ಎಲ್ಲ ಕ್ಷೇತ್ರದಲ್ಲೂ ಉತ್ತಮ ಸಾಧನೆ
ಬೇಲೂರು: ಶಾಲಾ ಪ್ರಾರಂಭೋತ್ಸವ ಹಿನ್ನೆಲೆಯಲ್ಲಿ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಹೂವು ನೀಡಿ ಸ್ವಾಗತಿಸಿದರು.
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಪ್ರಸ್ತುತ ಸರ್ಕಾರಿ ಶಾಲೆ ಮಕ್ಕಳು ಎಲ್ಲ ಕ್ಷೇತ್ರದಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ. ಜತೆಗೆ ಸರ್ಕಾರಿ ಶಾಲೆಯಲ್ಲಿ ಸಿಗುವ ಸೌಲಭ್ಯಗಳು ಬೇರೆ ಯಾವುದೇ ಶಾಲೆಯಲ್ಲೂ ಸಿಗುವುದಿಲ್ಲ. ಇಲ್ಲಿ ಉತ್ತಮ ಬೋಧನೆ, ಮಕ್ಕಳಿಗೆ ಕಲಿಕಾ ಪಾಠ, ನಲಿ ಕಲಿ, ವಿಜ್ಞಾನ ಕುರಿತ ವಿಷಯಗಳು, ಅವರಲ್ಲಿರುವ ಬೌದ್ಧಿಕ ಮಟ್ಟ ಬೆಳೆಯಲು ಅನುಕೂಲವಾಗುವ ವಾತಾವರಣವಿದೆ ಎಂದು ಅವರು ಹೇಳಿದರು.
ಪುರಸಭೆ ಸದಸ್ಯೆ ಉಷಾ, ಎಸ್ಡಿಎಂಸಿ ಸದಸ್ಯ ನಾರಾಯಣಾಚಾರ್, ಪ್ರಸನ್ನ, ದೈಹಿಕ ಶಿಕ್ಷಣ ಶಿಕ್ಷಕ ವಿಶ್ವನಾಥ್, ಶಿಕ್ಷಕಿಯರಾದ ಶಾಕುಂತಲಾ, ಶೋಭಾ, ಮಾರುತಿ ಇತರರು ಇದ್ದರು.