ಸುತ್ತೂರು: ಜೆಎಸ್ಎಸ್ ಮಹಾವಿದ್ಯಾಪೀಠದ ಆಶ್ರಯದಲ್ಲಿ ಸಂಸ್ಥೆಯ ಪ್ರೌಢಶಾಲಾ ವಿಜ್ಞಾನ ಮತ್ತು ಗಣಿತ ಶಿಕ್ಷಕರಿಗೆ ಎರಡು ದಿನಗಳ ಪುನಶ್ಚೇತನ ಕಾರ್ಯಾಗಾರಕ್ಕೆ ಸುತ್ತೂರು ಕ್ಷೇತ್ರದಲ್ಲಿ ಮಂಗಳವಾರ ಚಾಲನೆ ದೊರೆಯಿತು.
ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಾವಿದ್ಯಾಪೀಠದ ಶಾಲಾ ಶಿಕ್ಷಣ ವಿಭಾಗದ ನಿರ್ದೇಶಕ ಬಿ.ಎ.ರಾಜಶೇಖರ, ಶಿಕ್ಷಕರಲ್ಲಿ ವಿಷಯ ಜ್ಞಾನವಿದ್ದರೆ ವಿದ್ಯಾರ್ಥಿಗಳಿಗೆ ಸುಲಭವಾಗಿ ಕಲಿಸಬಹುದು. ವಿಜ್ಞಾನ ಮತ್ತು ಗಣಿತ ಪ್ರಸ್ತುತ ವಿಶ್ವವನ್ನೇ ಬೆಳಗುತ್ತಿವೆ. ಸರಳವಾಗಿ ಬೋಧಿಸುವುದನ್ನು ಶಿಕ್ಷಕರು ರೂಢಿಸಿಕೊಂಡಾಗ ವೃತ್ತಿಯಲ್ಲಿ ಆತ್ಮತೃಪ್ತಿ ಕಾಣಬಹುದು ಎಂದರು.
ಸುತ್ತೂರು ಜೆಎಸ್ಎಸ್ ಸಂಸ್ಥೆಗಳ ಸಂಯೋಜನಾಧಿಕಾರಿ ಜಿ.ಎಲ್.ತ್ರಿಪುರಾಂತಕ ಮಾತನಾಡಿ, ಶಿಕ್ಷಕರು ವೃತ್ತಿ ಪಾವಿತ್ರೃತೆಯನ್ನು ಎತ್ತಿ ಹಿಡಿಯಬೇಕು. ಅದಕ್ಕಾಗಿ ನಿರಂತರ ಅಧ್ಯಯನ ಶೀಲರಾಗಬೇಕು. ಕಾಲಕಾಲಕ್ಕೆ ತರಬೇತಿ ಪಡೆದುಕೊಳ್ಳುವುದರಿಂದ ಸ್ಪರ್ಧಾತ್ಮಕ ಜಗತ್ತಿನಲ್ಲಿ ವೃತ್ತಿ ನೈಪುಣ್ಯತೆ ಗಳಿಸಲು ಸಾಧ್ಯ ಎಂದರು.
ಸುತ್ತೂರು ಜೆಎಸ್ಎಸ್ ಸಂಸ್ಥೆಗಳ ಹೆಚ್ಚುವರಿ ಸಂಯೋಜನಾಧಿಕಾರಿ ಸಂಪತ್ತು, ವಿಷಯ ಸಂಪನ್ಮೂಲ ವ್ಯಕ್ತಿಗಳಾದ ಶಾರದಾ, ವೈದ್ಯನಾಥನ್, ಲಿಂಗರಾಜು, ಬಸವರಾಜು, ಗಿರೀಶ್, ನೆಲ್ವಿನ್ ಮೊದಲಾದವರು ಉಪಸ್ಥಿತರಿದ್ದರು.