More

    ಪ್ರಭಾತನಗರದಲ್ಲಿ ಕುಡಿಯುವ ನೀರಿಗೆ ತೊಂದರೆ

    ಹೊನ್ನಾವರ: ಪಟ್ಟಣದಲ್ಲಿ ಕಳೆದ ಹದಿನೈದು ದಿನಗಳಿಂದ ಒಳಚರಂಡಿ ನಿರ್ಮಾಣ ಕಾಮಗಾರಿ ಆರಂಭಗೊಂಡಿದೆ. ಪಟ್ಟಣ ಪಂಚಾಯಿತಿಯವರು ಮುಂಜಾಗ್ರತೆ ಕ್ರಮ ಕೈಗೊಳ್ಳದ ಕಾರಣ ಕೆಲವೆಡೆ ಮನೆಗಳಿಗೆ ನೀರು ಸರಬರಾಜಾಗುವ ಪೈಪ್​ಗಳು ತುಂಡಾಗಿ ಕುಡಿಯುವ ನೀರಿಗೆ ನಾಗರಿಕರು ತೊಂದರೆಪಡುವಂತಾಗಿದೆ.

    ಪ್ರಭಾತನಗರದ ಫಾರೆಸ್ಟ್ ಕಾಲನಿಯಲ್ಲಿ ನೆಲವನ್ನು ಅಗೆಯುವ ಸಂದರ್ಭದಲ್ಲಿ ಬಹುತೇಕ ಮನೆಗಳ ಪೈಪ್​ಗಳು ತುಂಡಾಗಿವೆ. ಇದರಿಂದಾಗಿ ಕಳೆದ ಹದಿನೈದು ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಂಡಿದೆ. ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಸಾರ್ವಜನಿಕರು ಗುತ್ತಿಗೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಹಾಳಾಗಿರುವ ಪೈಪ್​ಗಳನ್ನು ದುರಸ್ತಿ ಮಾಡುವಂತೆ ನಾಗರಿಕರು ಪಟ್ಟಣ ಪಂಚಾಯಿತಿಗೆ ಅಲೆದಾಡುತ್ತಿದ್ದು, ಯಾವುದೇ ಪ್ರಯೋಜನವಾಗುತ್ತಿಲ್ಲ. ಪಟ್ಟಣ ಪಂಚಾಯಿತಿ ವತಿಯಿಂದ ಪ್ಲಂಬರ್​ಗಳು ಕೆಲವೆಡೆ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಆದರೂ ನೀರು ಸರಬರಾಜಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

    ಪೈಪ್ ಒಡೆದು ನೀರು ಪೋಲು: ಒಳಚರಂಡಿ ಕಾಮಗಾರಿಗೆ ಜೆಸಿಬಿ ಬಳಸಲಾಗುತ್ತಿದೆ. ತೀರ ಮೇಲ್ಮಟ್ಟದಲ್ಲಿರುವ ನೀರು ಸರಬರಾಜು ಮಾಡುವ ಪೈಪ್​ಗಳು ಜೆಸಿಬಿಗೆ ಸಿಲುಕಿ ಹಾಳಾಗುತ್ತಿವೆ. ಇದರಿಂದ ಪ್ರತಿದಿನ ಸಾವಿರಾರು ಲೀಟರ್ ನೀರು ಪೋಲಾಗುತ್ತಿದೆ. ಹಣವಿದ್ದವರು ಖಾಸಗಿ ಟ್ಯಾಂಕರ್​ಗಳಿಂದ ಗಾಡಿಯೊಂದಕ್ಕೆ 300 ರಿಂದ 500 ರೂ. ನೀಡಿ ನೀರು ತರಿಸಿಕೊಳ್ಳುತ್ತಿದ್ದಾರೆ. ಆದರೆ, ಬಡವರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಫಾರೆಸ್ಟ್ ಕಾಲನಿ ಸೇರಿ ಹಲವೆಡೆ ಪೈಪ್​ಲೈನ್​ಗಳಲ್ಲಿ ಉಂಟಾದ ದೋಷವನ್ನು ಸರಿಪಡಿಸಬೇಕು ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.

    ಹೊನ್ನಾವರದ ವಿವಿಧ ವಾರ್ಡ್​ಗಳಲ್ಲಿ ಒಳಚರಂಡಿ ಕಾಮಗಾರಿ ಪ್ರಗತಿಯಲ್ಲಿದೆ. ಗುತ್ತಿಗೆದಾರರು ಎಲ್ಲಿಯೂ ಸರಿಯಾಗಿ ಪೂರ್ಣಗೊಳಿಸುತ್ತಿಲ್ಲ. ಇದರಿಂದಾಗಿ ಕುಡಿಯುವ ನೀರು ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸಭೆ ನಡೆಸಿ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. | ನೀಲಕಂಠ ಮೇಸ್ತ, ಪಪಂ ಮುಖ್ಯಾಧಿಕಾರಿ

    ಒಳಚರಂಡಿ ಕಾಮಗಾರಿ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಗುತ್ತಿಗೆದಾರರ ವಿರುದ್ಧ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಸಭೆ ನಡೆಸಲಾಗಿದೆ. ಕಾಮಗಾರಿಯನ್ನು ಒಂದು ಕಡೆ ಪೂರ್ಣಗೊಳಿಸಿಯೇ ಇನ್ನೊಂದು ಕಡೆ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಂಡು ಪ್ರಾರಂಭಿಸಬೇಕು ಎಂದು ಸೂಚನೆ ನೀಡಲಾಗಿದೆ. | ವಿವೇಕ ಶೇಣ್ವೆ ಹೊನ್ನಾವರ ತಹಸೀಲ್ದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts