More

    ಗಮನ ಸೆಳೆದ ಸೈಕ್ಲೋಥಾನ್, ಮ್ಯಾರಥಾನ್

    ಮೈಸೂರು: ಯುವಜನರ ದೈಹಿಕ ದಕ್ಷತೆ ಹಾಗೂ ಉತ್ತಮ ಆರೋಗ್ಯಕ್ಕಾಗಿ ಫಿಟ್ ಇಂಡಿಯಾ ಅಭಿಯಾನದಡಿ ಶನಿವಾರ ಸೈಕ್ಲೋಥಾನ್ ಮತ್ತು ಮ್ಯಾರಥಾನ್ ನಡೆಯಿತು.

    ನೆಹರು ಯುವಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈಸೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಿತು.

    ಪ್ರತ್ಯೇಕವಾಗಿ ನಡೆದ ಸೈಕ್ಲೋಥಾನ್ ಮತ್ತು ಮ್ಯಾರಥಾನ್‌ನಲ್ಲಿ ಅಂದಾಜು 175 ಜನರು ಪಾಲ್ಗೊಳ್ಳುವ ಮೂಲಕ ಗಮನ ಸೆಳೆದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಯುವ ಜನರೊಂದಿಗೆ 50 ವರ್ಷ ಮೇಲ್ಪಟ್ಟವರು ಕೂಡ ಭಾಗಿಯಾಗಿದ್ದು ವಿಶೇಷ. ಇನ್ನೂ ಕೆಲವರು ಸೈಕಲ್ ತುಳಿದು ಎಲ್ಲರ ಗಮನ ಸೆಳೆದರು.

    ಉಭಯ ರ‌್ಯಾಲಿ ಎಸ್‌ಪಿ ಕಚೇರಿ ವೃತ್ತ ಮೂಲಕ ಹಾರ್ಡಿಂಗ್ ವೃತ್ತ, ಅರಮನೆಯ ಉತ್ತರ ದ್ವಾರ, ಕೆ.ಆರ್.ವೃತ್ತ, ಸಯ್ಯಜಿರಾವ್ ರಸ್ತೆ, ಕೆ.ಆರ್.ಆಸ್ಪತ್ರೆ ವೃತ್ತ, ಇರ‌್ವಿನ್ ರಸ್ತೆ, ಸರ್ಕಾರಿ ಅತಿಥಿ ಗೃಹ ಮುಂಭಾಗ, ಜೆ.ಪಿ ಫಾರ್ಚೂನ್ ಹೋಟೆಲ್ ಮಾರ್ಗವಾಗಿ ತೆರಳಿ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಅಂತ್ಯಗೊಂಡಿತು.

    ಈ ವೇಳೆ ಮಾತನಾಡಿದ ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಭಾರತದ ಜನಸಂಖ್ಯೆಯಲ್ಲಿ ಶೇ.50ರಷ್ಟು ಯುವಜನರಿದ್ದು, ಇದುವೇ ದೇಶದ ಶಕ್ತಿ. ಯುವ ಜನರು ಆರೋಗ್ಯದ ಕಡೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

    ಮೈಸೂರು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ದಿವ್ಯಶ್ರೀ ಮಾತನಾಡಿ, ನಿತ್ಯ ವ್ಯಾಯಾಮ ಮಾಡುವುದರಿಂದ ಇಡೀ ದಿನದ ಚಟುವಟಿಕೆಗಳು ಉಲ್ಲಾಸದಾಯಕವಾಗಿರುತ್ತವೆ. ಜತೆಗೆ ಮನಸ್ಸು ಕೂಡ ಸದೃಢವಾಗುತ್ತದೆ. ಆರೋಗ್ಯ ಕಾಪಾಡಿಕೊಂಡರೆ ಜೀವನದಲ್ಲಿ ಏನಾದರೂ ಸಾಧನೆ ಮಾಡಬಹುದು ಎಂದರು.

    ದೆಹಲಿಯ ನೆಹರು ಯುವ ಕೇಂದ್ರ ಜಂಟಿ ನಿರ್ದೇಶಕ ಯು.ಪಿ.ಸಿಂಗ್ ಕಾರ್ಯಕ್ರಮ ಉದ್ಘಾಟಿಸಿದರು. ನ್ಯಾಷನಲ್ ಅಡ್ವೆಂಚರ್ ಫೌಂಡೇಷನ್ ನಿರ್ದೇಶಕಿ ರುಕ್ಮಿಣಿ ಚಂದ್ರನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್, ಜಿಲ್ಲಾ ಯುವಜನ ಸಮನ್ವಯಾಕಾರಿ ಎಸ್.ಸಿದ್ದರಾಮಪ್ಪ ಇತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts