ಚನ್ನರಾಯಪಟ್ಟಣ: ಮಂಡ್ಯ ಜಿಲ್ಲೆ ನಾಗಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆಗೈದ ರಿವಾಲ್ವರ್ ಇರಿಸಿದ್ದ ಬ್ಯಾಗನ್ನು ಸಾರಿಗೆ ಬಸ್ಸಿನಲ್ಲಿ ಮರೆತು ಹೋಗಿದ್ದ ರಿವಾಲ್ವರ್ ಉತ್ತರ ಭಾರತ ಮೂಲದ ಇಬ್ಬರು ಸುಪಾರಿ ಕೊಲೆಗಾರರು ಚನ್ನರಾಯಪಟ್ಟಣ ನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ರಾಜಸ್ಥಾನ ಮೂಲದ ಕಿಶನ್(22) ಮತ್ತು ಮನೀಶ್(23) ಸಿಕ್ಕಿಬಿದ್ದಿರುವ ಆರೋಪಿಗಳು.
ಸೋಮವಾರ ರಾತ್ರಿ ಮಂಡ್ಯದಲ್ಲಿ ಗೂಡಾರಾವ್ ಎಂಬ ವ್ಯಕ್ತಿಯೊಬ್ಬನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು ನಾಗಮಂಗಲದಿಂದ ಸಾರಿಗೆ ಬಸ್ಸಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದರು.
ನಾಗಮಂಗಲ ಬಸ್ ನಿಲ್ದಾಣದಲ್ಲಿ ಕೆಳಗಿಳಿದು ಮತ್ತೊಂದು ಸಾರಿಗೆ ಬಸ್ಸಿನಲ್ಲಿ ಹಾಸನಕ್ಕೆ ತೆರಳಿದ್ದಾರೆ.
ಅದರೆ, ನಾಗಮಂಗಲ ಬಸ್ ನಿಲ್ದಾಣದಲ್ಲಿ ಕೆಳಗಿಳಿಯುವ ಭರದಲ್ಲಿ ಪಿಸ್ತೂಲಿದ್ದ ಬ್ಯಾಗನ್ನು ಬಸ್ ನಲ್ಲಿಯೇ ಬಿಟ್ಟು ಹೋಗಿದ್ದರು.
ಬಸ್ ನಿರ್ವಾಹಕ ಆ ಬ್ಯಾಗನ್ನು ಚನ್ನರಾಯಪಟ್ಟಣ ಬಸ್ ನಿಲ್ದಾಣದ ಟಿಸಿ ಕೊಠಡಿಗೆ ತಲುಪಿಸಿ ಮುಂದೆ ಪ್ರಯಾಣ ಬೆಳೆಸಿದ್ದರು.
ಆರೋಪಿಗಳು ಪಿಸ್ತೂಲು ಇದ್ದ ಬ್ಯಾಗ್ ಹುಡುಕಿಕೊಂಡು ಕೆಎಸ್ಆರ್ಟಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದು ಚನ್ನರಾಯಪಟ್ಟಣ ಬಸ್ ನಿಲ್ದಾಣಕ್ಕೆ ಬಂದರು. ಅಷ್ಟರಲ್ಲಿ ಅನುಮಾನಾಸ್ಪದ ಬ್ಯಾಗ್ ಬಗ್ಗೆ ಮಾಹಿತಿ ಪಡೆದಿದ್ದ ಚನ್ನರಾಯಪಟ್ಟಣ ನಗರ ಪೊಲೀಸರು, ಅದರೊಳಗೆ ಪಿಸ್ತೂಲು ಇರುವುದನ್ನು ಕಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು.
ಅದರಂತೆ ಬ್ಯಾಗ್ ಪಡೆಯಲು ಬಂದ ಇಬ್ಬರನ್ನು ವಶಕ್ಕೆ ಬ್ಯಾಗ್ ವಿಚಾರಣೆಗೆ ಒಳಪಡಿಸಿದಾಗ ಮಂಡ್ಯದಲ್ಲಿ ನಡೆದ ಕೊಲೆ ಪ್ರಕರಣ ಬಯಲಾಗಿದೆ.