More

    ಜ.28ರಿಂದ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಂದ ಮುಷ್ಕರ

    ಚಿಕ್ಕಬಳ್ಳಾಪುರ:  ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರಿಗೆ ಹಿಂಬಡ್ತಿ ನೀಡುತ್ತಿರುವ ಸರ್ಕಾರದ ಧೋರಣೆ ಖಂಡಿಸಿ, ಜ.28ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘ ಮುಷ್ಕರ ಹಮ್ಮಿಕೊಂಡಿದೆ.
    ಹೊಸ ನೇಮಕಾತಿ ಮಾಡಿಕೊಳ್ಳುವ ಮೂಲಕ 14 ವರ್ಷಗಳಿಂದಲೂ 6 ರಿಂದ 8 ನೇ ತರಗತಿಗೆ ಬೋಧಿಸುತ್ತಿರುವ ಪದವೀಧರ ಶಿಕ್ಷಕರಿಗೆ ಹಿಂಬಡ್ತಿ ನೀಡಲು ಮುಂದಾಗಿರುವುದು ಸರಿಯಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಷಫಿವುಲ್ಲಾ ಅಸಮಾಧಾನ ವ್ಯಕ್ತಪಡಿಸಿದರು.
    1 ರಿಂದ 7 ನೇ ತರಗತಿಗೆ ನೇಮಕವಾದ ಪ್ರಾಥಮಿಕ ಶಾಲಾ ಶಿಕ್ಷಕರನ್ನು 2005 ರಿಂದ 8 ನೇ ತರಗತಿಗೂ ಬೋಧಿಸಲು ನಿಯೋಜಿಸಲಾಯಿತು. ರಾಜ್ಯದಲ್ಲಿ ಬಿಎ, ಬಿಎಸ್ಸಿ, ಎಂಎ, ಎಂಸ್ಸಿ, ಬಿಇಡಿ, ಎಂಇಡಿ, ಪಿಎಚ್‌ಡಿ ಮಾಡಿದ ಶಿಕ್ಷಕರಿದ್ದಾರೆ. ಆದರೆ, ಇವರನ್ನು ಪದವೀಧರ ಶಿಕ್ಷಕರನ್ನಾಗಿ ಪರಿಗಣಿಸುತ್ತಿಲ್ಲ, ಈ ಬಗ್ಗೆ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಕಿವಿಗೊಡದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದಾಗ ನಿಯಮ ತಿದ್ದುಪಡಿ ಭರವಸೆ ನೀಡಲಾಗಿತ್ತು. ಆದರೆ, ಇದುವರೆಗೂ ಈಡೇರಿಸಿಲ್ಲ ಎಂದು ಆರೋಪಿಸಿದರು.
    ಇತ್ತೀಚೆಗೆ ದಾವಣಗೆರೆಯಲ್ಲಿ ಆಯೋಜಿಸಿದ್ದ ರಾಜ್ಯ ಕಾರ್ಯಕಾರಿಣಿ ಸಭೆಯ ತೀರ್ಮಾನದಂತೆ ಜ.28 ರಂದು ಹೋರಾಟ ನಡೆಸುತ್ತಿದ್ದು ರಾಜ್ಯಾದ್ಯಂತ 6 ರಿಂದ 8 ನೇ ತರಗತಿ ಬೋಧನೆಯನ್ನು ಅನಿರ್ದಿಷ್ಟಾವಧಿಯವರೆಗೂ ಬಹಿಷ್ಕರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
    ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಬಿ.ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಎಂ.ಎನ್.ವೆಂಕಟೇಶ್, ನಿರ್ದೇಶಕ ಡಿ.ಎಂ.ರಾಮಯ್ಯ, ತಾಲೂಕು ಅಧ್ಯಕ್ಷ ಗೋವಿಂದರಾಜ್ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts