ಗುಂಡ್ಲುಪೇಟೆ: ನೂತನ ವರ್ಷದಂದು ಅರಣ್ಯಕ್ಕೆ ಬೆಂಕಿ ಬೀಳದಂತೆ ಕಾಪಾಡುವುದಾಗಿ ಅರಣ್ಯ ಸಿಬ್ಬಂದಿ, ಫೈರ್ ವಾಚರ್ ಹಾಗೂ ಗಿರಿಜನರು ಪ್ರತಿಜ್ಞೆ ಮಾಡಿದರು.
ಬಂಡೀಪುರ ಹುಲಿ ಯೋಜನೆಯ ಮದ್ದೂರು ಅರಣ್ಯದಲ್ಲಿ ನೂತನ ವರ್ಷದ ಅಂಗವಾಗಿ ಆಯೋಜಿಸಿದ್ದ ವೃಕ್ಷ ಪೂಜೆ ಕಾರ್ಯಕ್ರಮದಲ್ಲಿ ಮದ್ದೂರು ವಲಯಾರಣ್ಯಾಧಿಕಾರಿ ಶೈಲೇಂದ್ರ ಮಾತನಾಡಿ, ಎಲ್ಲರೂ ಒಂದೇ ರೀತಿಯಲ್ಲಿ ನೂತನ ವರ್ಷಾಚರಣೆ ಮಾಡುತ್ತಿದ್ದಾರೆ. ಆದರೆ, ಅರಣ್ಯ ಹಾಗೂ ನಮ್ಮ ಸುತ್ತಲಿನ ಪರಿಸರವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯಿದ್ದು ಅರಣ್ಯ ಇಲಾಖೆ ವೃಕ್ಷಪೂಜೆ ಆಯೋಜಿಸುವ ಮೂಲಕ ವಿಶಿಷ್ಟವಾಗಿ ಆಚರಿಸುತ್ತಿದೆ ಎಂದರು.
ಕಳೆದ ಬಾರಿ ಸುತ್ತಲಿನ ಗಿರಿಜನರು, ಗ್ರಾಮಸ್ಥರು, ಫೈರ್ ವಾಚರ್, ಅರಣ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಬೇಸಿಗೆಯನ್ನು ಸಮರ್ಥವಾಗಿ ನಿರ್ವಹಿಸಿದ ಪರಿಣಾಮ ಮದ್ದೂರು ಅರಣ್ಯಕ್ಕೆ ಸಣ್ಣ ಬೆಂಕಿಯೂ ಬೀಳದಂತೆ ಎಚ್ಚರಿಕೆ ತೆಗೆದುಕೊಳ್ಳಲಾಗಿತ್ತು. ಈ ಬಾರಿಯೂ ಅರಣ್ಯಕ್ಕೆ ಬೆಂಕಿಬೀಳದಂತೆ ರಕ್ಷಿಸುವ ಹೊಣೆ ಎಲ್ಲರ ಮೇಲಿದೆ ಎಂದರು.
‘ನಂತರ ಕಾಡಿಗೆ ಬೆಂಕಿ ಹಾಕುವುದಿಲ್ಲ, ಹಾಕಲು ಇತರರನ್ನು ಬಿಡುವುದಿಲ್ಲ’. ಅಲ್ಲದೆ, ಈ ಬಗ್ಗೆ ಸುತ್ತಲಿನ ಗ್ರಾಮಗಳ ಜನರಲ್ಲಿ ಅರಿವು ಮೂಡಿಸಿ ಅರಣ್ಯವನ್ನು ಬೆಂಕಿಯಿಂದ ರಕ್ಷಿಸುವ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು.
ಮೂಲೆಹೊಳೆ ವಲಯಾರಣ್ಯಾಧಿಕಾರಿ ಎನ್.ಸಿ. ಮಹದೇವ, ಮದ್ದೂರು ಡಿಆರ್ಎಒ ನಾಗರಾಜು, ಗಿರಿಜನ ಮುಖಂಡರಾದ ಪುಟ್ಟಮ್ಮ, ನಾಗರಾಜು ಇತರರು ಇದ್ದರು.