ಮೇಲುಕೋಟೆ: ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮೇಲುಕೋಟೆಯ ಪಂಚಕಲ್ಯಾಣಿಯಲ್ಲಿ ಶ್ರೀ ಚೆಲುವನಾರಾಯಣಸ್ವಾಮಿಯ ಅವಭೃತ-ತೀರ್ಥಸ್ನಾನ ಮಹೋತ್ಸವ ಗುರುವಾರ ನೆರವೇರಿತು. ತೀರ್ಥಸ್ನಾನಕ್ಕೆ ಕೆಲವೇ ಕ್ಷಣಕ್ಕೂ ಮುನ್ನ ಗರುಡಪಕ್ಷಿ ಪ್ರತ್ಯಕ್ಷವಾಗಿ ಕಲ್ಯಾಣಿಗೆ ಪ್ರದಕ್ಷಿಣೆ ಹಾಕಿತು. ಇದನ್ನು ಕಂಡ ಭಕ್ತರ ಜಯಘೋಷ ಮುಗಿಲು ಮುಟ್ಟಿತ್ತು.
ಶ್ರೀ ಚೆಲುವನಾರಾಯಣಸ್ವಾಮಿ ಉತ್ಸವ ಮಧ್ಯಾಹ್ನ 12 ಗಂಟೆಗೆ ಆರಂಭವಾಯಿತು. ಕಲ್ಯಾಣಿಯ ಗಜೇಂದ್ರವರದನ ಸನ್ನಿಧಿ ತಲುಪಿದಾಗ ಸ್ನಪನಶಲ್ವರಿಗೆ ಅರಿಶಿಣ ಅಭಿಷೇಕ ಮಾಡಲಾಯಿತು. ನಂತರ ವೇದಮಂತ್ರಗಳೊಂದಿಗೆ ನಾಡು ಸುಭೀಕ್ಷವಾಗಿರಲೆಂದು ಪ್ರಾರ್ಥಿಸಿ ಕಲ್ಯಾಣಿಯಲ್ಲಿ ತೀರ್ಥಸ್ನಾನ ಮಾಡಿಸಲಾಯಿತು. ಈ ವೇಳೆ ಕಲ್ಯಾಣಿಯ ನಾಲ್ಕೂ ಕಡೆ ಸೇರಿದ್ದ ಭಕ್ತರು ಜಯಘೋಷ ಮೊಳಗಿಸಿದರು. ಸುಡುಬಿಸಿಲಿದ್ದರೂ ಲೆಕ್ಕಿಸದೆ ವಯೋವೃದ್ಧರು, ಮಕ್ಕಳಾದಿಯಾಗಿ ಸಹಸ್ರಾರು ಸಂಖ್ಯೆಯ ಭಕ್ತರು ಮೆಟ್ಟಿಲ ಮೇಲೆ ಕುಳಿತು ಹಾಗೂ ಸಾಲುಮಂಟಪಗಳಲ್ಲಿ ನಿಂತು ತೀರ್ಥಸ್ನಾನದ ಸಂಭ್ರಮದ ಕ್ಷಣಗಳಿಗಾಗಿ ಕಾಯುತ್ತಿದ್ದರು. ನಂತರ ಭಕ್ತರು ಕಲ್ಯಾಣಿಯಲ್ಲಿ ಪವಿತ್ರಸ್ನಾನ ಮಾಡಿದರು. ಸಂಜೆ ಪರಕಾಲ ಮಠದಲ್ಲಿ ಹೋಮ-ಹವನ ನೆರವೇರಿದ ನಂತರ ಪಟ್ಟಾಭಿಷೇಕ ಮಹೋತ್ಸವ ನೆರವೇರಿತು. ಇದರೊಂದಿಗೆ ರಾಜಮುಡಿ ಕಿರೀಟಧಾರಣೆಯ ಉತ್ಸವ ಸಂಪನ್ನಗೊಂಡಿತು.