ಅಂಕೋಲಾ: ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ಶೈಕ್ಷಣಿಕ ಬದಲಾವಣೆಗಳಿಗೆ ಅನುಗುಣವಾಗಿ ಭಾರತೀಯ ಶಿಕ್ಷಣ ವ್ಯವಸ್ಥೆ ಹೊಂದಿಕೊಳ್ಳಲು ನಾಲ್ಕು ವರ್ಷಗಳ ಸಂಯುಕ್ತ ಶಿಕ್ಷಕರ ಪದವಿ ಅನಿವಾರ್ಯವಾಗಿರುತ್ತದೆ ಎಂದು ಕವಿವಿ ಸಿಂಡಿಕೇಟ್ ಸದಸ್ಯ ಡಾ.ಶಿವಾನಂದ ನಾಯಕ ಹೇಳಿದರು.

ಇಲ್ಲಿನ ಜಿಸಿ ಕಾಲೇಜ್ನಲ್ಲಿ ಸಂಯುಕ್ತ ಬಿಇಡಿ ಕೋರ್ಸ್ ಪ್ರವೇಶ ಪರೀಕ್ಷಾರ್ಥಿಗಳಿಗೆ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಕುಮಟಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ಡಿ.ಡಿ.ಭಟ್ ಮಾತನಾಡಿ, ಶಿಕ್ಷಕರ ಪ್ರಶಿಕ್ಷಣ ಕ್ರಾಂತಿಕಾರಕವಾಗಿ ಬದಲಾಗುತ್ತಿದೆ. ಕೃತಕ ಬುದ್ಧಿಮತ್ತೆಯ ಕಾಲಘಟ್ಟದಲ್ಲಿ ಶಿಕ್ಷಕರು ಪ್ರಸ್ತುತತೆಯನ್ನು ಉಳಿಸಿಕೊಳ್ಳಲು ಕೌಶಲತೆ ಹೊಂದುವುದು ಅಗತ್ಯವಿದೆ. ಶಿಕ್ಷಕರಾಗಬೇಕೆಂಬ ಅಭಿಪ್ರೇರಣೆ ಇರುವವರು ಮಾತ್ರ ಇನ್ಮುಂದೆ ಈ ಕ್ಷೇತ್ರದಲ್ಲಿ ಉಳಿದುಕೊಳ್ಳುತ್ತಾರೆ ಎಂದರು.
ಅಂಕೋಲಾ ಸರ್ಕಾರಿ ಪದವಿಪೂರ್ವ ಕಾಲೇಜ್ನ ಉಪನ್ಯಾಸಕ ಮಹೇಶ ನಾಯಕ ಹಿಚ್ಕಡ, ಅವರ್ಸಾ ಸರ್ಕಾರಿ ಪದವಿಪೂರ್ವ ಕಾಲೇಜ್ ಉಪನ್ಯಾಸಕಿ ರೂಪಾ ಭಟ್ಟ ಕನ್ನಡ ಮತ್ತು ಇಂಗ್ಲಿಷ್ ವಿಷಯಗಳ ಕುರಿತು ತರಬೇತಿ ನೀಡಿದರು.
ಪ್ರಾಚಾರ್ಯ ಡಾ.ಎಸ್.ವಿ. ವಸ್ತ್ರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಗೆ ಪ್ರಥಮವಾಗಿ ನಮ್ಮ ಕಾಲೇಜ್ನಲ್ಲಿ ಸಂಯುಕ್ತ ಬಿಇಡಿ ಕೋರ್ಸ್ ಆರಂಭಿಸಲು ಸರ್ಕಾರದಿಂದ ಪರವಾನಗಿ ಲಭ್ಯವಾಗಿದೆ. ಈ ನಿಟ್ಟಿನಲ್ಲಿ ಟ್ರಸ್ಟ್ ಅಧ್ಯಕ್ಷರು, ಆಡಳಿತಾಧಿಕಾರಿ ಮತ್ತು ಎಲ್ಲಾ ಉಪನ್ಯಾಸಕರ ಸಹಕಾರದೊಂದಿಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದರು. ಕೆನರಾ ವೆಲ್ಪೆರ್ ಟ್ರಸ್ಟಿನ ಆಡಳಿತಾಧಿಕಾರಿ ರವೀಂದ್ರ ಕೇಣಿ, ಇತರರು ಉಪಸ್ಥಿತರಿದ್ದರು.
ಉಪನ್ಯಾಸಕಿ ಪೂರ್ಣಿಮಾ ಮುಕ್ರಿ ಪ್ರಾರ್ಥಿಸಿದರು. ಡಾ.ಪ್ರವೀಣ ನಾಯಕ, ಮಕರಂದಾ ಸಹಕರಿಸಿದರು. ಕಾರ್ಯದರ್ಶಿ ಆರ್.ಪಿ. ಭಟ್ಟ, ಗ್ರಂಥಪಾಲಕ ಡಾ.ನಂಜುಡಯ್ಯ ಹಾಗೂ ಸಂಜನಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.