More

    ದಸರಾ ಗಜಪಯಣಕ್ಕೆ ಸಕಲ ಸಿದ್ಧತೆ

    ಹನಗೋಡು : ವಿಶ್ವ ವಿಖ್ಯಾತ ದಸರಾದ ಆಕರ್ಷಣೆಯಾದ ಗಜಪಯಣಕ್ಕೆ ನಾಗರಹೊಳೆ ಉದ್ಯಾನದ ಹೆಬ್ಬಾಗಿಲು ವೀರನಹೊಸಹಳ್ಳಿ ಬಳಿ ಸೆ.1 ರಂದು ಚಾಲನೆ ದೊರೆಯಲಿದ್ದು, ಅರಣ್ಯ ಇಲಾಖೆ ಎಲ್ಲ ಸಿದ್ಧ್ದತೆ ಮಾಡಿಕೊಂಡಿದೆ.

    ಈ ಬಾರಿ ಗಜಪಯಣ ವಿಜೃಂಭಣೆ, ವಿಭಿನ್ನ, ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಜಂಗಲ್ ಇನ್ ರೆಸಾರ್ಟ್ ಬಳಿ ಈ ಬಾರಿ ಗಣ್ಯರು ಸೇರಿದಂತೆ ಸುಮಾರು ಎರಡು ಸಾವಿರ ಜನರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಮಳೆ ನೀರು ರಕ್ಷಕ ಜರ್ಮನ್ ಟೆಂಟ್‌ನ ಬೃಹತ್ ಪೆಂಡಾಲ್ ಹಾಕಲಾಗಿದೆ. ರಸ್ತೆಯ ಇಕ್ಕೆಲಗಳಲ್ಲೂ ಗಿಡಗಂಟಿಗಳನ್ನು ತೆರವುಗೊಳಿಸಲಾಗಿದೆ. ಸುಮಾರು ಮೂರು ಸಾವಿರ ಜನರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಳ್ಳುವಂತೆ ವ್ಯಾಪಕ ಪ್ರಚಾರ ಮಾಡಲಾಗಿದೆ.

    ವೈಭವದ ಕಲಾ ತಂಡಗಳು : ಈ ವೇಳೆ ಗಜಪಡೆಯ ಮುಂದೆ ಆದಿವಾಸಿ ಮಕ್ಕಳ ನೃತ್ಯ, ಕಂಸಾಳೆ, ಡೊಳ್ಳು ಕುಣಿತ, ವೀರಗಾಸೆ ಕುಣಿತ, ಪೂಜಾ ಕುಣಿತ, ಪಟಕುಣಿತ, ಗೊರವರ ಕುಣಿತ, ಗುರುಪುರ ಟಿಬೇಟಿಯನ್ ಶಾಲಾ ಮಕ್ಕಳ ನೃತ್ಯ ಸೇರಿದಂತೆ ಸುಮಾರು ಹತ್ತಕ್ಕೂ ಹೆಚ್ಚು ಕಲಾ ತಂಡಗಳು ಗಜಪಡೆಯ ಮುಂದೆ ಪ್ರದರ್ಶನ ನೀಡಲಿವೆ.

    ಸೆ.1ರ ಶುಕ್ರವಾರ ಬೆಳಗ್ಗೆ 9.45ರಿಂದ 10.15ರೊಳಗೆ ಸಂಪ್ರದಾಯದಂತೆ ಅರಮನೆ ಪುರೋಹಿತ ಪ್ರಹ್ಲಾದ ರಾವ್ ಮತ್ತವರ ತಂಡ ವೀರನಹೊಸಹಳ್ಳಿ ಗೇಟ್ ಬಳಿಯ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಗಜಪಡೆಗೆ ಪೂಜೆ ಸಲ್ಲಿಸುವರು. ನಂತರ ಅತಿಥಿಗಳು ಗಜಪಡೆಗೆ ಪುಷ್ಪಾರ್ಚನೆ ನೆರವೇರಿಸಿದ ನಂತರ ಪಯಣಕ್ಕೆ ಚಾಲನೆ ದೊರೆಯಲಿದೆ. ಮೊದಲ ತಂಡದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತ್ರತ್ವದ ಒಂಬತ್ತು ಆನೆಗಳು ಪಾಲ್ಗೊಳ್ಳುತ್ತಿವೆ ಎಂದರು.

    ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ : ಗಜಪಯಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ನೇತೃತ್ವ್ವದಲ್ಲಿ ಚಾಲನೆ ದೊರೆಯಲಿದೆ. ಶಾಸಕ ಜಿ.ಡಿ.ಹರೀಶ್‌ಗೌಡ ಅಧ್ಯಕ್ಷತೆ ವಹಿಸಲಿದ್ದು, ಅರಣ್ಯ ಸಚಿವ ಈಶ್ವರಖಂಡ್ರೆ ದಸರಾ ಆನೆಗಳ ಪಟ್ಟಿ ಹಾಗೂ ಕಿರು ಪುಸ್ತಕ ಬಿಡುಗಡೆ ಮಾಡುವರು. ಸಚಿವರಾದ ಕೆ.ವೆಂಕಟೇಶ್, ಶಿವರಾಜ್ ತಂಗಡಗಿ, ಸಂಸದ ಪ್ರತಾಪಸಿಂಹ, ಮೇಯರ್ ಶಿವಕುಮಾರ್, ದೊಡ್ಡಹೆಜ್ಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾಲೋಕೇಶ್ ಸೇರಿದಂತೆ ಜಿಲ್ಲೆಯ ಶಾಸಕರು ಹಾಗೂ ಅರಣ್ಯ ಇಲಾಖೆ ಹಿರಿಯ ಅಕಾರಿಗಳು ಭಾಗವಹಿಸಲಿದ್ದಾರೆ.

    ಮೊದಲ ತಂಡದಲ್ಲಿ 9 ಆನೆಗಳು: ಗಜಪಯಣದ ಮೊದಲ ತಂಡದಲ್ಲಿ ಅಂಬಾರಿ ಹೊರುವ ಅಭಿಮನ್ಯು ಸೇರಿದಂತೆ 9 ಆನೆಗಳ ತಂಡ ಸೆ.1ರಂದು ಮೈಸೂರಿನತ್ತ ಪಯಣ ಬೆಳೆಸಲಿವೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ಮತ್ತಿಗೋಡು ಆನೆ ಶಿಬಿರದ ಅಭಿಮನ್ಯು, ಭೀಮ, ಮಹೇಂದ್ರ, ಬಳ್ಳೆ ಆನೆ ಶಿಬಿರದ ಅರ್ಜುನ, ಭೀಮನಕಟ್ಟೆ ಆನೆ ಶಿಬಿರದ ವರಲಕ್ಷ್ಮೀ, ಕೊಡಗಿನ ದುಬಾರೆ ಶಿಬಿರದ ಧನಂಜಯ, ಗೋಪಿ ಹಾಗೂ ಹೆಣ್ಣಾನೆ ವಿಜಯ ಹಾಗೂ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ರಾಮಾಪುರ ಆನೆ ಶಿಬಿರದ ಪಾರ್ಥಸಾರಥಿ ಆನೆಗಳು ಭಾಗವಹಿಸಲಿವೆ ಎಂದು ಮೈಸೂರು ವನ್ಯಜೀವಿ ವಿಭಾಗದ ಡಿಸಿಎಫ್ ಸೌರಬ್‌ಕುಮಾರ್ ಮಾಹಿತಿ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts