ನಂಜನಗೂಡು: ಪಟ್ಟಣದಲ್ಲಿ ಮಂತ್ರ ಮಾಂಗಲ್ಯದ ಮೂಲಕ ಅಂತರ್ಜಾತಿ ಪ್ರೇಮಿಗಳು ಹೊಸ ಬದುಕಿಗೆ ಕಾಲಿಟ್ಟಿದ್ದಾರೆ.

ನಂಜನಗೂಡು ಜನ ಸಂಗ್ರಾಮ ಪರಿಷತ್ ವತಿಯಿಂದ ನಗರದ ನಂದಿ ಕನ್ವೆನ್ಷನ್ ಹಾಲ್ನಲ್ಲಿ ಗುರುವಾರ ಎಂ. ಸಂತೋಷ್ ಕುಮಾರ್ ಹಾಗೂ ಸಿ. ರಂಜಿತಾ ಅವರ ಅಂತರ್ಜಾತಿ ವಿವಾಹವನ್ನು ಪ್ರಗತಿಪರ ಚಿಂತಕರು ಮತ್ತು ಹೋರಾಟಗಾರರು, ರೈತ ಮತ್ತು ದಲಿತ ಸಂಘಟನೆಗಳ ಸಮ್ಮುಖದಲ್ಲಿ ಸರಳವಾಗಿ ನೆರವೇರಿಸಲಾಯಿತು.
ನಂಜನಗೂಡು ತಾಲೂಕು ಮುಳ್ಳೂರು ಗ್ರಾಮದ ಎಂ. ಸಂತೋಷ್ ಕುಮಾರ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದಾರೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಸಗಾವಿ ಗ್ರಾಮದ ಸಿ. ರಂಜಿತಾ ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ. ಎರಡು ಕುಟುಂಬವನ್ನು ಒಪ್ಪಿಸಿ ಮಂತ್ರ ಮಾಂಗಲ್ಯದ ಮದುವೆಯಾಗುವ ಮೂಲಕ ಮಾದರಿಯಾಗಿದ್ದಾರೆ.
ಇವರಿಗೆ ಕುವೆಂಪು ಅವರ ಮಂತ್ರ ಮಾಂಗಲ್ಯದ ವಿವಾಹ ಸಂಹಿತೆಯನ್ನು ಮಾನವ ಬಂಧುತ್ವ ವೇದಿಕೆಯ ಮುಖ್ಯಸ್ಥ ಉಗ್ರನರಸಿಂಹೇಗೌಡ ಬೋಧಿಸಿದರು.
ಉಗ್ರನರಸಿಂಹೇಗೌಡ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ಮಾತನಾಡಿದರು. ಜನಸಂಗ್ರಾಮ ಪರಿಷತ್ ಗೌರವಾಧ್ಯಕ್ಷ ನಗರ್ಲೆ ಎಂ.ವಿಜಯಕುಮಾರ್, ರಾಜ್ಯ ಉಪಾಧ್ಯಕ್ಷ ಪ್ರಸನ್ನ, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಚುಂಚನಹಳ್ಳಿ ಮಲ್ಲೇಶ್, ತಾಲೂಕು ಸಂಚಾಲಕ ಶಂಕರಪುರ ಸುರೇಶ್, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಅಭಿ ನಾಗಭೂಷಣ್, ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ಪ್ರತಿಧ್ವನಿ ವೇದಿಕೆ ಜಿಲ್ಲಾಧ್ಯಕ್ಷ ತ್ರಿನೇಶ್, ರೈತ ಸಂಘದ ತಾಲೂಕು ಅಧ್ಯಕ್ಷ ಸತೀಶ್ ರಾವ್, ಹಿರಿಯ ದಸಂಸ ಮುಖಂಡ ಗೀಕಹಳ್ಳಿ ಮಹದೇವಸ್ವಾಮಿ, ಮಹೇಶ್ ಇತರರಿದ್ದರು.