ಹೊನ್ನಾವರ: ಯಕ್ಷಗಾನ ಕೇವಲ ಮನರಂಜನೆ ಅಲ್ಲ, ಮನೋವಿಕಾಸಕ್ಕೆ ಕಾರಣವಾಗುವ ಕಲೆ. ಶುದ್ಧ ಕನ್ನಡದಲ್ಲಿ ಅಭಿವ್ಯಕ್ತಗೊಳ್ಳುವ, ಜಾತಿ ಮತ ಭೇದವಿಲ್ಲದೆ ಎಲ್ಲರನ್ನೂ ಸೇರಿಸುವ ಶಕ್ತಿ ಯಕ್ಷಗಾನಕ್ಕಿದೆ ಎಂದು ಯಕ್ಷಗಾನ ಕಲಾವಿದ ಬಳ್ಕೂರ ಕೃಷ್ಣ ಯಾಜಿ ಹೇಳಿದರು.
ತಾಲೂಕಿನ ಬಳ್ಕೂರದಲ್ಲಿ ಕರ್ನಾಟಕ ಕ್ರಾಂತಿರಂಗ ಸಂಘಟನೆಯ ವಾರ್ಷಿಕೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಹುಟ್ಟೂರಿನಲ್ಲಿ ನಡೆಯುವ ಸನ್ಮಾನ ಎಲ್ಲ ಸನ್ಮಾನಗಳಿಗಿಂತ ಮಿಗಿಲಾದದ್ದು, ಕಲಾವಿದನಿಗೆ ಅದು ಅತ್ಯಂತ ಸಂತೋಷ ನೀಡುವುದು. ಹತ್ತು ಲಕ್ಷ ರೂ. ಕೂಡಿಟ್ಟು ಯಾಜಿ ಯಕ್ಷ ಪ್ರಶಸ್ತಿ ಹೆಸರಿನಲ್ಲಿ ಕಷ್ಟದಲ್ಲಿರುವ ಯಕ್ಷಗಾನ ಕಲಾವಿದರಿಗೆ 25 ಸಾವಿರ ರೂ. ನೀಡುವ ಕನಸಿದೆ ಎಂದರು.
ಸಭಾ ಕಾರ್ಯಕ್ರಮವನ್ನು ಕರ್ನಾಟಕ ಕ್ರಾಂತಿರಂಗದ ಅಧ್ಯಕ್ಷ ಮಂಚೇಗೌಡ ಬಿ.ಎಚ್. ಉದ್ಘಾಟಿಸಿದರು. ರಾಣೆಬೆನ್ನೂರಿನ ರಂಗನಾಯಕ ಖ್ಯಾತಿಯ ಏಕಲವ್ಯ ಮಾತನಾಡಿದರು. ಯಕ್ಷಗಾನ ಕಲಾವಿದ ಬಳ್ಕೂರ ಕೃಷ್ಣ ಯಾಜಿ, ಸಂಘಟನೆಯ ಅಧ್ಯಕ್ಷ ಮಂಚೆಗೌಡ ಬಿ.ಎಚ್., ನಟ ಏಕಲವ್ಯ ಅವರನ್ನು ಸನ್ಮಾನಿಸಲಾಯಿತು.
ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಂಜನಾ ಆಚಾರ್ಯ, ಎಸ್ಎಸ್ಎಲ್ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ರಕ್ಷಿತಾ ಯಾಜಿ ಅವರನ್ನು ಪುರಸ್ಕರಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ಕೇಶವ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯೆ ಪುಷ್ಪಾ ನಾಯ್ಕ, ವಿಎಸ್ಎಸ್ ಬ್ಯಾಂಕ್ ಉಪಾಧ್ಯಕ್ಷ ಗಣಪತಿ ನಾಯ್ಕ ಬಿ.ಟಿ., ಸಾಹಿತಿ ಡಾ. ಎಸ್.ಡಿ. ಹೆಗಡೆ, ಕರ್ನಾಟಕ ಕ್ರಾಂತಿರಂಗ ಸಂಘದ ಜಿಲ್ಲಾಧ್ಯಕ್ಷ ಮಂಗಲದಾಸ ನಾಯ್ಕ, ಜಿಲ್ಲಾ ಯುವ ಅಧ್ಯಕ್ಷ ಸಚಿನ್ ನಾಯ್ಕ, ಬಳ್ಕೂರ ಘಟಕದ ಅದ್ಯಕ್ಷ ದೇವೆಂದ್ರ ನಾಯ್ಕ, ಗ್ರಾಮಸ್ಥರಾದ ಸುಬ್ರಾಯ ನಾಯ್ಕ, ಸೈಮನ್ ರೋಡ್ರಗಿಸ್, ಪಾಂಡುರಂಗ ಭಂಡಾರಕರ್, ಆನಂದ ಆಚಾರ್ಯ ಇತರರು ಉಪಸ್ಥಿತರಿದ್ದರು.