ಬೆಂಗಳೂರು: ಸರ್ಕಾರಿ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4 ಮೀಸಲಾತಿ ನೀಡುವ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ (ತಿದ್ದುಪಡಿ) ವಿಧೇಯಕ- 2025 ಬಿಜೆಪಿ ವಿರೋಧಗಳ ಮಧ್ಯೆಯೇ ವಿಧಾನಸಭೆ ಮತ್ತು ವಿಧಾನಪರಿಷತ್ನಲ್ಲಿ ಅಂಗೀಕಾರವಾಯಿತು.
ಸಿಎಂ ಸಿದ್ದರಾಮಯ್ಯ ಬಜೆಟ್ನಲ್ಲಿ ೋಷಣೆ ಮಾಡಿದ ದಿನದಿಂದ ವಿರೋಧಿಸುತ್ತಿದ್ದ ಬಿಜೆಪಿ ಶಾಸಕರು ಪ್ರತಿಭಟನೆಗೆ ಸಜ್ಜಾಗಿದ್ದರು. ಶುಕ್ರವಾರ ಬೆಳಗ್ಗೆ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪಿಸಿ ಪ್ರತಿಪಕ್ಷದ ನಾಯಕರು ಸ್ಪೀಕರ್ ಪೀಠದ ಮುಂದೆ ಗದ್ದಲ ಎಬ್ಬಿಸಿದ ಹಿನ್ನೆಲೆಯಲ್ಲಿ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿ ಕಲಾಪ ಮುಂದೂಡಲಾಗಿತ್ತು. ಮತ್ತೆ ಸಂಜೆ 5.20ಕ್ಕೆ ಕಲಾಪ ಶುರು ಮಾಡಿದಾಗ ಪ್ರತಿಪಕ್ಷ ನಾಯಕ ಆರ್.ಅಶೋಕ್, ಸುನೀಲ್ ಕುಮಾರ್, ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಸೇರಿ ಬಿಜೆಪಿ ಸದಸ್ಯರು ಪ್ರತಿಭಟನೆ ಮುಂದುವರಿಸಿದರು.
ಸ್ಪೀಕರ್ ಯು.ಟಿ. ಖಾದರ್, ವಿಧೇಯಕ ಮಂಡನೆಗೆ ಅವಕಾಶ ನೀಡಿದರು. ಆಗ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ.ಪಾಟೀಲ್, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮ (ತಿದ್ದುಪಡಿ) ವಿಧೇಯಕ -2025ನ್ನು ಪರ್ಯಾಲೋಚಿಸಲಾಯಿತು.
ಇದೊಂದು ಹಲಾಲ್ ವಿಧೇಯಕ, ಹಿಂದು ಮತ್ತು ಮುಸ್ಲಿಮರನ್ನು ಬೇರ್ಪಡಿಸಲು ಮಂಡಿಸಿದ ವಿಧೇಯಕ ಎಂದು ಆರ್. ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ದಲಿತರಿಗೆ ಅನ್ಯಾಯ ಮಾಡಲು ಹೊರಟಿದೆ. ಹಿಂದುಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಸುನೀಲ್ ಕುಮಾರ್ ೋಷಣೆ ಕೂಗಿದರು. ಅರವಿಂದ್ ಬೆಲ್ಲದ್, ಸ್ಪೀಕರ್ ಪೀಠದ ಬಳಿ ಹೋಗಿ ಹಲಾಲ್ ಸರ್ಕಾರ ಎಂಬ ಪೋಸ್ಟರ್ ತೋರಿಸಿದರು.
ಬಿಜೆಪಿ ಶಾಸಕರು ವಿಧೇಯಕದ ಪ್ರತಿ ಹರಿದು ಸ್ಪೀಕರ್ ಪೀಠದ ಮೇಲೆ ಎಸೆದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಏನಿದು ಶೇ.4 ಮೀಸಲಾತಿ?
ಈ ತಿದ್ದುಪಡಿ ವಿಧೇಯಕದಂತೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದಡಿ ಕಾಮಗಾರಿಗಳಲ್ಲಿ 2 ಕೋಟಿ ರೂ.ವರೆಗೆ ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ ಮತ್ತು 2ಬಿ ಗುತ್ತಿಗೆದಾರರಿಗೆ ಹಾಗೂ ಸರ್ಕಾರದ ವಿವಿಧ ಇಲಾಖೆ, ನಿಗಮ ಹಾಗೂ ಸಂಸ್ಥೆಗಳಲ್ಲಿ ಖರೀದಿಸುವ ಸರಕು ಮತ್ತು ಸೇವೆಗಳಲ್ಲಿ 1 ಕೋಟಿ ರೂ.ವರೆಗೆ ಪ.ಜಾತಿ, ಪ.ಪಂಗಡ, ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ ಮತ್ತು 2ಬಿ ಸರಬರಾಜುದಾರರಿಗೆ ಮೀಸಲಾತಿ ಒದಗಿಸುವ ಕುರಿತು ಕೆಟಿಪಿಪಿ ಕಾಯ್ದೆ 1999ಕ್ಕೆ ತಿದ್ದುಪಡಿ ತರಲಾಗಿದೆ.