ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ ದಟ್ಟಗಳ್ಳಿಯಲ್ಲಿರುವ 27.34 ಎಕರೆ ಜಾಗದಲ್ಲಿ ಖಾಸಗಿ ವ್ಯಕ್ತಿಗಳು ಕಾನೂನು ಬಾಹಿರ ವಾಗಿ ನಿರ್ಮಿಸಿರುವ 48 ನಿವೇಶನಗಳನ್ನು ಹಿಂಪಡೆಯಲು ಸರ್ಕಾರ ಆದೇಶಿಸಿದೆ ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದರು.
ಮುಡಾದ 27.34 ಎಕರೆಯ ಪೈಕಿ 17 ಎಕರೆ ಜಾಗವನ್ನು ಚಾಮುಂಡೇಶ್ವರಿ ಸರ್ವೋದಯ ಸಂಘಕ್ಕೆ ಕಾನೂನು ಬಾಹಿರವಾಗಿ ನೀಡಲು 21-3-2023 ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ಈ ನಿರ್ಣಯ ಆಗಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲಿ. ಕಾನೂನು ಬಾಹಿರವಾಗಿ ಜಾಗ ನೀಡಿರುವ ವಿಚಾರವನ್ನು ಅಧಿಕಾರಿಗಳು ಮರೆಮಾಚಿ 6-9-23ರ ಸಭೆಯಲ್ಲಿ ಕಳೆದ ಸಭೆಯ ನಿರ್ಣಯಕ್ಕೆ ಅನುಮೋದನೆ ಪಡೆಯಲಾಯಿತು. ನಾನು ಸಹ ಮಾಹಿತಿ ಇಲ್ಲದೆ ಸಹಿ ಹಾಕಿದೆ. ನಂತರ ಇದರಲ್ಲಿ ಅಕ್ರಮ ನಡೆದಿರುವುದು ತಿಳಿದು ಬಂದು ಸರ್ಕಾರದ ಗಮನ ಸೆಳೆದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಕ್ರಮದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದಾಗ ಮುಡಾ ಆಸ್ತಿ ಉಳಿಸಲು ಹೋರಾಟ ನಡೆಸುವಂತೆ ನನಗೆ ಸಲಹೆ ನೀಡಿದರು. ಆ ಪ್ರಕಾರ ನಾನು ಹೋರಾಟ ನಡೆಸಿ ಇದೀಗ ಮುಡಾ ಜಾಗವನ್ನು ಉಳಿಸಿಕೊಳ್ಳಲು ಯಶಸ್ವಿಯಾಗಿದ್ದೇನೆ ಎಂದು ಹೇಳಿದರು.
ಮುಡಾದಲ್ಲಿ ನಡೆದ ಭೂ ಹಗರಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಬಯಲಿಗೆಳೆದ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅಸಮಾಧಾನಗೊಂಡು ಸಿದ್ದರಾಮಯ್ಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ನೀಡಿರುವ 14 ಬದಲಿ ನಿವೇಶಗಳಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಅಲ್ಲದೆ, ಸಿದ್ದರಾಮಯ್ಯ ನಿವೇಶನಗಳನ್ನು ಪಡೆಯಲು ಮುಡಾ ಅಧಿಕಾರಿಗಳ ಮೇಲೆ ಒತ್ತಡ ಹೇರಿಲ್ಲ. ಮುಡಾವನ್ನು ಶುದ್ಧೀಕರಣವನ್ನು ಸಿದ್ದರಾಮಯ್ಯ ಮಾಡುವುದು ನಿಶ್ಚಿತ. ಆ ಕಾರ್ಯ ಇದೀಗ ಪ್ರಾರಂಭಗೊಂಡಿದೆ. ದಟ್ಟಗಳ್ಳಿಯ ಮುಡಾ ಜಾಗ ಖಾಸಗಿಯವರ ಪಾಲಾಗಲು ಕಾರಣಕರ್ತರಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ದಟ್ಟಗಳ್ಳಿಯಲ್ಲಿರುವ 27 ಎಕರೆ ಜಾಗವು 600 ರಿಂದ 700 ಕೋಟಿ ರೂ. ಮೊತ್ತದ ಆಸ್ತಿಯಾಗಿದೆ. ಈ ಹಗರಣದಲ್ಲಿ ರಾಜಕಾರಣಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳು ಇದ್ದಾರೆ ಎಂದು ಆರೋಪಿಸಿದರು.
ನನಗಿರುವ ಮಾಹಿತಿ ಪ್ರಕಾರ ಮುಡಾದಲ್ಲಿ ಶೇ.50:50ರ ಅನುಪಾತದಲ್ಲಿ ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿಕೆ ಮಾಡಲಾ ಗಿದೆ. ಇದರಲ್ಲಿ ಎಷ್ಟು ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಇಲ್ಲ. ಒಂದುವೇಳೆ ಅಕ್ರಮವಾಗಿ ಹಂಚಿಕೆ ಯಾಗಿದ್ದರೆ ಅಂತಹ ನಿವೇಶನಗಳನ್ನು ಹಿಂಪಡೆದು ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಶೇ.50:50ರ ಅನುಪಾತದಲ್ಲಿ ತಮ್ಮ ಪತ್ನಿಗೆ ನಿವೇಶನಗಳನ್ನು ನೀಡಬೇಕು ಎಂದು ಸಿದ್ದರಾಮಯ್ಯ ಮುಡಾಗೆ ಪತ್ರ ಬರೆದಿಲ್ಲ. ಜಾರಿ ನಿರ್ದೇಶನಾಲಯ ತನ್ನ ತನಿಖಾ ವರದಿಯನ್ನು ಮಾಧ್ಯಮಗಳಿಗೆ ಅಥವಾ ಹೊರಗೆ ನೀಡುವುದಿಲ್ಲ. ಆದರೆ, ಇದೀಗ ಜಾರಿ ನಿರ್ದೇಶನಾಲಯ ಹೆಸರಿನಲ್ಲಿ ಬಿಡುಗಡೆಯಾಗಿರುವ ತನಿಖಾ ವರದಿಯು ಬಿಜೆಪಿಯ ಕಟ್ಟುಕತೆಯಾಗಿದೆ ಎಂದು ಆರೋಪಿಸಿದರು.