ಸಿದ್ದಾಪುರ: ಎಸ್ಕೆಎಸ್ಎಸ್ಎಫ್ ಕೊಡಗು ಜಿಲ್ಲಾ ಖಾಝಿಯಾಗಿ ಕೋಯಿಕ್ಕೋಡ್ ಹಿರಿಯ ಖಾಝಿ ಸಯ್ಯದ್ ಜಮಲುಲ್ಲೈಲಿ ಮುಹಮ್ಮದ್ ಕೋಯ ತಞಳ್ ಅಧಿಕಾರ ವಹಿಸಿಕೊಂಡಿದ್ದಾರೆ.
ಸಿದ್ದಾಪುರ ಮುನವ್ವಿರುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಖಾಝಿ ಬೈಯ್ಯತ್ ಸಮಾರಂಭದಲ್ಲಿ ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಉಸ್ಮಾನ್ ಹಾಜಿ ಮುಸ್ಲಿಂ ಸಾಂಪ್ರದಾಯಿಕ ಟೋಪಿ ಧರಿಸಿಕೊಡುವ ಮೂಲಕ ಜಿಲ್ಲಾ ಖಾಝಿಯಾಗಿ ಅಂಗೀಕಾರ ನೀಡಲಾಯಿತು.
ಸಯ್ಯದ್ ಜಮಲುಲ್ಲೈಲಿ ಮುಹಮ್ಮದ್ ಕೋಯ ತಞಳ್ ಅಧಿಕಾರ ವಹಿಸಿದ ಬಳಿಕ ಮಾತನಾಡಿ, ಎನ್ಆರ್ಸಿ ಹಾಗೂ ಸಿಎಎ ವಿರುದ್ಧ ಹೋರಾಟ ಮಾಡುವವರು ಶಾಂತಿಯುತವಾಗಿ ಸಮಾಜದ ಹಾಗೂ ದೇಶದ ಸ್ವಾಸ್ಥೃಕ್ಕೆ ಧಕ್ಕೆಯಾಗದ ರೀತಿಯಲ್ಲಿ ಸರ್ಕಾರದ ಗಮನ ಸೆಳೆಯಬೇಕೆಂದು ಸೂಚನೆ ನೀಡಿದರು.
ಸಿದ್ದಾಪುರ, ವಿರಾಜಪೇಟೆ, ಗೋಣಿಕೊಪ್ಪ, ಕಲ್ಲುಬಾಣೆ, ಪೆರುಂಬಾಡಿ, ಕಡಂಗ, ಎಡಪ್ಪಾಲ, ಪೊನ್ನಂಪೇಟೆ, ಬೆಮ್ಮತ್ತಿ, ಪೊನ್ನಪ್ಪ ಸಂತೆ, ಬಾಳಲೆ, ತಿತಿಮತಿ, ಬಜಕೊಲ್ಲಿ, ನಲ್ವತ್ತೇಕರೆ, ನೆಲ್ಯಹುದಿಕೇರಿ, ಅರೆಕಾಡು, ಒಂಟಿಯಂಗಡಿ, ಕುಶಾಲನಗರ, ಕೂಡುಗದ್ದೆ, ಕೊಡ್ಲಿಪೇಟೆ, ಬಜೆಗುಂಡಿ, ಮಡಿಕೇರಿ ಹಾಗೂ ಪಿರಿಯಾಪಟ್ಟಣ ಜಮಾಅತ್ ಸಮಿತಿ ಅಧ್ಯಕ್ಷರು ಖಾಝಿ ಬೈಯತ್ ಮಾಡಿದರು. ಎಸ್ಕೆಜೆಯು ಜಂಟಿ ಕಾರ್ಯದರ್ಶಿ ಪಿ.ಪಿ.ಉಮರ್ ಮುಸ್ಲಿಯಾರ್, ಎಸ್ಕೆಜೆಎಂಸಿಸಿ ಕೇಂದ್ರ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಸಿದ್ದಾಪುರ ಮುಸ್ಲಿಂ ಜಮಾಅತ್ ಅಧ್ಯಕ್ಷ ಕೆ.ಉಸ್ಮಾನ್ ಹಾಜಿ, ವೈ.ಎಂ. ಉಮರ್ ಫೈಝಿ, ಸಿಪಿಎಂ ಬಶೀರ್ ಹಾಜಿ, ತಮ್ಲೀಖ್ ಧಾರಿಮಿ, ಹನೀಫ್ ಫೈಝಿ, ನೌಫಲ್ ಹುದವಿ ಮತ್ತಿತರರಿದ್ದರು.