ಮಾನ್ವಿ: ತಾಲೂಕಿನ ಚೀಕಲಪರ್ವಿ, ಮದ್ಲಾಪೂರ, ಯಡಿವಾಳದ ತುಂಗಭದ್ರ ನದಿ ಮತ್ತು ರಂಗದಾಳ, ಮೂಷ್ಟೂರು, ಪೋತ್ನಾಳ್, ಬುರಹನಪುರದ ಹಳ್ಳಗಳಿಂದ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವವರ ವಿರುದ್ದ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದ ಪದಾಧಿಕಾರಿಗಳು ಉಪ ತಹಸೀಲ್ದಾರ್ ವಿನಾಯಕರಾವ್ಗೆ ಶುಕ್ರವಾರ ಮನವಿ ಸಲ್ಲಿಸಿದರು.
ಅಕ್ರಮವಾಗಿ ನದಿ ಮತ್ತು ಹಳ್ಳಗಳಿಂದ ಮರಳನ್ನು ಟಿಪ್ಪರ್, ಲಾರಿ, ಟ್ರಾೃಕ್ಟರ್ ಮೂಲಕ ಮಾನ್ವಿಯ ಹೊರವಲಯದ ಸಂಜೀವರಾಯ ದೇವಸ್ಥಾನದ ಆವರಣದಲ್ಲಿ ಸಂಗ್ರಹಿಸಲಾಗುತ್ತಿದೆ.
ರಾತ್ರಿ ವೇಳೆ ರಾಯಚೂರು ಇತರ ಮಹಾನಗರಗಳಿಗೆ ಅಕ್ರಮ ಮರಳು ಸಾಗಾಣಿಕೆ ಮಾಡಲಾಗುತ್ತಿದೆ. ಮರಳು ಸಾಗಾಣಿಕೆ ವಾಹನಗಳು ವೇಗವಾಗಿ ಚಲಿಸುವುದರಿಂದ ಕೋನಾಪುರ ಪೇಟೆ ನಿವಾಸಿಗಳಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ ಎಂದು ಆಗ್ರಹಿಸಿದರು.
ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದ್ದರೂ ಪಿಡಿಒಗಳು ಕ್ರಮ ಕೈಗೊಳ್ಳುತ್ತಿಲ್ಲ. ಕೂಡಲೇ ಅನಧಿಕೃತವಾಗಿ ಮರಳು ಸಾಗಣಿಕೆ ಮಾಡುವ ವಾಹನಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ದಸಂಸ ತಾಲೂಕು ಅಧ್ಯಕ್ಷ ಸದಾನಂದ ಪನ್ನೂರು, ಮುಖಂಡರಾದ ನರಸಿಂಹಲು, ಪೌಲ್ರಾಜ, ಚನ್ನಕೇಶವರೆಡ್ಡಿ, ಕೆ.ಎಂ.ಲಾರೆನ್ಸ್, ಭೀಮಣ್ಣ ಇದ್ದರು.