ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದ ಎಲ್ಲ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಕಾಯಂಗೊಳಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದ್ದರೂ ಡೆತ್ ವಾರಂಟ್ ಜಾರಿ ಮಾಡಲು ಸಮಯ ಕಾಯ್ದಿರಿಸಿದ್ದ ದೆಹಲಿ ಪಟಿಯಾಲಾ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.
ನಾಲ್ವರು ಅಪರಾಧಿಗಳಿಗೂ ಇಂದು ಡೆತ್ ವಾರಂಟ್ ಜಾರಿ ಮಾಡಿದ ದೆಹಲಿ ಪಟಿಯಾಲಾ ನ್ಯಾಯಾಲಯ, ಜನವರಿ 22ರಂದು ಬೆಳಗ್ಗೆ 7 ಗಂಟೆಗೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಲು ಆದೇಶ ಹೊರಡಿಸಿದೆ. ಪ್ರಕರಣ ನಡೆದ ಏಳುವರ್ಷಗಳ ಬಳಿಕ ಅಂತಿಮ ತೀರ್ಪು ಹೊರಬಿದ್ದಿದೆ.
ಇಂದು ನಾಲ್ವರು ಅಪರಾಧಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ ವಿಚಾರಣೆ ಮಾಡಿದರು.
ಸುಪ್ರೀಂಕೋರ್ಟ್ ಎಲ್ಲ ಅಪರಾಧಿಗಳ ಮರುಪರಿಶೀಲನಾ ಅರ್ಜಿಯನ್ನೂ ವಜಾ ಮಾಡಿತ್ತು. ಅಪರಾಧಿಗಳಾದ ಪವನ್, ವಿನಯ್, ಅಕ್ಷಯ್ ಹಾಗೂ ಮುಕೇಶ್ಗೆ ಗಲ್ಲು ಶಿಕ್ಷೆ ಕಾಯಂ ಎಂದು ಡಿ.18ರಂದು ತೀರ್ಪು ನೀಡಿತ್ತು. ಅದರ ಬೆನ್ನಲ್ಲೇ ನಿರ್ಭಯಾ ಪಾಲಕರು, ಕೂಡಲೇ ಡೆತ್ ವಾರಂಟ್ ಜಾರಿ ಮಾಡುವಂತೆ ದೆಹಲಿ ಪಟಿಯಾಲಾ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಆದರೆ ಅಪರಾಧಿಗಳಿಗೆ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಎಂದು ಹೇಳಿದ್ದ ನ್ಯಾಯಾಧೀಶ ಸತೀಶ್ ಕುಮಾರ್ ಅರೋರಾ ಅರ್ಜಿ ವಿಚಾರಣೆಯನ್ನು ಜನವರಿ 7 (ಇಂದು)ಕ್ಕೆ ಮುಂದೂಡಿದ್ದರು. (ಏಜೆನ್ಸೀಸ್)