ಬೀದರ್: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ ಚೆಸ್ ಟೂರ್ನಮೆಂಟ್ ಇಲ್ಲಿಯ ಐ.ಎಂ.ಎ. ಹಾಲ್ನಲ್ಲಿ ಶನಿವಾರ ಆರಂಭಗೊಂಡಿತು.
ಬೀದರ್ ದಕ್ಷಿಣ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಟೂರ್ನಮೆಂಟ್ಗೆ ಚಾಲನೆ ನೀಡಿ, ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ಕ್ರೀಡೆಗಳಲ್ಲಿ ಸೋಲು, ಗೆಲುವು ಸ್ವಾಭಾವಿಕ. ಹೀಗಾಗಿ ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂದು ಸಲಹೆ ಮಾಡಿದರು.
ಜಿಲ್ಲೆಯಲ್ಲಿ ಚೆಸ್ ಕ್ರೀಡೆಗೆ ಉತ್ತೇಜನ ನೀಡಲು ಟೂರ್ನಮೆಂಟ್ ಹಮ್ಮಿಕೊಳ್ಳಲಾಗಿದೆ. ವಿವಿಧ ಶಾಲೆಗಳ 111 ವಿದ್ಯಾರ್ಥಿಗಳು ಟೂರ್ನಮೆಂಟ್ನಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ ಎಂದು ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ನಿತಿನ್ ಕರ್ಪೂರ ಹೇಳಿದರು.
ಟೂರ್ನಮೆಂಟ್ನಲ್ಲಿ ಒಟ್ಟು 9 ಸುತ್ತುಗಳು ಇವೆ. ಮೊದಲ ದಿನ 5 ಸುತ್ತುಗಳ ಪಂದ್ಯಗಳು ನಡೆದಿವೆ. ಭಾನುವಾರ ಇನ್ನೂ ನಾಲ್ಕು ಸುತ್ತಿನ ಪಂದ್ಯಗಳು ಜರುಗಲಿವೆ. 8 ರಿಂದ 12 ವರ್ಷ, 12 ರಿಂದ 15 ವರ್ಷ ಹಾಗೂ 15 ರಿಂದ 18 ವರ್ಷದ ಮೂರು ವಿಭಾಗಗಳ ವಿಜೇತರಿಗೆ ಪ್ರತ್ಯೇಕ ರೂ. 3 ಸಾವಿರ ಪ್ರಥಮ, ರೂ. 2 ಸಾವಿರ ದ್ವಿತೀಯ ಹಾಗೂ ರೂ. 1 ಸಾವಿರ ತೃತೀಯ ಬಹುಮಾನ ನೀಡಲಾಗುವುದು. ಸಮಗ್ರ ಚಾಂಪಿಯನ್ಗೆ ರೂ. 5 ಸಾವಿರ ನಗದು ಹಾಗೂ ಟ್ರೋಫಿ ಕೊಡಲಾಗುವುದು ಎಂದು ತಿಳಿಸಿದರು.
ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸಂಜಯ್ ಹತ್ತಿ, ಕ್ಲಬ್ ಉಪಾಧ್ಯಕ್ಷ ಶಿವಕುಮಾರ ಪಾಖಾಲ್, ಕಾರ್ಯದರ್ಶಿ ಡಾ. ರಿತೇಶ ಸುಲೆಗಾಂವ್, ಖಜಾಂಚಿ ಸತೀಶ ಸ್ವಾಮಿ ಮತ್ತಿತರರು ಇದ್ದರು.