ಮೈಸೂರು: ವಿಲಾಸಿ ಜೀವನ ಶೈಲಿಗೆ ಜೋತು ಬಿದ್ದಿರುವುರಿಂದಲೇ ನೈಸರ್ಗಿಕ ಸಂಪತ್ತು ಬೇಗನೆ ಬರಿದಾಗುವ ಹಂತಕ್ಕೆ ತಲುಪುತ್ತಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ, ನ್ಯಾಯಾಧೀಶ ಜಿ. ದಿನೇಶ್ ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೆವಾ ಪ್ರಾಧಿಕಾರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ವತಿಯಿಂದ ನಗರದ ಇಂಜಿನಿಯರ್ಗಳ ಸಂಸ್ಥೆಯಲ್ಲಿ ಸೋಮವಾರ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು.
ರಾಜ್ಯದ ಯಾವುದೇ ನಗರದಲ್ಲಿ ಇರಲಾರದಷ್ಟು ಮರಗಳು ಮೈಸೂರಲ್ಲಿ ಇದ್ದವು. ಆದರೆ ಅಭಿವೃದ್ಧಿ ಹೆಸರಿನಲ್ಲಿ ಅವುಗಳನ್ನು ಹಾಳು ಮಾಡಲಾಗುತ್ತಿದೆ. ಇದರಿಂದ ತಾಪಮಾನ ಏರಿಕೆಯಾಗುತ್ತಿದೆ. ವಿಲಾಸಿ ಜೀವನ ಶೈಲಿಗೆ ಜೋತು ಬಿದ್ದು, ನೈಸರ್ಗಿಕ ಸಂಪತ್ತನ್ನು ಕಳೆದುಕೊಳ್ಳುತ್ತಿದ್ದೇವೆ. ಅವೈಜ್ಞಾನಿಕ ಕೈಗಾರೀಕರಣದಿಂದ ಅವಶ್ಯಕತೆಗಿಂತ ಹೆಚ್ಚು ಅನುಭೋಗ ಪಡೆಯುತ್ತಿರುವುದು ಇದಕ್ಕೆ ಕಾರಣ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಪೂರ್ವಜರು ಅವಶ್ಯಕತೆ ಇದ್ದಷ್ಟು ಮಾತ್ರ ಸಂಪತ್ತನ್ನು ಬಳಕೆ ಮಾಡುತ್ತಿದ್ದರು. ಆದರೆ ಇಂದು ಮೂರು ತಲೆ ಮಾರಿಗೆ ಆಗುವಷ್ಟು ಸಂಪತ್ತು ಗಳಿಸಬೇಕೆಂಬ ದುರಾಸೆಯಿಂದ ಪರಿಸರ ಮೇಲೆ ನಿತ್ಯ ಅತ್ಯಾಚಾರ ನಡೆಯುತ್ತಿದೆ. ಪ್ಲಾಸ್ಟಿಕ್ ಬಳಕೆಯಿಂದ ಪರಿಸರ, ನದಿ, ಭೂಮಿ ಎಲ್ಲವೂ ಮಲಿನಗೊಳ್ಳುತ್ತಿದೆ. ಒಂದು ವೇಳೆ ಇದು ಹೀಗೆ ಮುಂದುವರಿದರೆ ಕೆಲವೇ ವರ್ಷಗಳಲ್ಲಿ ನೈಸರ್ಗಿಕ ಸಂಪತ್ತು ಬರಿದಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.
ಪರಿಸರ ಮಾಲಿನ್ಯದಿಂದ ಜನರ ಜೀವಿತಾವಧಿ ಕಡಿಮೆಯಾಗುತ್ತಿದೆ. ಈಗಾಗಲೇ ಅತ್ಯಂತ ಕಡಿಮೆ ವಯಸ್ಸಿಗೆ ಯುವ ಜನರಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಹಾಗಾಗಿ ಕೇವಲ ಗಿಡನೆಟ್ಟರೆ ಸಾಲದು. ಬದಲಾಗಿ ಪರಿಸರದ ಬಗ್ಗೆ ಕಾಳಜಿ ವಹಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ಜಯರಾಂ, ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಸಂಘದ ಗೌರವ ಕಾರ್ಯದರ್ಶಿ ಎಚ್.ಎಸ್.ಸುರೇಶ್ ಬಾಬು, ಕೇಂದ್ರೀಯ ಪೆಟ್ರೋಕೆಮಿಕಲ್ ಸಂಸ್ಥೆಯ ಇಂಜಿಯರಿಂಗ್ ಸಂಸ್ಥೆಯ ಪರಮಿಂದರ್ ಸಿಂಗ್, ಹಿರಿಯ ಪರಿಸರ ಅಧಿಕಾರಿ ಜಿ.ಆರ್ ಗಣೇಶನ್, ಅಧಿಕಾರಿಗಳಾದ ಡಾ.ಬಿ.ಎಂ.ಸದಾಶಿವಮೂರ್ತಿ, ಕೆ.ಬಿ.ಭಾಸ್ಕರ್ ಇತರರು ಇದ್ದರು.