ನರಗುಂದ: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಎಲ್ಲ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು.
ಲೋಕೋಪಯೋಗಿ ಇಲಾಖೆಯ 7 ಕೋಟಿ ರೂ. ವೆಚ್ಚದಲ್ಲಿ ನರಗುಂದ ಬನಹಟ್ಟಿ, ಅಮರಗೋಳ ರಸ್ತೆ ಸುಧಾರಣೆ ಹಾಗೂ 1 ಕೋಟಿ ರೂಪಾಯಿ ವೆಚ್ಚದಲ್ಲಿ ನರಗುಂದದ ರ್ಸಟ್ ಹೌಸ್, ಹೆಲಿಪ್ಯಾಡ್ ಅಪ್ರೋಚ್ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆವೇರಿಸಿ ಅವರು ಮಾತನಾಡಿದರು.
ನೀರಾವರಿಗೆ ಹೆಚ್ಚಿನ ಉತ್ತೇಜನ ನೀಡುವ ದೃಷ್ಟಿಯಿಂದಾಗಿ ಮಲಪ್ರಭಾ ನೀರಾವರಿ ಉಪ ಹಂಚಿಕೆ ಕಾಲುವೆಗಳ ನವೀಕರಣಕ್ಕಾಗಿ ರಾಜ್ಯ ಸರ್ಕಾರದಿಂದ 2,100 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಇದರಲ್ಲಿ ಮೊದಲ ಹಂತದ 800 ಕೋಟಿ ರೂ. ಕಾಮಗಾರಿಯನ್ನು ಈಗಾಗಲೇ ಆರಂಭಿಸಲಾಗಿದೆ. ನರಗುಂದ ತಾಲೂಕಿನಲ್ಲಿರುವ ಎಲ್ಲ ಏತ ನೀರಾವರಿ ಯೋಜನೆಗಳಿಗೆ ಹೊಸದಾಗಿ ಕಬ್ಬಿಣದ ಪೈಪ್ಲೈನ್ ಅಳವಡಿಸಲು ಸರ್ಕಾರಕ್ಕೆ ಸಲ್ಲಿಸಿದ್ದ 90 ಕೋಟಿ ರೂ. ಅನುದಾನ ಪ್ರಸ್ತಾವನೆಗೊಂಡು ಹಣಕಾಸು ಇಲಾಖೆಯಲ್ಲಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಸಂರ್ಪಸಿ ಶೀಘ್ರವೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಬನಹಟ್ಟಿ ಭಾಗದ ಸೇತುವೆ ನಿರ್ಮಾಣ ಕಾಮಗಾರಿಗಾಗಿ 2 ಕೋಟಿ ರೂ. ಬಿಡುಗಡೆಗೊಂಡಿದ್ದು, ಈ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಬನಹಟ್ಟಿ ಏತ ನೀರಾವರಿ ಸ್ಥಗಿತಗೊಂಡಿದೆ. ಇದನ್ನು ವಾರದೊಳಗೆ ಪ್ರಾರಂಭಗೊಳಿಸಲಾಗುವುದು. ಈ ಹಿಂದೆ ಹದಲಿ ಏತ ನೀರಾವರಿ ಯೋಜನೆ ಕಾಮಗಾರಿಗೆ ಜಮೀನು ನೀಡಿದ ರೈತರಿಗೆ ಕೊಡಬೇಕಾದ 50 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದೆ. ಆ ಹಣವನ್ನು ನೀರಾವರಿ ಅಧಿಕಾರಿಗಳು ಜಮೀನು ನೀಡಿರುವ ರೈತರಿಗೆ ತಕ್ಷಣವೇ ನೀಡಬೇಕು. ಬನಹಟ್ಟಿ ಗ್ರಾಪಂ ಅಭಿವೃದ್ಧಿಗಾಗಿ ಶಾಸಕನಾದ ನಂತರ ಒಟ್ಟು 12 ಕೋಟಿ ರೂ. ನೀಡಿದ್ದೇನೆ ಎಂದರು.
ಪ್ರವಾಹದಲ್ಲಿ ಹಾನಿಗೊಂಡಿರುವ ಕುರ್ಲಗೇರಿ, ಬನಹಟ್ಟಿ, ಮೂಗನೂರ ಗ್ರಾಮಗಳ ಸರ್ಕಾರಿ ಶಾಲಾ ಕೊಠಡಿಗಳ ದುರಸ್ತಿಗಾಗಿ 22.50 ಲಕ್ಷ ರೂ. ಅನುದಾನ ನೀಡಿದ್ದೇನೆ. ಬನಹಟ್ಟಿ ಗ್ರಾಮದಲ್ಲಿರುವ ಗ್ರಾಮದೇವತೆ ದೇವಸ್ಥಾನಕ್ಕೆ ಬಜೆಟ್ ಅಧಿವೇಶನ ಮುಗಿದ ಬಳಿಕ 5 ಲಕ್ಷ ರೂ. ಅನುದಾನ ನೀಡುವುದಾಗಿ ತಿಳಿಸಿದರು.
ಬಿಜೆಪಿ ನರಗುಂದ ಮಂಡಳದ ನೂತನ ಅಧ್ಯಕ್ಷ ಗುರುಪಾದಪ್ಪ ಆದೆಪ್ಪನವರ, ಚಂದ್ರು ದಂಡಿನ, ರುದ್ರಸ್ವಾಮಿಮಠದ ಸೊಲಬಯ್ಯ ಸ್ವಾಮಿಗಳು, ಎಸ್.ಆರ್. ಹಿರೇಮಠ ಮಾತನಾಡಿದರು. ತಾಪಂ ಸದಸ್ಯೆ ಈರವ್ವ ಜೋಗಿ, ಬಿ.ಎನ್. ಪಾಟೀಲ, ಎಂ.ಎಸ್. ಪಾಟೀಲ, ಬಿ.ಬಿ. ಕುಂಬಾರ, ಅನಿಲ ಧರೆಯಣ್ಣವರ, ಎ.ಎಂ. ಹುಡೇದ, ಎಂ.ಐ. ಮೇಟಿ, ಗ್ರಾಪಂ ಅಧ್ಯಕ್ಷ ಬಾಪೂಗೌಡ ಪಾಟೀಲ, ಯೋಗೇಶ ಬ್ಯಾಹಟ್ಟಿ, ಈಶ್ವರಗೌಡ ಪಾಟೀಲ, ಪರ್ವತಗೌಡ ಪಾಟೀಲ, ಬಸಯ್ಯ ಹಿರೇಮಠ, ಬಿ.ಎಸ್. ಸುಂಕದ, ಬಿ.ಎನ್. ಪಾಟೀಲ ಉಪಸ್ಥಿತರಿದ್ದರು. ಎಸ್.ವಿ. ಹಿರೇಮಠ, ಆರ್.ಬಿ. ಕುರುವತ್ತಿಮಠ ನಿರ್ವಹಿಸಿದರು.