ಎಚ್.ಡಿ.ಕೋಟೆ: ಪಟ್ಟಣದ 2ನೇ ಮುಖ್ಯರಸ್ತೆಯಲ್ಲಿ ಬುಧವಾರ ಹಾಡಹಗಲೇ ಖದೀಮರು ಕಾರಿನ ಗ್ಲಾಸ್ ಒಡೆದು 85 ಸಾವಿರ ರೂ. ದೋಚಿದ್ದಾರೆ.
ತಾಲೂಕಿನ ಅಣ್ಣೂರು ಹೊಸಳ್ಳಿ ಗ್ರಾಮದ ಶಿವಣ್ಣ ಅವರ ಮಗ ಕುಮಾರಸ್ವಾಮಿ ಹಣ ಕಳೆದುಕೊಂಡವರು. ಪಟ್ಟಣದ ಎಸ್ಬಿಐ ಬ್ಯಾಂಕಿನಲ್ಲಿ ಬೆಳಗ್ಗೆ ಡ್ರಾ ಮಾಡಿದ 85 ಸಾವಿರ ರೂ. ಅನ್ನು ತಮ್ಮ ಕಾರಿನ ಡ್ಯಾಶ್ ಬೋರ್ಡ್ನಲ್ಲಿ ಇಟ್ಟುಕೊಂಡು ಪಟ್ಟಣದ 2ನೇ ಮುಖ್ಯರಸ್ತೆಯ ಗಣಪತಿ ದೇವಸ್ಥಾನದ ಬಳಿ ಕಾರನ್ನು ನಿಲ್ಲಿಸಿ ತನ್ನ ಸ್ನೇಹಿತ ಆಕಾಶ್ ಬಟ್ಟೆ ಅಂಗಡಿಗೆ ಹೋಗಿ ಬರುವಷ್ಟರಲ್ಲಿ ಕಳ್ಳರು ಕಾರಿನ ಮುಂಭಾಗದ ಗ್ಲಾಸ್ ಒಡೆದು ಹಣ ದೋಚಿ ಪರಾರಿಯಾಗಿದ್ದಾರೆ.
ಕಾರಿನ ಬಳಿ ಬಂದಾಗ ಕುಮಾರಸ್ವಾಮಿ ದಿಗ್ಭ್ರಮೆಗೊಂಡು ಪಟ್ಟಣ ಪೊಲೀಸರಿಗೆ ಕಳ್ಳತನದ ವಿಷಯ ತಿಳಿಸಿದರು. ಸ್ಥಳಕ್ಕೆ ಸಬ್ಇನ್ಸ್ಪೆಕ್ಟರ್ ಎಂ.ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿರುವ ಅವರು ತನಿಖೆ ಕೈಗೊಂಡಿದ್ದಾರೆ.