ಶಿವಮೊಗ್ಗ: ಇದೇ ಮೊದಲ ಬಾರಿಗೆ ಅರಣ್ಯ ಇಲಾಖೆಯಿಂದ ಕಾಡಿನಾಳದಲ್ಲಿ ಪಕ್ಷಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಿದ್ದಕ್ಕೆ ಪಕ್ಷಿ ಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಜಿಲ್ಲೆಯ 9 ಪಕ್ಷಿ ಪಥಗಳಲ್ಲಿ 9 ತಂಡಗಳ ಮೂಲಕ 90 ಮಂದಿ ಅನೇಕ ಪಕ್ಷಿಗಳನ್ನು ವೀಕ್ಷಿಸಿದರು. ಈ ವೇಳೆ ಅಪರೂಪದ ಪಕ್ಷಿಗಳೂ ಕಂಡು ಬಂದವು.
‘ಕಲರವ-2020’ ಹೆಸರಿನಲ್ಲಿ ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿ.ಶ್ರೀನಿವಾಸುಲು ಪರಿಕಲ್ಪನೆಯಲ್ಲಿ ಪಕ್ಷಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಅರಣ್ಯ ಇಲಾಖೆಯಿಂದಲೇ ಕರೆದೊಯ್ಯುವ ಹಾಗೂ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ಜ.18ರ ರಾತ್ರಿ 8ರೊಳಗೆ ಸೂಚಿತ ಪ್ರವಾಸಿ ಮಂದಿರಕ್ಕೆ ತೆರಳಿದ ಪಕ್ಷಿ ಪ್ರಿಯರು ಭಾನುವಾರ ಬೆಳಗ್ಗೆ ಆರೆಂಟು ಕಿಮೀ ಚಾರಣ ಮಾಡಿ ಅನೇಕ ಪಕ್ಷಿಗಳನ್ನು ವೀಕ್ಷಿಸಿದರು.
ಮಧ್ಯಾಹ್ನದ ವೇಳೆಗೆ ಶಿವಮೊಗ್ಗಕ್ಕೆ ಮರಳಿದ ಪಕ್ಷಿ ಪ್ರಿಯರು ಸಂಜೆ ಸಿಸಿಎಫ್ ಕಚೇರಿಯ ಶ್ರೀಗಂಧ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕಲರವ-2020ರ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು. ಚಾರಣದ ವೇಳೆ ಕಂಡು ಬಂದ ಹಕ್ಕಿಗಳು ಅವುಗಳ ವೈಶಿಷ್ಟ್ಯಳ ಬಗ್ಗೆ ಮಾಹಿತಿ ನೀಡಿದರು. ಆಹಾರಕ್ಕಾಗಿ ಕಾದು ಕುಳಿತ ಸರ್ಪೆಂಟೈಲ್ ಈಗಲ್, ಗಿಳಿ, ರೆಡ್ ವಿಸ್ಕರ್ಡ್, ಬುಲ್ ಬುಲ್ ಮೊಟ್ಟೆಗಳಿಗೆ ಕಾವುಕೊಡುವ ದೃಶ್ಯ, ಏಷಿಯನ್ ಓಪೆನ್ ಬಿಲ್ ಸೇರಿ ನೂರಾರು ಬಗೆಯ ಪಕ್ಷಿಗಳು ಈ ಸಂದರ್ಭದಲ್ಲಿ ಕಂಡು ಬಂದವು. ಹಕ್ಕಿಗಳ ಕೂಗಿನ ವಿಶಿಷ್ಟ, ಅವುಗಳ ಹಾರಾಟ, ಆಹಾರ ಹುಡುಕುವ ಪರಿ ಎಲ್ಲವೂ ಪಕ್ಷಿ ಪ್ರಿಯರ ಗಮಸೆಳೆದವು.
ಕಂಡು ಬಂದ ವಿಶೇಷ ಪಕ್ಷಿಗಳು: ಕಾರ್ಮರ್ಯಾಂಟ್, ಶ್ರೖೆಕ್, ರಿವರ್ಟನ್, ಮಲಬಾರ್ ಟ್ರೋಜಾನ್, ಮಲಬಾರ್ ಬಾರ್ಬೆಟ್
ಭಾನುವಾರ ಸಂಜೆ ಸಿಸಿಎಫ್ ಕಚೇರಿಯಲ್ಲಿ ನಡೆದ ಕಲರವದ ಸಮಾಲೋಚನಾ ಸಭೆಯಲ್ಲಿ ವನ್ಯಜೀವಿ ಛಾಯಾಗ್ರಾಹಕ ಮಂಡಗದ್ದೆ ನಟರಾಜ್, ವೈದ್ಯ, ಹವ್ಯಾಸಿ ಛಾಯಾಗ್ರಾಹಕ ಡಾ.ಶ್ರೀಕಾಂತ್ ಹೆಗಡೆ, ಪತ್ರಿಕಾ ಛಾಯಾಗ್ರಾಹಕರಾದ ಶಿವಮೊಗ್ಗ ನಂದನ್, ಶಿವಮೊಗ್ಗ ನಾಗರಾಜ್, ಡಿಸಿಎಫ್ ವನ್ಯಜೀವಿ ವಿಭಾಗ ಐ.ಎಂ.ನಾಗರಾಜ್, ಡಿಸಿಎಫ್ ಜಿ.ಯು.ಶಂಕರ್ ಇತರರು ಪಾಲ್ಗೊಂಡಿದ್ದರು.