ಕಾರವಾರ: ಸೇವಾ ಭದ್ರತೆ, ಕನಿಷ್ಠ ವೇತನ ಜಾರಿಗೆ ಆಗ್ರಹಿಸಿ ಅಂಗವಿಕಲ ಪಾಲಕರ ಒಕ್ಕೂಟದ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ವಿಆರ್ಡಬ್ಲ್ಯು ಹಾಗೂ ಎಂಆರ್ಡಬ್ಲ್ಯು ನೌಕರರ ಒಕ್ಕೂಟದಡಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಅಂಗವಿಕಲರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬರೆದ ಮನವಿ ಪತ್ರವನ್ನು ಉಪವಿಭಾಗಾಧಿಕಾರಿ ಪ್ರಿಯಾಂಗಾ ಎಂ.ಅವರ ಮೂಲಕ ಸಲ್ಲಿಸಿದರು.
ಅಂಗವಿಕಲರಿಗೆ ಸರ್ಕಾರದ ಸೌಲಭ್ಯ ತಲುಪಿಸುವ ಸಲುವಾಗಿ ಕಳೆದ 11 ವರ್ಷಗಳಿಂದ ಗ್ರಾಮೀಣ ಹಾಗೂ ನಗರ ಭಾಗದಲ್ಲಿ ಕಾರ್ಯನಿರ್ವಹಿಸುತ್ತ ಬಂದಿದ್ದೇವೆ. ಆದರೆ, ಗೌರವಧನದಿಂದ ಕನಿಷ್ಠ ವೈದ್ಯಕೀಯ ವೆಚ್ಚವನ್ನೂ ಭರಿಸಲು ಸಾಧ್ಯವಾಗುತ್ತಿಲ್ಲ. ಎಲ್ಲ ಅಂಗವಿಕಲರ ಪಾಲಕರನ್ನು ಕಾಯಂ ಮಾಡಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಅಧ್ಯಕ್ಷ ಅಶೋಕ ನಾಯ್ಕ, ಗೌರವ ಅಧ್ಯಕ್ಷೆ ಯಮುನಾ ಗಾಂವಕರ್, ಕಾರ್ಯದರ್ಶಿ ನಾಗಯ್ಯ, ವಿವಿಧ ತಾಲೂಕು ಸಂಘಗಳ ಮುಖಂಡರಾದ ಅಪರ್ಣಾ ಶಾಸ್ತ್ರಿ, ಶಶಿರೇಖಾ, ನಾಗೇಶ ನಾಯ್ಕ ಭಟ್ಕಳ, ಸಲೀಂ ಶೇಖ್ ಯಲ್ಲಾಪುರ, ಸುನಿತಾ ಸೋನಾಳಕರ್ ಜೊಯಿಡಾ, ರಾಮು ಗೌಡ ಹೊನ್ನಾವರ, ಪಂಡಿತ ಪಾಟೀಲ ದಾಂಡೇಲಿ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.