ಅಣ್ಣಿಗೇರಿ: ತಾಲೂಕಿನ ನಲವಡಿ ಟೋಲ್ ಬಳಿ ಶುಕ್ರವಾರ ತಡರಾತ್ರಿ ಟ್ರ್ಯಾಕ್ಟರ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಲಕ್ಕೆ ಬಿತ್ತಲು ಹೋಗಿದ್ದ ನಲವಡಿಯ ರೈತರು ಟ್ರ್ಯಾಕ್ಟರ್ನಲ್ಲಿ ಟೋಲ್ ಹತ್ತಿರ ಹೆದ್ದಾರಿಗೆ ಹೊಂದಿಕೊಂಡಿರುವ ಬದುವಿನತ್ತ ಬರುತ್ತಿದ್ದಾಗ ಹುಬ್ಬಳ್ಳಿಯಿಂದ ಗದಗನತ್ತ ಹೊರಟಿದ್ದ ಲಾರಿ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಟ್ರ್ಯಾಕ್ಟರ್ ಎರಡು ತುಂಡಾಗಿದೆ. ಘಟನಾ ಸ್ಥಳಕ್ಕೆ ಅಣ್ಣಿಗೇರಿ ಠಾಣೆ ಪಿಎಸ್ಐ ಎಲ್. ಕೆ. ಜೂಲಕಟ್ಟಿ ಧಾವಿಸಿ ಗಾಯಾಳುಗಳನ್ನು ಗ್ರಾಮಸ್ಥರ ನೆರವಿನೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ ಪ್ರಕಾಶ ಅಡವಿ, ಕಾರ್ತಿಕ, ಮಹಾಂತೇಶ ನಲವಡಿ ಗಾಯಗೊಂಡಿದ್ದು, ಇನ್ನೋರ್ವ ಪತ್ತೆಯಾಗಿಲ್ಲ. ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.