ರಾಯಬಾಗ: ತಾಲೂಕಿಗೆ ಹಿಡಕಲ್ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಮಿತವಾಗಿ ಬಳಕೆ ಮಾಡಿಕೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದ ಆವರಣದಲ್ಲಿ ಸಾರ್ವಜನಿಕರಿಂದ ಭಾನುವಾರ ಅಹವಾಲು ಸ್ವೀಕರಿಸಿ, ಸುದ್ದಿಗಾರರೊಂದಿಗೆ ಮಾತನಾಡಿದರು. ತಾಲೂಕಿನ 39 ಕೆರೆ ತುಂಬಿಸುವ ಯೋಜನೆ ಮುಕ್ತಾಯ ಹಂತದಲ್ಲಿದ್ದು, ಜೂನ್ ನಂತರ ಕೆರೆಗಳಿಗೆ ನೀರು ತುಂಬಿಸಲು ಕ್ರಮ ಕೆಗೊಳ್ಳಲಾಗುವುದು. ತಾಲೂಕಿನಲ್ಲಿ ಅಪೂರ್ಣಗೊಂಡಿರುವ ರಸ್ತೆ ಕಾಮಗಾರಿಗಳನ್ನು ಶೀಘ್ರವಾಗಿ ಮುಗಿಸಲು ಕ್ರಮ ಕೆಗೊಳ್ಳುವಂತೆ ಲೋಕೋಪಯೋಗಿ ಅಭಿಯಂತ ಆರ್.ಬಿ.ಮನವಡ್ಡರ ಅವರಿಗೆ ಸೂಚಿಸಿದರು.
ಹೆಸ್ಕಾಂ ರಾಯಬಾಗ ಉಪವಿಭಾಗ ಮಟ್ಟದ ಗ್ರಾಹಕರ ಸಲಹಾ ಸಮಿತಿಗೆ ಸದಸ್ಯರಾಗಿ ನಾಮನಿರ್ದೇಶನಗೊಂಡ ತಮ್ಮಣ್ಣ ನಾಯಿಕವಾಡಿ, ಫಾರೂಕ್ ಮೊಮಿನ್, ವಿಶ್ವನಾಥ ಬೆರಡಿ, ಸುಂದರ ಕೆಳಗಡೆ, ಸೌಭಾಗ್ಯವತಿ ದಾಮೋಜಿ ಅವರಿಗೆ ಆದೇಶ ಪತ್ರ ನೀಡಿದರು. ಕೆಪಿಸಿಸಿ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ, ಬಿಡಿಸಿಸಿ ಅಧ್ಯಕ್ಷ ಅಪ್ಪಾಸಾಹೇಬ ಕುಲಗುಡೆ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ, ತಹಸೀಲ್ದಾರ್ ಸುರೇಶ ಮುಂಜೆ, ವಿ.ಎಸ್. ಚಂದರಗಿ, ಆರ್.ಬಿ. ಮನವಡ್ಡರ, ರಾಜು ಶಿರಗಾಂವೆ, ಅರ್ಜುನ ನಾಯಿಕವಾಡಿ, ದಿಲೀಪ ಜಮಾದಾರ, ಹಾಜಿ ಮುಲ್ಲಾ, ಸಿದ್ದು ಬಂಡಗರ, ಅಬ್ದುಲ್ ಸತ್ತಾರಮುಲ್ಲಾ, ಜ್ಯೋತಿ ಕೆಂಪಟ್ಟಿ, ನಿರ್ಮಲಾ ಪಾಟೀಲ ಇತರರಿದ್ದರು.