ಕಲಬುರಗಿ: ವಿದ್ಯಾರ್ಥಿಗಳು ಯುವ ರೆಡ್ಕ್ರಾಸ್ ಮತ್ತು ಕಿರಿಯರ ರೆಡ್ ಕ್ರಾಸ್ ಚಟುವಟಿಕೆಯಲ್ಲಿ ಭಾಗವಹಿಸುವ ಮೂಲಕ ತತ್ವ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾ ರೆಡ್ಕ್ರಾಸ್ ಸಂಸ್ಥೆ ಚೇರ್ಮನ್ ಅಪ್ಪಾರಾವ ಅಕ್ಕೋಣಿ ಹೇಳಿದರು.
ರೆಡ್ ಕ್ರಾಸ್ ಸಂಸ್ಥೆ ಶತಮಾನೋತ್ಸವ ನಿಮಿತ್ತ ಶುಕ್ರವಾರ ಜಗತ್ ವೃತ್ತದಲ್ಲಿ ಕಾಲೇಜು ಯುವ ರೆಡ್ ಕ್ರಾಸ್ ಮತ್ತು ಪ್ರೌಢಶಾಲೆ ಕಿರಿಯರ ರೆಡ್ಕ್ರಾಸ್ ವಿದ್ಯಾರ್ಥಿ ಗಳಿಂದ ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾದಲ್ಲಿ ಮಾತನಾಡಿ, ರೆಡ್ಕ್ರಾಸ್ ಮಾನವೀಯ ಸೇವೆಗೆ ಬದ್ಧವಾಗಿರುವ ಸಂಸ್ಥೆ ಎಂದು ತಿಳಿಸಿದರು.
ಕರ್ನಾಟಕ ಪೀಪಲ್ಸ್ ಏಜುಕೇಶನ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಮಾರುತಿರಾವ ಮಾಲೆ ಜಾಥಾಕ್ಕೆ ಚಾಲನೆ ನೀಡಿದರು. ಉಪ ಸಭಾಪತಿ ಅರುಣಕುಮಾರ ಲೋಯಾ, ಖಜಾಂಚಿ ಭಾಗ್ಯಲಕ್ಷ್ಮಿ, ಆಡಳಿತ ಮಂಡಳಿ ಸದಸ್ಯರಾದ ಸರ್ವಶ್ರೀ ಗಣಜಲಖೇಡ, ವಿಶ್ವನಾಥ ಕೋರವಾರ, ಶಾರದಾ ಯಾಕಾಪುರ, ಸಿದ್ರಾಮಪ್ಪ ಬಮನಾಳಕರ್, ಡಾ.ಬಸವರಾಜ ಗುಳಶೆಟ್ಟಿ, ಗುಂಡೇರಾವ ಪದ್ಮಾಜಿ, ವಿಜಯಕುಮಾರ ತೇಗಲತಿಪ್ಪಿ ಇತರರಿದ್ದರು.
ರೆಡ್ಕ್ರಾಸ್ ಸಂಸ್ಥೆ ಕಾರ್ಯದರ್ಶಿ ರವೀಂದ್ರ ಶಾಬಾದಿ ಸ್ವಾಗತಿಸಿದರು. ಯುವ ರೆಡ್ ಕ್ರಾಸ್ ಜಿಲ್ಲಾ ಸಂಯೋಜಕ ಧನರಾಜ ಭಾಸಗಿ ವಂದಿಸಿದರು. ಜಾಥಾದಲ್ಲಿ 20 ಶಾಲಾ-ಕಾಲೇಜಿನ 1500 ವಿದ್ಯಾರ್ಥಿಗಳು, ಶಿಕ್ಷಕರು, ರೆಡ್ ಕ್ರಾಸ್ ಸದಸ್ಯರು ಪಾಲ್ಗೊಂಡಿದ್ದರು.