ಚಿತ್ರದುರ್ಗ: ಡಾ.ಡಿ.ಎಂ.ನಂಜುಂಡಪ್ಪ ವರದಿ ಆಧರಿಸಿ ಕಳೆದ 20ವರ್ಷಗಳ ಅವಧಿಯಲ್ಲಿ 34,381 ಕೋಟಿ ರೂ.ಖರ್ಚಾಗಿದ್ದರೂ ದಾವಣಗೆರೆ-ಚಿತ್ರದುರ್ಗ ಸಹಿತ ರಾಜ್ಯದ ನೂರಾರು ತಾಲೂಕುಗಳು ಇನ್ನೂ ಹಿಂದುಳಿವೆ ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿ ಅಧ್ಯಕ್ಷ ಪ್ರೊ. ಎಂ. ಗೋವಿಂದರಾವ್ ಹೇಳಿದರು.
ಜಿಪಂನಲ್ಲಿ ಸೋಮವಾರ ಸಮಿತಿಯ ಬೆಂಗಳೂರು ವಿಭಾಗದ ಮಟ್ಟದ ಸಂವಾದ ಸಭೆಯಲ್ಲಿ ಮಾತನಾಡಿ, ನಂಜುಂಡಪ್ಪ ಸಮಿತಿ ರಾಜ್ಯದ 175 ತಾಲೂಕುಗಳ ಪೈಕಿ, 114ನ್ನು ಹಿಂದುಳಿದಿವೆ ಎಂದು ಹಾಗೂ ಇವುಗಳಲ್ಲಿ 39 ಅತ್ಯಂತ, 40 ಅತೀ ಹಾಗೂ 35ನ್ನು ಹಿಂದುಳಿದ ತಾಲೂಕುಗಳೆಂದು ಗುರುತಿಸಿದೆ.
ನಂಜುಂಡಪ್ಪ ಶಿಫಾರಸು ಅನ್ವಯ ರಾಜ್ಯ ಸರ್ಕಾರ 2007-08ರಿಂದ 2023-24ರವರೆಗೆ 45,789 ಕೋಟಿ ರೂ. ಹಂಚಿಕೆಯಲ್ಲಿ ಬಿಡುಗೆಯಾಗಿದ್ದ 37,661 ಕೋಟಿ ರೂ. ಗಳಲ್ಲಿ 34,381 ಕೋಟಿ ರೂ. ಖರ್ಚಾಗಿದೆ. ತಾಲೂಕುಗಳ ಸಂಖ್ಯೆ 240ಕ್ಕೆ ಏರಿಕೆಯಾಗಿದೆ. ಅಭಿವೃದ್ಧಿ ಆಗದಿರುವುದಕ್ಕೆ ಕಾರಣಗಳ ಪರಿಶೀಲನೆ, ಸಮಗ್ರ ಕರ್ನಾಟಕ ಅಭಿವೃದ್ಧಿಗೆ ವಹಿಸಬೇಕಾದ ಕ್ರಮಗಳಿಗಾಗಿ ಸಿಎಂ ಸಿದ್ದರಾಮಯ್ಯ ಈ ಸಮಿತಿ ರಚಿಸಿದ್ದಾರೆ ಎಂದರು.
ಪ್ರಾಥಮಿಕ ಶಿಕ್ಷಣ ಬಲಪಡಿಸುವ ಮೂಲಕ ಮಕ್ಕಳಿಗೆ ಒಳ್ಳೆಯ ಶಿಕ್ಷಣಕ್ಕೆ ಬುನಾದಿ ಒದಗಿಸಬೇಕಿದೆ. ಅಂತಿಮ ವರದಿಯನ್ನು ಸೆಪ್ಟೆಂಬರ್ ಅಂತ್ಯದೊಳಗೆ ಸಲ್ಲಿಸಲಾಗುವುದು. ಸಮಿತಿ 18 ಜಿಲ್ಲೆಗಳಲ್ಲಿ ಪ್ರವಾಸ ನಡೆಸಿದೆ ಎಂದರು.

ವಿಶೇಷ ಪ್ಯಾಕೇಜ್ಗೆ ಆಗ್ರಹ
ಕಲ್ಯಾಣ ಕರ್ನಾಟಕ ಜಿಲ್ಲೆಗಳಿಗೆ ಕೊಟ್ಟಿರುವ ಮಾದರಿಯಲ್ಲಿ ಚಿತ್ರದುರ್ಗ ಜಿಲ್ಲೆಗೆ 10 ವರ್ಷಗಳ ಅವಧಿಗೆ ವಿಶೇಷ ಪ್ಯಾಕೇಜ್ಗೆ ಶಿಫಾರಸು ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಸಲಹೆ ನೀಡಿದರು.
ನಮ್ಮ ಜಿಲ್ಲೆಯ ಜನಸಂಖ್ಯೆ ಪೈಕಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರು ಶೇ.90 ಇದ್ದಾರೆ. ಪ್ರತಿ ತಾಲೂಕಿನಿಂದಲೂ ಸಾವಿರಾರು ಹೆಣ್ಣು ಮಕ್ಕಳು ಗಾರ್ಮೆಂಟ್ಸ್ ಕೆಲಸಕ್ಕೆ ಬೆಂಗಳೂರಿಗೆ ಹಾಗೂ ಜನರು ಉದ್ಯೋಗ ಅರಸಿ ಬೆಂಗಳೂರು ಮತ್ತಿತರೆಡೆ ವಲಸೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿ ಕೈಗಾರಿಕೆಗಳ ಅವಶ್ಯಕತೆ ಇದೆ ಎಂದರು.
ಕೆಆರ್ಎಸ್ ಮಾದರಿಯಲ್ಲಿ ವಾಣಿವಿಲಾಸ ಸಾಗರದಲ್ಲಿ ಉದ್ಯಾನ ನಿರ್ಮಿಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ಎಸ್ಐಡಿಬಿಐ ಬ್ಯಾಂಕ್
ನಂಜುಡಪ್ಪ ವರದಿ ಆಧರಿಸಿ ಸಾವಿರಾರು ಕೋಟಿ ರೂ.ವೆಚ್ಚವಾಗಿದ್ದರೂ ಹಿಂದುಳಿದ ತಾಲೂಕುಗಳಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಆಗಿಲ್ಲವೆಂದು ಸಂಸದ ಗೋವಿಂದ ಎಂ. ಕಾರಜೋಳ ವಿಷಾದಿಸಿದರು.
ಅನುದಾನ ಸದ್ಬಳಕೆ ಕುರಿತು ಮೌಲ್ಯಮಾಪನ ನಡೆಸುವಂತೆ ಸಮಿತಿಯನ್ನು ಕೋರಿದರು. ಸದಾ ಬರಗಾಲಕ್ಕೆ ತುತ್ತಾಗುವ 16 ಜಿಲ್ಲೆಗಳ ಪೈಕಿ ಚಿತ್ರದುರ್ಗ ಮೊದಲ ಸ್ಥಾನದಲ್ಲಿದೆ. ಇಲ್ಲಿ ಮಳೆ ಆಶ್ರಿತ ಒಣ ಬೇಸಾಯವಿದೆ. ಬ್ಯಾಂಕ್ಗಳಿಂದ ನಿರೀಕ್ಷಿತ ಮಟ್ಟದಲ್ಲಿ ಸಾಲ ಸೌಲಭ್ಯವಿಲ್ಲ. ಸಂಸ್ಕರಿಸಿದ ಖನಿಜ ರಫ್ತು ಅಭಿವೃದ್ಧಿಗೆ ಪೂರಕವಾಗಲಿದೆ. ಜಿಲ್ಲೆಗೆ ಎಸ್ಐಡಿಬಿ(ಖಞಚ್ಝ್ಝ ಐ್ಞಛ್ಠಠ್ಟಿಜಿಛಿ ಈಛಿಛ್ಝಿಟಞಛ್ಞಿಠಿ ಆಚ್ಞ ಟ್ಛ ಐ್ಞಜಿ)ಗಾಗಿ ಕೇಂದ್ರಕ್ಕೆ ಈಗಾಗಲೇ ಶಿಫಾರಸು ಮಾಡಿದ್ದೇನೆ ಎಂದರು.
————-
ಹೋಬಳಿಗಳನ್ನೂ ಪರಿಗಣಿಸಿ
ಸೂಚ್ಯಂಕದಲ್ಲಿ ಹೋಬಳಿಯನ್ನು ಘಟಕವನ್ನಾಗಿ ಪರಿಗಣಿಸಿ ವರದಿ ಸಲ್ಲಿಸಬೇಕೆಂದು ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ ಹೇಳಿದರು. ಜಿಲ್ಲೆಯ ಆರು ತಾಲೂಕುಗಳಲ್ಲಿ 1ಅತ್ಯಂತ, 5 ಹಿಂದುಳಿದ ತಾಲೂಕುಗಳಿವೆ. 3724 ಕೋಟಿ ರೂ.ಕೆಎಂಇಆರ್ಸಿ ಅನುದಾನ ಹೊಳಲ್ಕೆರೆ, ಹೊಸದುರ್ಗ ಹಾಗೂ ಚಿತ್ರದುರ್ಗ ತಾಲೂಕುಗಳಿಗೆ ಸೀಮಿತವಾಗಿದೆ. ಆದ್ದರಿಂದ ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮೂರಿಗೆ ಪ್ರತ್ಯೇಕ ಅನುದಾನದ ಅಗತ್ಯವಿದೆ. ಚಳ್ಳಕೆರೆಯಲ್ಲಿ ಡಿಆರ್ಡಿಒ, ಇಸ್ರೋ, ಬಾರ್ಕ್, ಇಂಡಿಯನ್ ಇನ್ಸಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗಳಿರುವುದರಿಂದ ಜಿಲ್ಲೆಗೆ ಇಂಡಸ್ಟ್ರೀಯಲ್ ಕಾರಿಡಾರ್ ಅಗತ್ಯವಿದೆ ಎಂದರು.
ಶಾಸಕರಾದ ಕೆ.ಸಿ. ವೀರೇಂದ್ರಪಪ್ಪಿ, ಎನ್.ವೈ. ಗೋಪಾಲಕೃಷ್ಣ, ಡಾ.ಎಂ. ಚಂದ್ರಪ್ಪ, ಎಂಎಲ್ಸಿಗಳಾದ ಡಿ.ಟಿ. ಶ್ರೀನಿವಾಸ್, ಕೆ.ಎಸ್. ನವೀನ್, ಡಿಸಿ ಟಿ. ವೆಂಕಟೇಶ್ ಹಾಗೂ ಉದ್ದಿಮೆದಾರರು, ಶಿಕ್ಷಣ ತಜ್ಞರು ತಮ್ಮ ಸಲಹೆಗಳನ್ನು ನೀಡಿದರು.
ಸಮಿತಿ ಸದಸ್ಯ ಕಾರ್ಯದರ್ಶಿ ಡಾ. ಆರ್. ವಿಶಾಲ್, ಸದಸ್ಯರಾದ ಡಾ.ಎಸ್.ಟಿ. ಬಾಗಲಕೋಟೆ, ಕೆ.ಎನ್. ಸಂಗೀತ, ಯೋಜನಾ ಇಲಾಖೆ ನಿರ್ದೇಶಕ ಡಿ. ಚಂದ್ರಶೇಖರಯ್ಯ, ಎಡಿಸಿ ಬಿ.ಟಿ. ಕುಮಾರಸ್ವಾಮಿ, ದಾವಣಗೆರೆ ಎಡಿಸಿ ಪಿ.ಎನ್.ಲೋಕೇಶ್ ಇತರರು ಇದ್ದರು.
—————-
ಶಕ್ತಿವಂತರ ಪಾಲು
ನಂಜುಂಡಪ್ಪ ವರದಿ ಹಿನ್ನೆಲೆಯಲ್ಲಿ ಬಿಡುಗಡೆಯಾದ ಅನುದಾನ ಅಧಿಕಾರ, ಪ್ರಭಾವಿ ಸಚಿವರು ಹಾಗೂ ಶಕ್ತಿವಂತರ ಪಾಲಾಗುತ್ತಿದೆ ಎಂದು ಮೊಳಕಾಲ್ಮೂರು ಶಾಸಕ ಎನ್.ವೈ. ಗೋಪಾಲಕೃಷ್ಣ ಅಸಮಾಧಾನ ವ್ಯಕ್ತಪಡಿಸಿದರು. ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ವಿಶೇಷ ಅಭಿವೃದ್ಧಿ ಕಾರ್ಯಕ್ರಮ ಕೇವಲ ಹೆಸರಿಗೆ ಎಂಬಂತಾಗಿದೆ. ಪ್ಲಾನಿಂಗ್ ಮಂತ್ರಿಗಳು ನಮ್ಮವರಾಗಿದ್ದರೂ ಅನುದಾನ ಕನ್ನಡಿಯೊಳಗಿನ ಗಂಟಾಗಿದೆ ಎಂದರು.
———
ಪ್ರವಾಸೋದ್ಯಮಕ್ಕೆ ಸಿಗಲಿ ಒತ್ತು
ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೇರಳ ಅವಕಾಶವಿದೆ ಎಂದು ಚಿತ್ರದುರ್ಗ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು. ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದರೆ ಜಿಲ್ಲೆಯು ಅಭಿವೃದ್ಧಿ ಜತೆಗೆ ಸ್ವಯಂ ಉದ್ಯೋಗ ಸೃಷ್ಟಿಯಾಗಲಿದೆ. ದುರ್ಗದ ಏಳು ಸುತ್ತಿನ ಕೋಟೆ, ಚಂದ್ರವಳ್ಳಿ, ದವಳಪ್ಪನಗುಡ್ಡ, ಆಡುಮಲ್ಲೇಶ್ವರ, ಜೋಗಿಮಟ್ಟಿ, ಪುರಾತನ ದೇಗುಲಗಳು, ವಿವಿ ಸಾಗರದಲ್ಲಿ ಬೋಟಿಂಗ್ ಹೀಗೆ ಜಿಲ್ಲೆಯಲ್ಲಿರುವ ಪ್ರವಾಸೋದ್ಯಮ ಅಭಿವೃದ್ಧಿಗೆ ಇರುವ ಅವಕಾಶಗಳನ್ನು ವಿವರಿಸಿದರು. ಭದ್ರಾಮೇಲ್ದಂಡೆ ಹಾಗೂ ಚಿತ್ರದುರ್ಗ ನಗರದ ಒಳಚರಂಡಿ ಅವ್ಯವಸ್ಥೆ ಸಹಿತ ನಾನಾ ಸಮಸ್ಯೆಗಳನ್ನು ಅನಾವರಣಗೊಳಿಸಿದರು.
————
100 ಕೋಟಿ ಬಿಡುಗಡೆಗೆ ಮನವಿ
ದುರ್ಗದ ತಾಮ್ರ ಅದಿರಿನ ಗಣಿಗಾರಿಕೆ ಪುನಶ್ಚೇತನಕ್ಕೆ ರೂ.100 ಕೋಟಿ ಬಿಡುಗಡೆ ಮಾಡಿದರೆ ಉದ್ಯೋಗವಕಾಶಗಳು ಹೆಚ್ಚಾಗುತ್ತದೆ. ಹೊಸದುರ್ಗ ತಾಲೂಕನ್ನು ರಾಷ್ಟ್ರೀಯ ಸಿರಿಧಾನ್ಯಗಳ ವಲಯವನ್ನಾಗಿ ಘೋಷಿಸಬೇಕೆಂದು ಎಂಎಲ್ಸಿ ಕೆ.ಎಸ್.ನವೀನ್ ಹೇಳಿದರು.
———
ಶೇ.30 ಜನರ ವಲಸೆ
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, 100 ವರ್ಷಗಳಲ್ಲಿ ಜಿಲ್ಲೆ 79 ವರ್ಷಗಳ ಕಾಲ ಬರಗಾಲಕ್ಕೆ ತುತ್ತಾಗಿದೆ. ಶೇ.30 ಜನರು ಕೆಲಸಕ್ಕಾಗಿ ಬೆಂಗಳೂರಿಗೆ ವಲಸೆ ಹೋಗುತ್ತಾರೆ. ನಂಜುಂಡಪ್ಪ ವರದಿ ಅನುದಾನದಿಂದ ಸರ್ವಾಂಗೀಣ ಅಭಿವೃದ್ಧಿ ಆಗಿಲ್ಲ. ಶಿಕ್ಷಣದಲ್ಲಿ 26ನೇ ಸ್ಥಾನದಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
———–
ಎಸ್ಟಿಗೆ ಸೇರಿಸಲು ಒತ್ತಾಯ
ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜತೆಗೆ ಕಾಡುಗೊಲ್ಲ ಸಮುದಾಯವೂ ಹೆಚ್ಚಿನ ಜನಸಂಖ್ಯೆ ಹೊಂದಿದೆ ಎಂದು ಎಂಎಲ್ಸಿ ಡಿ.ಟಿ. ಶ್ರೀನಿವಾಸ್ ಹೇಳಿದರು. ಈಗಾಗಲೇ ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ. ಸಮಿತಿ ಈ ಅಂಶಗಳನ್ನು ಗಮನದಲ್ಲಿರಿಸಿಕೊಂಡು, ಜಿಲ್ಲೆಯ ಶಿಕ್ಷಣ ಹಾಗೂ ಉದ್ಯೋಗಕ್ಕೆ ಆದ್ಯತೆ ನೀಡುವ ನಿಟ್ಟಿನಲ್ಲಿ ಶಿಫಾರಸ್ಸು ಮಾಡಬೇಕೆಂದರು.
——-