ಮುಳಬಾಗಿಲು: ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದ ಕಡೆ ಗಮನಹರಿಸುವುದಿಲ್ಲ. ಮುಳಬಾಗಿಲಿನ ಜನರು ನನ್ನನ್ನು ಎಂದಿಗೂ ಕೈಬಿಟ್ಟಿಲ್ಲ, ಅವರ ಪ್ರೀತಿ ವಿಶ್ವಾಸ ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದು ಮಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಸ್ಪಷ್ಟಪಡಿಸಿದರು. ಹನುಮನಹಳ್ಳಿ ಗೇಟ್ ಬಳಿ ಇರುವ ತೋಟದ ಮನೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಲವರು ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಬುಡಗಜಂಗಮ ಜಾತಿ ಪ್ರಮಾಣ ಪತ್ರ ಪಡೆದಿರುವುದು ತಾಲೂಕು ಕಚೇರಿ ಮೂಲಕ. ಈ ಬಗ್ಗೆ ಡಿಸಿ ಅವರು 56 ಪುಟಗಳ ವರದಿಯನ್ನು ಸುಪ್ರೀಕೋರ್ಟ್ಗೆ ಸಲ್ಲಿಸಿದ್ದಾರೆ. ಈ ವರದಿಯ ಕೊನೆಯ ಎರಡು ಸಾಲುಗಳನ್ನು ವಾಟ್ಸ್ ಆ್ಯಪ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಅಪ್ಲೋಡ್ ಮಾಡಿ ಸುಪ್ರೀಂಕೋರ್ಟ್ನಲ್ಲಿ ಕೇಸು ವಜಾಗೊಂಡಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇದರಿಂದ ನನಗೆ ವೈಯಕ್ತಿಕವಾಗಿ ನೋವುಂಟಾಗಿದೆ. ನನಗೂ ಕುಟುಂಬವಿದೆ. ನನ್ನ ಗೌರವಕ್ಕೆ ಧಕ್ಕೆ ತರುವ ಹೇಳಿಕೆಗೆ ಯಾರೂ ಮಾನ್ಯತೆ ನೀಡಬಾರದು. ನನ್ನ ವಿರುದ್ಧ ಅಪಪ್ರಚಾರ ಮಾಡಲು ಒಂದು ತಂಡವೇ ಕೆಲಸ ನಿರ್ವಹಿಸುತ್ತಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು. ನ್ಯಾಯಾಲಯದ ಆದೇಶವನ್ನು ಗೌರವಿಸಬೇಕಾಗಿದೆ. ಸುಪ್ರೀಂಕೋರ್ಟ್ ಡಿಸಿ ವರದಿಯ ಬಗ್ಗೆ ಹೈಕೋರ್ಟ್ನಲ್ಲಿ ಪ್ರಶ್ನಿಸಿ ಅರ್ಜಿ ಸಲ್ಲಿಸಬಹುದು ಎಂದು ಆದೇಶ ನೀಡಿದ್ದು ಅದರಂತೆ ಕಾನೂನು ಹೋರಾಟ ಮಾಡುತ್ತೇನೆ ಎಂದರು. ಆವನಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಸೊನ್ನವಾಡಿ ಸಿ.ರಘುಪತಿ, ನಗವಾರ ವಿ.ವಿವೇಕಾನಂದ ಇದ್ದರು.
ನನ್ನ ಬೆಂಬಲ ಯಾರಿಗೂ ಇಲ್ಲ: ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಗಳೆಂದು ಹೇಳಿ
ಕೊಂಡು ಬಂದವರು ತಾಲೂಕಿನಲ್ಲಿ ಸೇವೆ ಸಲ್ಲಿಸಿದರೆ ನನ್ನ ಅಭ್ಯಂತರವಿಲ್ಲ. ಆದರೆ ನನ್ನ ಬೆಂಬಲ ಅವರ್ಯಾರಿಗೂ ಇಲ್ಲ. ಈಗ ಬಂದಿರುವ ಆಕಾಂಕ್ಷಿ ಅಭ್ಯರ್ಥಿಗಳಲ್ಲಿ ಕೊತ್ತೂರು ಆರ್.ಅಂಜುಬಾಸ್ ಹೊರತುಪಡಿಸಿ ಉಳಿದವರೆಲ್ಲರೂ ಹೊರಗಿನವರಾಗಿದ್ದು ಮುಳಬಾಗಿಲು ತಾಲೂಕಿನಲ್ಲಿ ಅಭ್ಯರ್ಥಿಗಳಿಗೆ ಬರವಿದೆಯೇ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಬಗ್ಗೆ ಕ್ಷೇತ್ರದ ಮತದಾರರು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಮೂಲಕ ತಕ್ಕ ಉತ್ತರ ನೀಡುತ್ತಾರೆ ಎಂದರು.
20 ವರ್ಷಗಳ ಸೇವೆ: ಕಳೆದ 20 ವರ್ಷಗಳಿಂದ ತಾಲೂಕಿನಲ್ಲಿ ಯಾವುದೇ ಫಲಾಪೇಕ್ಷೆಯಿಲ್ಲದೆ ಸಮಾಜಸೇವೆ ಮಾಡಿಕೊಂಡು ಬಂದಿದ್ದೇನೆ. ಕಳೆದ 10 ವರ್ಷಗಳ ಹಿಂದೆ ರಾಜಕೀಯಕ್ಕೆ ಆಕಸ್ಮಿಕವಾಗಿ ಆಗಮಿಸಿದ್ದು ನನ್ನ ರಾಜಕೀಯ ಏಳಿಗೆ ಸಹಿಸದೆ ಕಿರುಕುಳ ನೀಡುತ್ತಿದ್ದು, ಅದಕ್ಕೆ ತಕ್ಕ ಉತ್ತರ ರಾಜಕೀಯದ ಮೂಲಕವೇ ಎದುರಾಳಿಗಳಿಗೆ ನೀಡುತ್ತೇನೆ. ಯಾರಾದರೂ ಬೇರೆ ಪಕ್ಷಗಳಿಗೆ ಹೋಗುವವರು ನನ್ನ ಬೆಂಬಲಿಗರೇ ಅಲ್ಲ. ಅಂತಹವರು ನಮಗೆ ಬೇಕಾಗಿಯೂ ಇಲ್ಲ ಎಂದರು.
ಕ್ಷೇತ್ರದ ರಾಜಕೀಯದಲ್ಲಿ ಹೊಸ ಗಾಳಿ?
ಕೆಲ ವರ್ಷಗಳಿಂದ ಅಂತರ ಕಾಯ್ದುಕೊಂಡಿದ್ದ ಶಾಸಕ ಎಚ್.ನಾಗೇಶ್ ಹಾಗೂ ವಾಜಿ ಶಾಸಕ ಕೊತ್ತೂರು ಜಿ.ಮಂಜುನಾಥ್ ಶುಕ್ರವಾರ ನಗರದ ನೇತಾಜಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಿದ್ದರಾಮೇಶ್ವರ ಜಯಂತ್ಯುತ್ಸವದಲ್ಲಿ ಅಕ್ಕಪಕ್ಕ ಕುಳಿತುಕೊಂಡು ಕುಶಲೋಪರಿ ವಿಚಾರಿಸಿದ್ದು ತಾಲೂಕು ರಾಜಕೀಯ ವಿಶ್ಲೇಷಣೆಗೆ ಕಾರಣವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊತ್ತೂರು ಮಂಜುನಾಥ್ ಆಗಿನ ಪಕ್ಷೇತರ ಅಭ್ಯರ್ಥಿಯಾಗಿದ್ದ ಎಚ್. ನಾಗೇಶ್ ಅವರನ್ನು ಬೆಂಬಲಿಸಿ ಗೆಲುವಿಗೆ ಶ್ರಮಿಸಿದ್ದರು. ಚುನಾವಣೆ ನಂತರದ ದಿನಗಳಲ್ಲಿ ಅವರಿಬ್ಬರ ನಡುವಿನ ಬಾಂಧವ್ಯ ಉತ್ತಮವಾಗಿದ್ದರೂ ಬರಬರುತ್ತಾ ಅದೇಕೋ ನಾನೊಂದು ತೀರ ನೀನೊಂದು ತೀರ ಎಂಬಂತಾಗಿತ್ತು. ನಾಗೇಶ್ ಸಹ ಕೊತ್ತೂರು ಪರ ಹಾಗೂ ವಿರೋಧವಾಗಿ ಮಾತನಾಡುತ್ತಿದ್ದರು. ಈ ಬಗ್ಗೆ ತಲೆಕೆಡಿಸಿಕೊಳ್ಳದಂತೆ ಕೊತ್ತೂರು ಬೆಂಬಲಿಗರಿಗೆ ಸೂಚಿಸಿದ್ದರು. ಇತ್ತೀಚೆಗೆ ನಾಗೇಶ್ ಕಾಂಗ್ರೆಸ್ಗೆ
ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಅದೇಕೋ ಕೊತ್ತೂರು ಮಂಜುನಾಥ್ ಜತೆ ಹಳೇ ಸಂಬಂಧಕ್ಕೆ ಹೊಸ ಬೆಸುಗೆ ಬೆಸೆಯಲು ಮುಂದಾಗಿದ್ದಾರೆ. ಕ್ಷೇತ್ರದ ವಿವಿಧ ಕಾರ್ಯಕ್ರಮಗಳಲ್ಲಿ ಕೊತ್ತೂರು ಮಂಜುನಾಥ್ ಪರ ಮಾತನಾಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ.