ಗುಂಡ್ಲುಪೇಟೆ: ಕಳೆದ ಎರಡು ದಿನಗಳಿಂದ ತಾಲೂಕಿನ ಹುಂಡೀಪುರ ಗ್ರಾಮದಲ್ಲಿ ಕಾಡಾನೆ ಹಾವಳಿಯನ್ನು ತಡೆಯುವಂತೆ ಒತ್ತಾಯಿಸಿ ರೈತರು ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.
ಪ್ರತಿದಿನವೂ ದಾಳಿ ಮಾಡುತ್ತಿರುವ ಕಾಡಾನೆ ಹಾವಳಿಯನ್ನು ತಡೆಗಟ್ಟಬೇಕು, ವನ್ಯಜೀವಿಗಳಿಂದಾದ ಬೆಳೆ ನಾಶಕ್ಕೆ ಮಾರುಕಟ್ಟೆ ದರದಲ್ಲಿ ಗರಿಷ್ಠ ಪ್ರಮಾಣದಲ್ಲಿ ಪರಿಹಾರ ನೀಡಬೇಕು, ರೈತರೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿರುವ ಕುಂದಕೆರೆ ವಲಯದ ಆರ್ಎಫ್ಒ ಹಾಗೂ ಗುಂಡ್ಲುಪೇಟೆ ಉಪವಿಭಾಗದ ಎಸಿಎಸ್ ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿ ಕಳೆದ ಮೂರು ದಿನಗಳಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿ ಸ್ಥಳಕ್ಕೆ ಅರಣ್ಯ ಇಲಾಖೆ ಮೇಲಾಧಿಕಾರಿಗಳು ಬರುವಂತೆ ಒತ್ತಾಯಿಸಿದ್ದರು.
ಈ ಹಿನ್ನೆಲೆಯಲ್ಲಿ ಗುರುವಾರ ಬಂಡೀಪುರ ಹುಲಿ ಯೋಜನೆಯ ನಿರ್ದೇಶಕ ಡಾ.ರಮೇಶಕುಮಾರ್ ಗ್ರಾಮಕ್ಕೆ ಆಗಮಿಸಿ ರೈತರ ಅಹವಾಲನ್ನು ಸ್ವೀಕರಿಸಿದರು. ಮುಂದಿನ 5 ದಿನಗಳಲ್ಲಿ ಬೆಳೆ ಹಾನಿಗೆ ಪರಿಹಾರ, ನಾಳೆಯಿಂದ ಆನೆ ಸೆರೆ ಹಿಡಿಯುವ ಕಾರ್ಯಾಚರಣೆ, ರೈತರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಸರ್ಕಲ್ ಇನ್ಸ್ಪೆಕ್ಟರ್ ಮುದ್ದುರಾಜ, ಸಬ್ಇನ್ಸ್ಪೆಕ್ಟರ್ ಕಿರಣ್ಕುಮಾರ್, ಬಂಡೀಪುರ ಉಪವಿಭಾಗದ ಎಸಿಎಫ್ ನವೀನ್, ಆರ್ಎಫ್ಒಗಳಾದ ಎನ್.ಪಿ.ನವೀನ್ಕುಮಾರ್, ಶ್ರೀನಿವಾಸ, ಗ್ರಾಮಸ್ಥರಾದ ಅಶೋಕ್, ವೀರಪ್ಪ, ಎಚ್.ವಿ.ಮಂಜು ಸೇರಿದಂತೆ ಹಲವರು ಇದ್ದರು.