More

    ನಿಲ್ಲುತ್ತಿಲ್ಲ ಫಾಸ್ಟ್​ಟ್ಯಾಗ್​ ಕಿತ್ತಾಟ; ದುಪ್ಪಟ್ಟು ಶುಲ್ಕ ಪಾವತಿಗೆ ಮಾಲೀಕರ ನಕಾರ, ಟೋಲ್ ಸಿಬ್ಬಂದಿ ಜತೆ ವಾಗ್ವಾದ

    ಬೆಂಗಳೂರು:  ರಾಷ್ಟ್ರೀಯ ಹೆದ್ದಾರಿಗಳ ಟೋಲ್ ಪ್ಲಾಜಾಗಳ ಸಂಚರಿಸುವ ವಾಹನಗಳಿಗೆ ಫಾಸ್ಟ್​ಟ್ಯಾಗ್​ ಅಳವಡಿಕೆ ವ್ಯವಸ್ಥೆ ಜಾರಿಯಾಗಿ ಎರಡು ದಿನ ಕಳೆದರೂ ದುಪ್ಪಟ್ಟು ಶುಲ್ಕ ಪಡೆಯುವ ವಿಚಾರವಾಗಿ ಟೋಲ್ ಸಿಬ್ಬಂದಿ ಹಾಗೂ ಚಾಲಕರ ನಡುವೆ ವಾಗ್ವಾದ ಹಾಗೂ ಗೊಂದಲಗಳು ಮುಂದುವರಿದಿವೆ.

    ಟೋಲ್​ಪ್ಲಾಜಾಗಳಲ್ಲಿ ಸಂಚಾರ ದಟ್ಟಣೆ ನಿವಾರಣೆ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಫಾಸ್ಟ್​ಟ್ಯಾಗ್​ ಅಳವಡಿಸಿಕೊಂಡ ವಾಹನಗಳಿಗೆ ಫಾಸ್ಟ್​ಟ್ಯಾಗ್​ ಪಥದಲ್ಲಿಯೇ ಸಂಚರಿಸಲು ಅವಕಾಶ ನೀಡುತ್ತಿದೆ. ಫಾಸ್ಟ್​ಟ್ಯಾಗ್​ ಇಲ್ಲದ ವಾಹನಗಳನ್ನು ನಗದು ಪಥದಲ್ಲಿ ಸಂಚರಿಸಲು ಸೂಚಿಸಲಾಗಿದೆ. ಈ ನಡುವೆ ಫಾಸ್ಟ್​ಟ್ಯಾಗ್​ ಇಲ್ಲದ ವಾಹನಗಳು ಫಾಸ್ಟಾ್ಯಗ್ ಪಥದಲ್ಲಿ ಸಂಚರಿಸುತ್ತಿರುವುದರಿಂದ ಟೋಲ್ ಸಿಬ್ಬಂದಿ ಕೇಂದ್ರ ಸರ್ಕಾರದ ಆದೇಶದನ್ವಯ ದುಪ್ಪಟ್ಟು ಶುಲ್ಕ ವಸೂಲಿಗೆ ಮುಂದಾಗಿದ್ದಾರೆ. ಇದು ವಾಹನ ಚಾಲಕರು ಹಾಗೂ ಟೋಲ್ ಸಿಬ್ಬಂದಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

    ಅತ್ತಿಬೆಲೆ, ನೆಲಮಂಗಲ, ಎಲೆಕ್ಟ್ರಾನಿಕ್ ಸಿಟಿ ಟೋಲ್ ಪ್ಲಾಜಾಗಳಲ್ಲಿ ಶುಕ್ರವಾರ ಫಾಸ್ಟಾ್ಯಗ್ ಇಲ್ಲದ ವಾಹನಗಳು ಫಾಸ್ಟ್​ಟ್ಯಾಗ್​ ಲೇನ್ ಬಳಕೆ ಮಾಡಿದಾಗ ಟೋಲ್ ಸಿಬ್ಬಂದಿ ಮತ್ತು ವಾಹನ ಚಾಲಕರ ನಡುವೆ ಗಲಾಟೆ ನಡೆದಿದೆ. ನಿಯಮದ ಪ್ರಕಾರ ದುಪ್ಪಟ್ಟು ಶುಲ್ಕ ನೀಡಲೇಬೇಕೆಂದು ಟೋಲ್ ಸಿಬ್ಬಂದಿ ಪಟ್ಟು ಹಿಡಿದಿದ್ದರಿಂದ ಚಾಲಕರು ವಾಗ್ವಾದಕ್ಕೆ ಮುಂದಾಗಿದ್ದಾರೆ. ಈ ಜಗಳದಲ್ಲಿ ಇತರೆ ವಾಹನಗಳ ಸವಾರರು ಕಿರಿಕಿರಿ ಅನುಭವಿಸಿದರು. ಟೋಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಕೈಕೊಟ್ಟ ಸ್ಕ್ಯಾನರ್: ರಾಜ್ಯದ ಟೋಲ್ ಪ್ಲಾಜಾಗಳ ಫಾಸ್ಟ್​ಟ್ಯಾಗ್​ ಲೈನ್​ಗಳಲ್ಲಿ ಅಳವಡಿಸಿರುವ ಸ್ಕ್ಯಾನರ್​ಗಳಲ್ಲಿ ತಾಂತ್ರಿಕ ಸಮಸ್ಯೆ ಶುಕ್ರವಾರವೂ ಮುಂದುವರಿದಿದೆ. ತಾಂತ್ರಿಕ ಸಮಸ್ಯೆ ಪುನರಾವರ್ತನೆಯಾದ ಪರಿಣಾಮ ಟೋಲ್ ಸಿಬ್ಬಂದಿ ಹ್ಯಾಂಡ್ ರೀಡರ್ ಮೂಲಕ ವಾಹನಗಳ ಫಾಸ್ಟ್​ಟ್ಯಾಗ್​ ಸ್ಟಿಕ್ಕರ್​ಗಳನ್ನು ಸ್ಕ್ಯಾನ್ ಮಾಡಿದರು. ಅದರಿಂದ ಫಾಸ್ಟ್​ಟ್ಯಾಗ್​ ಲೇನ್​ನಲ್ಲೂ ಕೆಲ ಕಾಲ ವಾಹನ ದಟ್ಟಣೆ ಉಂಟಾಯಿತು.

    ಸಂಚಾರ ದಟ್ಟಣೆ ಕಡಿಮೆಯಾಗಿಲ್ಲ: ಟೋಲ್ ಸಿಬ್ಬಂದಿ ಮತ್ತು ವಾಹನ ಚಾಲಕ ನಡುವಿನ ವಾಗ್ವಾದ, ಸ್ಕ್ಯಾನರ್​​ಗಳ ಸಮಸ್ಯೆ ಇಲ್ಲದ ಕಡೆಯಲ್ಲೂ ಫಾಸ್ಟ್​ಟ್ಯಾಗ್​ ಪಥದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಏಕೆಂದರೆ ಫಾಸ್ಟ್​ಟ್ಯಾಗ್​ ಸ್ಟಿಕ್ಕರ್​ನಲ್ಲಿನ ಬಾರ್​ಕೋಡ್​ಗಳನ್ನು ಸ್ಕ್ಯಾನ್​ ​ ಮಾಡಲು ಟೋಲ್​ಪ್ಲಾಜಾಗಳಲ್ಲಿ ಕನಿಷ್ಠ 10ರಿಂದ 15 ಸೆಕೆಂಡ್​ಹಿಡಿಯುತ್ತಿರುವುದು ಇದಕ್ಕೆ ಕಾರಣವಾಗಿದೆ.

    ಕ್ಯಾಶ್ ಲೈನ್ ಹೊರೆ

    ಈ ಹಿಂದೆ ಟೋಲ್ ಪ್ಲಾಜಾಗಳಲ್ಲಿ ವಾಹನ ಹೋಗುವ ಹಾಗೂ ಹಿಂದಿರುಗಿ ಬರುವ ಎರಡೂ ಕಡೆಯ ಶುಲ್ಕವನ್ನು ಒಮ್ಮೆಗೆ ಪಾವತಿಸಿದರೆ ಶುಲ್ಕದಲ್ಲಿ ರಿಯಾಯಿತಿ ಸಿಗುತ್ತಿತ್ತು. ಅಂದರೆ, ವಾಹನ 24 ತಾಸಿನಲ್ಲಿ ಹಿಂದಿರುಗಬೇಕಿತ್ತು. ಇದೀಗ ಫಾಸ್ಟ್​ಟ್ಯಾಗ್​ ಪಥದಲ್ಲಿ ಆ ವ್ಯವಸ್ಥೆ ಮುಂದುವರಿದೆ. ನಗದು ಪಥದಲ್ಲಿ ಮಾತ್ರ ಆ ವ್ಯವಸ್ಥೆ ಇಲ್ಲದಿರುವುದರಿಂದ ಹೋಗುವಾಗ ಎಷ್ಟು ಶುಲ್ಕ ಪಾವತಿಸಬೇಕೋ ಹಿಂದಿರುಗುವಾಗಲೂ ಅಷ್ಟೇ ಶುಲ್ಕ ಪಾವತಿಸಬೇಕು. ಇದರಿಂದ ನಗದು ಪಥದಲ್ಲಿ ಸಂಚರಿಸುವ ವಾಹನಗಳಿಗೆ ಹೊರೆಯಾಗುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ಸ್ಪಷ್ಟನೆ ನೀಡದಿರುವುದು ವಾಹನ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.

    ಟೋಲ್ ಪ್ಲಾಜಾಗಳಲ್ಲಿ ಸಣ್ಣ ಪ್ರಮಾಣದ ಸಮಸ್ಯೆಗಳಿವೆ. ದಿನಗಳೆದಂತೆ ಎಲ್ಲವೂ ಸರಿಹೋಗಲಿದೆ. ಹೊಸ ವ್ಯವಸ್ಥೆ ಬಂದಾಗ ಇಂತಹ ಲೋಷದೋಷಗಳು ಸಾಮಾನ್ಯ. ಹಂತವಾಗಿ ಎಲ್ಲವನ್ನೂ ಸರಿಪಡಿಸಿಕೊಂಡು ಉತ್ತಮ ಸೇವೆ ನೀಡಲು ಪ್ರಯತ್ನಿಸಲಾಗುವುದು.

    | ಶ್ರೀಧರ್ ಎನ್​ಎಚ್​ಎಐ ಪ್ರಾದೇಶಿಕ ಕಚೇರಿ ಪ್ರಧಾನ ವ್ಯವಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts