ಬೀದರ್: ಜೀವನದಲ್ಲಿ ಬದಲಾವಣೆ ತರುವಂಥ ಬಹುದೊಡ್ಡ ಶಕ್ತಿ ಶಿಕ್ಷಣಕ್ಕೆ ಇದೆ. ಶಿಕ್ಷಣ ವ್ಯಕ್ತಿತ್ವ ವಿಕಸನದ ಮೂಲವೂ ಆಗಿದೆ. ಹೀಗಾಗಿ ಸಾಧನೆ ಅವಲೋಕನಕ್ಕೆ ಪ್ರತಿಭಾ ಪುರಸ್ಕಾರ ಅಗತ್ಯ ಎಂದು ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಸಿ. ವೀರಣ್ಣ ಹೇಳಿದರು.
ನಗರದ ಪೂಜ್ಯ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ವಚನ ಚಾರಿಟೇಬಲ್ ಸೊಸೈಟಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಸಾಂಸ್ಕತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂಥ ಸಮಾರಂಭಗಳು ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ ಸರ್ಕಾರಿ ಪ್ರೌಢ ಶಾಲೆಗಳಿಗೆ 100ಕ್ಕೆ ನೂರರಷ್ಟು ಫಲಿತಾಂಶ ಬಂದಿರುವುದು ಅಭಿವೃದ್ಧಿ ಸಂಕೇತ. ಮಕ್ಕಳು ಕೇವಲ ಪಠ್ಯ ಕ್ರಮಕ್ಕೆ ಸೀಮಿತಗೊಳ್ಳದೆ ಬದುಕಿನಲ್ಲಿ ಇನ್ನಷ್ಟು ಪ್ರಗತಿ ಸಾಸುವತ್ತ ಹೆಜ್ಜೆ ಇಡಬೇಕು ಎಂದು ಕಿವಿಮಾತು ಹೇಳಿದರು.
ಸಹಾಯಕ ಆಯುಕ್ತ ಲವಿಶ್ ಓರಡಿಯಾ ಮಾತನಾಡಿ, ವಿದ್ಯಾರ್ಥಿಗಳು ನಿರ್ದಿಷ್ಟವಾದ ಗುರಿ ಇಟ್ಟುಕೊಳ್ಳಬೇಕು. ಸತತ ಪರಿಶ್ರಮದಿಂದ ಮುನ್ನಡೆದರೆ ಬದುಕಿನಲ್ಲಿ ಯಶಸ್ಸು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ಪಾಲಕರು ಮತ್ತು ಶಿಕ್ಷಕರು ಪರಿಸ್ಥಿತಿ ಅರಿತು ಮಕ್ಕಳಿಗೆ ಮಾರ್ಗದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.
ಸಹಕಾರ ಇಲಾಖೆ ಉಪ ನಿಬಂಧಕಿ ಡಾ.ಮಂಜುಳಾ ಎಸ್. ಮಾತನಾಡಿ, ನಮ್ಮ ಗುರಿ ಸಾರ್ಥಕವಾಗಲು ವಿಚಾರಗಳು ಸಹ ಸಕಾರಾತ್ಮಕವಾಗಿರಬೇಕು. ಫಲಿತಾಂಶ ಬಂದ ಬಳಿಕ ಕೊರಗುವುದಕ್ಕಿಂತ ಮೊದಲೇ ಸರಿಯಾಗಿ ಓದಬೇಕು ಎಂದರು.
ಕ್ಷೇತ್ರ ಶಿಕ್ಷಣಾಕಾರಿ ಅಖಿಲಾಂಡೇಶ್ವರಿ ಮಾತನಾಡಿದರು. ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ, ಸೊಸೈಟಿ ಅಧ್ಯಕ್ಷೆ ಲಿಂಗಾರತಿ ಅಲ್ಲಮಪ್ರಭು, ನಿರ್ದೇಶಕ ಶಿವಕುಮಾರ ಸಾಲಿ ಇತರರಿದ್ದರು. ಸೊಸೈಟಿ ಗೌರವ ಸಲಹೆಗಾರ ಶಿವಶಂಕರ ಟೋಕರೆ ಸ್ವಾಗತಿದರು. ದೈಹಿಕ ಶಿಕ್ಷಕ ಮಲ್ಲಿಕಾರ್ಜುನ ಟಂಕಸಾಲೆ ನಿರೂಪಣೆ ಮಾಡಿದರು. ಸಾಹಿತಿ ವೀರಶೆಟ್ಟಿ ಮಲ್ಲಶೆಟ್ಟಿ ವಂದಿಸಿದರು.
ಇಬ್ಬರು ಮಕ್ಕಳಿಗೆ ತಲಾ ರೂ.10 ಸಾವಿರ: ಎಸ್ಸೆಸ್ಸೆಲ್ಸಿಯಲ್ಲಿ 100ಕ್ಕೆ ನೂರರಷ್ಟು ಫಲಿತಾಂಶ ಪಡೆದ ಸರ್ಕಾರಿ ಶಾಲೆ ಮುಖ್ಯ ಗುರುಗಳಾದ ಬಿ.ಎಲ್. ಪಾಂಚಾಳ (ಏಕಲಾರ), ಬಾಲಾಜಿ ಪಾಟೀಲ್ (ಆದರ್ಶ ವಿದ್ಯಾಲಯ ರಾಜೋಳಾ), ಕರಬಸಪ್ಪ (ನಂದಗಾಂವ), ಮಹಾವೀರ (ಕನಕಟ್ಟಾ), ರಾಜಶೇಖರ ದಾನಾ (ಹುಡಗಿ) ಅವರನ್ನು ಸನ್ಮಾನಿಸಲಾಯಿತು. ಪ್ರತಿಭಾವಂತ ವಿದ್ಯಾರ್ಥಿಗಳಾದ ಮಲ್ಲಿಕಾರ್ಜುನ ಹಳ್ಳಿಖೇಡ(ಕೆ), ಬಸವಜ್ಯೋತಿ ಯನಗುಂದಾ ಅವರಿಗೆ ತಲಾ 10 ಸಾವಿರ ರೂ. ನಗದು ನೀಡಿ ಪ್ರೋತ್ಸಾಹಿಸಲಾಯಿತು. ಗರಿಷ್ಠ ಅಂಕ ಪಡೆದ ಜಿಲ್ಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸನ್ಮಾನ ಪತ್ರ ನೀಡಿ ಹುರಿದುಂಬಿಸಲಾಯಿತು.