ವಿಜಯಪುರ: ಭಗವಾನ ಶ್ರೀರಾಮ, ಪತ್ನಿ ಸೀತಾ ಹಾಗೂ ಸಹೋದರ ಲಕ್ಷ್ಮಣನ ಜತೆ ವನವಾಸ ಮಾಡಿದ್ದ ದಾರಿ, ಸ್ಥಳಗಳನ್ನು ಜನರಿಗೆ ಪರಿಚಯಿಸಿ, ಪೌರಾಣಿಕ ಹಿನ್ನೆಲೆ ಅರಿವು ಮೂಡಿಸಲು ಉತ್ತರ ಪ್ರದೇಶದ ಅಯೋಧ್ಯೆ ನಿವಾಸಿ ಅಭಿಷೇಕ ಸಾವಂತ ಎಂಬ ಯುವಕ 6000 ಕಿ.ಮೀ., ಸೈಕಲ್ ಯಾತ್ರೆ ಕೈಗೊಂಡಿದ್ದಾರೆ.
ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದ ಪೌರಾಣಿಕ ಮಂದಿರಕ್ಕೆ ಭೇಟಿ ನೀಡಿದ್ದ ವೇಳೆ ಅವರನ್ನು ಜನತೆ ಭವ್ಯ ಸ್ವಾಗತ ಕೋರಿದರು. 98 ದಿನಗಳ ಹಿಂದೆ ಅಯೋಧ್ಯೆ ನಗರದಿಂದ ಆರಂಭಿಸಿದ ಯಾತ್ರೆ ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ, ಛತ್ತಿಸಗಡ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಮಾರ್ಗವಾಗಿ ದಿನಾಲು 100 ಕಿ.ಮಿ. ಶ್ರಮಿಸಿದ್ದಾರೆ.
ಸೋಮವಾರ ಆಲಮೇಲ ಪಟ್ಟಣಕ್ಕೆ ಆಗಮಿಸಿದ ಮೇಲೆ, ಅವರನ್ನು ಸನ್ಮಾನಿಸಿ ವಿಜಯಪುರಕ್ಕೆ ಬೀಳ್ಕೋಡಲಾಯಿತು. ವಿಜಯಪುರ ನಗರಕ್ಕೆ ಆಗಮಿಸಿದ ಅವರನ್ನು ನಗರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ವಿವಿಧ ಯುವಕ ಸಂಘಟನೆಗಳು ಸನ್ಮಾನಿಸಿದರು. ಅಭಿಷೇಕ ಸಾವಂತ ಮಾತನಾಡಿ, ಶ್ರೀರಾಮ ವನವಾಸದ ದಿನದಲ್ಲಿ ಸಾಗಿದ ಸ್ಥಳಗಳನ್ನು ಆಯಾ ರಾಜ್ಯ ಸರ್ಕಾರಗಳು ಅಭಿವೃದ್ಧಿಪಡಿಸಿ ಆಯಾ ಸ್ಥಳಗಳಿಗೆ ಮೂಲ ಸೌಕರ್ಯ ಹಾಗೂ ಜೀರ್ಣೊದ್ಧಾರ ಮಾಡಲು ಮನವಿ ಮಾಡಿದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತರ ಫೆಡರೇಶನ್ ರಾಷ್ಟ್ರೀಯ ಅಧ್ಯಕ್ಷ ಡಾ. ಜಾವೇದ ಜಮಾದಾರ ಮಾರ್ಗದರ್ಶನ ದೇಶದ ವಿವಿಧ ರಾಜ್ಯಗಳಲ್ಲಿ ನನಗೆ ಸಹಾಯ ಮತ್ತು ಸೌಕರ್ಯ ಒದಗುವಂತೆ ಮಾಡಿದ್ದು ಮರೆಯಲಾರದ ಸಂಗತಿ ಎಂದರು.
ಯುವ ಮುಖಂಡ ರಾಜು ಗಚ್ಚಿನಮಠ ಮಾತನಾಡಿ, ಅಯೋಧ್ಯೆಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗುತ್ತಿದೆ. ಅಭಿಷೇಕ ಸಾವಂತ ಎಂಬ ಯುವಕ ಶ್ರೀರಾಮ ವನವಾಸದ ದಾರಿಯಲ್ಲಿ ಸಾಗಿ ಅಂತಹ ಸ್ಥಳಗಳನ್ನು ಗುರುತಿಸುವ ಕಾರ್ಯ ಶ್ಲಾಘನೀಯ ಎಂದರು.
ರಾಷ್ಟ್ರ ಪ್ರಶಸ್ತಿ ಪುರಸ್ಕೃತರ ೆಡರೇಶನ್ ರಾಷ್ಟ್ರೀಯ ಅಧ್ಯಕ್ಷ ಡಾ. ಜಾವೇದ ಜಮಾದಾರ ಮಾತನಾಡಿ, ನಮ್ಮ ಉತ್ತರ ಪ್ರದೇಶದ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಅಭಿಷೇಕ ಸಾವಂತ ಈ ಪವಿತ್ರವಾದ ಯಾತ್ರೆಗೆ ನಮ್ಮಲ್ಲಿ ಸಹಾಯ ಕೇಳಿದಾಗ, ನಾವು ದೇಶದ 8 ರಾಜ್ಯಗಳಲ್ಲಿ ಸಾಗುವ ಯಾತ್ರೆಗೆ ನಮ್ಮ ವಿವಿಧ ರಾಜ್ಯಗಳಲ್ಲಿ ಇರುವ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು ಎಲ್ಲಾ ರೀತಿಯ ಸಹಾಯ ಮಾಡುತ್ತಿದ್ದೇವೆ ಎಂದರು.
ಯುವ ಮುಖಂಡ ಶಿವಾನಂದ ಭೂಯ್ಯರ, ಮಹೇಶ ಬಿದನೂರ, ಜಿಲ್ಲಾ ಎನ್ಎಸ್ಎಸ್ ನೋಡಲ್ ಅಧಿಕಾರಿ ಪ್ರಕಾಶ ರಾಠೋಡ, ಮುಖಂಡರಾದ ಸಂತೋಷ ಯಂಕಪ್ಪಗೋಳ, ಅಪ್ಪು ಪೆದ್ದಿ, ಅಯೂಬ್ ಕರಜಗಿ, ಶ್ರೀಶೈಲ ಹಿರೇಮಠ, ಬಾಷಾ ಕಾಳೆ, ಸಂದೀಪ ಕುಲಕರ್ಣಿ ಉಪಸ್ಥಿತರಿದ್ದರು.