ಮದ್ದೂರು: ತಾಲೂಕಿನ ಕುದರಗುಂಡಿ ಕೆರೆಗೆ ಬುಧವಾರ ರಾಸಾಯನಿಕ ಮಿಶ್ರಿತ ಕಲುಷಿತ ನೀರು ಹರಿದ ಪರಿಣಾಮ ವಿವಿಧ ಜಾತಿಯ ಲಕ್ಷಾಂತರ ಮೀನುಗಳು ಮೃತಪಟ್ಟಿವೆ.
ಗ್ರಾಮದ ಕೆ.ಎಂ.ಚನ್ನಪ್ಪ ಎಂಬುವರು ಕೆರೆಯಲ್ಲಿ ಮೀನು ಸಾಕಣೆ ಮಾಡಲು ಟೆಂಡರ್ ತೆಗೆದುಕೊಂಡಿದ್ದರು. ಕೆರೆಯಲ್ಲಿ ಕಾಟ್ಲ, ರೋಹು, ಗೌರಿ ಮೀನು ಸೇರಿದಂತೆ ಅಂದಾಜು 3 ಲಕ್ಷ ಮೀನಿನ ಮರಿಗಳನ್ನು ಲಕ್ಷಾಂತರ ರೂ. ಖರ್ಚು ಮಾಡಿ ಸಾಕಣೆ ಮಾಡಿದ್ದರು. ಆದರೆ, ಕೆರೆಗೆ ರಾಸಾಯನಿಕ ಮಿಶ್ರಿತ ವಿಷಯ ನೀರು ಹರಿದು ಒಂದು ವರ್ಷದ ಒಂದೂವರೆ ಕೆ.ಜಿ.ಯ ತೂಕವುಳ್ಳ ಮೀನುಗಳು ಮೃತಪಟ್ಟಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
‘ತಾಲೂಕಿನ ಗೆಜ್ಜಲಗೆರೆಯ ಮಂಡ್ಯ ಜಿಲ್ಲಾ ಹಾಲು ಒಕ್ಕೂಟಕ್ಕೆ (ಮನ್ಮುಲ್)ಬರುವ ಹಾಲಿನ ಟ್ಯಾಂಕರ್ಗಳನ್ನು ಆಸಿಡ್ ಮಿಶ್ರಿತ ರಾಸಾಯನಿಕ ದ್ರಾವಣದಿಂದ ತೊಳೆದು ಆ ನೀರನ್ನು ಕಾಲುವೆಯ ಮೂಲಕ ಕೆರೆಗೆ ಬಿಡುತ್ತಿರುವುದರಿಂದ ಈ ಘಟನೆ ಸಂಭವಿಸಿದೆ’ ಎಂದು ಟೆಂಡರ್ದಾರ ಚನ್ನಪ್ಪ ಆರೋಪಿಸಿದ್ದಾರೆ.
72 ಎಕರೆ ಪ್ರದೇಶವಿರುವ ಕೆರೆಯಲ್ಲಿ ಲಕ್ಷಾಂತರ ಮೀನುಗಳು ಇದ್ದವು. ಘಟನೆಯಿಂದ ಕೆರೆಯ ನೀರು ಕಪ್ಪು ಬಣ್ಣಕ್ಕೆ ತಿರುಗಿದ್ದು, ಗಬ್ಬುವಾಸನೆ ಬರುತ್ತಿದೆ. ದೂರು ನೀಡಿದ ಮೂರು ದಿನಗಳ ನಂತರ ಮನ್ಮುಲ್ ಅಧಿಕಾರಿಗಳು ಬಂದು ನೀರಿನ ಸ್ಯಾಂಪಲ್ ತೆಗೆದುಕೊಂಡು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಕೆರೆಗೆ ಜಿಲ್ಲಾ ಹಾಲು ಒಕ್ಕೂಟದಿಂದ ರಾಸಾಯಾನಿಕ ಮಿಶ್ರಿತ ನೀರು ಬರುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ಹಲವಾರು ಬಾರಿ ದೂರು ನೀಡಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಸಂಬಂಧ ಮೀನುಗಾರಿಕೆ ಇಲಾಖೆ, ಪರಿಸರ ಇಲಾಖೆ ಹಾಗೂ ಗ್ರಾಪಂ ಸೇರಿದಂತೆ ಇತರ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಈ ಪ್ರಕರಣವನ್ನು ಗಂಭೀರವೆಂದು ಪರಿಗಣಿಸಿ ಸೂಕ್ತ ಪರಿಹಾರ ನೀಡುವಂತೆ ಚನ್ನಪ್ಪ ಆಗ್ರಹಿಸಿದ್ದಾರೆ.