ಸಕಲೇಶಪುರ: ತಾಲೂಕಿನ ಮರಡಿಕೆರೆ ಗ್ರಾಮದಲ್ಲಿ ಒಂಟಿ ಸಲಗ ದಾಳಿ ನಡೆಸಿ ವ್ಯಕ್ತಿಯೊಬ್ಬನನ್ನು ಮರಣಾಂತಿಕವಾಗಿ ಗಾಯಗೊಳಿಸಿದೆ.
ಗ್ರಾಮದ ರಾಜು ಗಾಯಗೊಂಡ ವ್ಯಕ್ತಿ. ಮಂಗಳವಾರ ಮುಂಜಾನೆ 8 ಗಂಟೆಯ ವೇಳೆ ಕೊಟ್ಟಿಗೆಯಲ್ಲಿದ್ದ ಜಾನುವಾರುಗಳನ್ನು ಮನೆಯ ಮುಂದೆ ಕಟ್ಟಿ ಹಾಕುತ್ತಿದ್ದ ವೇಳೆ ಮನೆಯ ಹಿಂಬದಿಯಿಂದ ಬಂದ ಸಲಗ ದಾಳಿ ನಡೆಸಿದೆ.
ಪರಿಣಾಮ ವ್ಯಕ್ತಿಯ ಬಲಗಾಲು ಸಂಪೂರ್ಣ ಮುರಿದು ಹೋಗಿದ್ದರೆ ಬೆನ್ನು, ಕೈಗಳಿಗೆ ಗಾಯಗಳಾಗಿವೆ.
ಗ್ರಾಮಸ್ಥರ ಕೂಗಾಟಕ್ಕೆ ಹೆದರಿದ ಸಲಗ ವ್ಯಕ್ತಿ ಯನ್ನು ಬಿಟ್ಟು ತೆರಳಿದೆ. ಗಾಯಗೊಂಡ ವ್ಯಕ್ತಿಗೆ ಕೊಡ್ಲಿಪೇಟೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರದೊಯ್ಯಲಾಗಿದೆ.