂ.ಶಿವಕುಮಾರ್ ಮಾರ್ಗದರ್ಶನದಂತೆ ನುರಿತ ತಜ್ಞರ ಸಹಾಯದಿಂದ ಅಂಗಾಂಗಗನ್ನು ದಾನ ಮಾಡಿದರು.
ಒಂದು ಮೂತ್ರಪಿಂಡವನ್ನು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಆದಿಚುಂಚನಗಿರಿಯ ಮೂತ್ರಪಿಂಡ ತಜ್ಞರಾದ ಡಾ.ನರೇಂದ್ರ, ಡಾ.ಅನಿಲ್ ಮತ್ತು ಡಾ.ನಂದೀಶ್ ಅವರ ಸಹಕಾರದಿಂದ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಲಾಯಿತು. ಜತೆಗೆ ಅದೇ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಕಣ್ಣುಗಳನ್ನು ಅಂಗಾಂಗ ಕಸಿ ಮಾಡಲಾಯಿತು. ಹೃದಯ ಮತ್ತು ಹೃದಯದ ನಾಳಗಳನ್ನು ಬೆಂಗಳೂರಿನ ನಾರಾಯಣ ಹೃದಯಾಲಯ, ಮತ್ತೊಂದು ಕಿಡ್ನಿಯನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆ, ಯಕೃತ್ತನ್ನು (ಲಿವರ್) ಬೆಂಗಳೂರಿನ ಬಿ.ಜಿ.ಎಸ್. ಅಪೊಲೋ ಆಸ್ಪತ್ರೆಗೆ ಜೀರೋ ಟ್ರಾಫಿಕ್ ಮೂಲಕ ರವಾನಿಸಲಾಯಿತು. ಪತ್ನಿ ಸಾವಿನ ನೋವಲ್ಲೂ ಅಂಗಾಂಗಗಳನ್ನು ದಾನ ಮಾಡಿ ಐವರು ರೋಗಿಗಳಿಗೆ ಜೀವದಾನ ಮಾಡಿದ ರಮ್ಯಾ ಪತಿ ಜವರೇಗೌಡ ಹಾಗೂ ಕುಂಟುಂಬಸ್ಥರ ನಡೆ ಮಾದರಿಯಾಗಿದ್ದು, ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.