ಹುಬ್ಬಳ್ಳಿ: ಇಲ್ಲಿನ ಹೊಸೂರು ಕುಲಕರ್ಣಿ ಚಾಳದಲ್ಲಿ ಅಕ್ರಮವಾಗಿ ನಿರ್ವಣಗೊಂಡಿದ್ದ ಕಟ್ಟಡಗಳ ತೆರವು ಕಾರ್ಯಾಚರಣೆ ಬುಧವಾರ ಆರಂಭವಾಗಿದೆ.
ಮಂಗಲಾಬಾಯಿ ಈರನಗೌಡ ಪಾಟೀಲ ಎಂಬುವರಿಗೆ ಸೇರಿದ 1 ಎಕರೆ 17 ಗುಂಟೆ ಜಾಗದಲ್ಲಿ 70ಕ್ಕೂ ಹೆಚ್ಚು ಮನೆಗಳು ನಿರ್ವಣವಾಗಿದ್ದವು. ಮಂಗಲಾಬಾಯಿ ಪುತ್ರರಾದ ರವಿ ಪಾಟೀಲ ಹಾಗೂ ಅಶೋಕ ಪಾಟೀಲ ಎಂಬುವರು ನ್ಯಾಯಾಲಯದ ತೀರ್ಪಿನಂತೆ 2019ರ ಜುಲೈ ತಿಂಗಳಲ್ಲಿ ಪೊಲೀಸರ ಸಮ್ಮುಖದಲ್ಲಿ ಜಾಗ ವಶಕ್ಕೆ ಪಡೆದಿದ್ದರು. ಇದೀಗ ಜೆಸಿಬಿ ಬಳಸಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಶುರು ಮಾಡಿದ್ದಾರೆ.
ರವಿ ಪಾಟೀಲ, ಅಶೋಕ ಪಾಟೀಲ ಹಾಗೂ ಇತರರು ಈ ಜಾಗದ ಮಾಲೀಕರಾಗಿದ್ದು, ಮಹಾನಗರ ಪಾಲಿಕೆ ಮತ್ತು ಹೆಸ್ಕಾಂ ಅನುಮತಿ ಪಡೆದು ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವಕೀಲ ಸುನೀಲ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.