ಚಿತ್ರದುರ್ಗ: ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಅಂತರ್ಜಾಲ ವಂಚನೆ ಕೂಡ ಹೆಚ್ಚಾಗುತ್ತಿದ್ದು, ಎಚ್ಚರ ವಹಿಸುವುದು ಅನಿವಾರ್ಯ ಎಂದು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಹೇಳಿದರು.
ಜಿಲ್ಲಾಡಳಿತ, ಜಿಪಂ, ಎನ್ಐಸಿ ಹಾಗೂ ಪೊಲೀಸ್ ಇಲಾಖೆ ಆಶ್ರಯದಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ಸುರಕ್ಷಿತ ಅಂತರ್ಜಾಲ ದಿನಾಚರಣೆ ಅಂಗವಾಗಿ ವಿವಿಧ ಇಲಾಖೆ ಅಧಿಕಾರಿ, ಸಿಬ್ಬಂದಿಗೆ ಏರ್ಪಡಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನ ಕ್ಷೇತ್ರದಲ್ಲಿ ಇಂದು ಕ್ರಾಂತಿಯಾಗುತ್ತಿದೆ. ಬೆರಳಿನ ತುದಿಯಲ್ಲಿ ಎಲ್ಲ ಮಾಹಿತಿಗಳು ಲಭ್ಯವಾಗುತ್ತವೆ. ಅದೇ ರೀತಿ ಸೈಬರ್ ವಂಚನೆ ಕೂಡ ಹೆಚ್ಚಾಗುತ್ತಿದೆ. ಸುಶಿಕ್ಷಿತರು ಈ ವಂಚನೆ ಜಾಲಕ್ಕೆ ಬೀಳುತ್ತಿರುವುದು ಕಂಡುಬರುತ್ತಿದೆ. ಅಂತರ್ಜಾಲ ಬಳಕೆಯಲ್ಲಿ ಸುರಕ್ಷತಾ ವಿಧಾನಗಳನ್ನು ಅನುಸರಿಸಬೇಕು. ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಆಮಿಷ, ಸಂದೇಶಗಳಿಗೆ ಮಾರು ಹೋಗಿ ಮೋಸಕ್ಕೆ ಒಳಗಾಗಬಾರದು ಎಂದರು.
ಎಡಿಸಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಅನಧಿಕೃತ ವೆಬ್ಸೈಟ್ಗಳನ್ನು ನಂಬಬಾರದು. ಸಾಮಾಜಿಕ ಮಾಧ್ಯಮಗಳಲ್ಲಿ ವೈಯಕ್ತಿಕ ಮಾಹಿತಿಗಳನ್ನು ಹಂಚಿಕೊಳ್ಳಬಾರದು. ವಿವಿಧ ಬಗೆಯ ಸೈಬರ್ ವಂಚನೆಗೆ ಒಳಗಾಗುವುದನ್ನು ತಪ್ಪಿಸಲು ಸಾರ್ವಜನಿಕರು ಜಾಗೃತರಾಗಬೇಕು ಎಂದರು.
ಜಿಲ್ಲಾ ಎನ್ಐಸಿ ಅಧಿಕಾರಿ ಕೆಆರ್ಕೆ ಶಾಸ್ತ್ರಿ ಮಾತನಾಡಿ, ಡಿಜಿಟಲ್ ಅರೆಸ್ಟ್, ವಂಚನೆ ಕರೆಗಳು, ಬ್ಯಾಂಕ್ ಖಾತೆ, ಎಟಿಎಂ ಬ್ಲಾಕ್ ಇತ್ಯಾ ದಿ ನಾನಾ ಸೈಬರ್ ವಂಚನೆಗಳ ಕುರಿತಂತೆ ವಿವರಿಸಿದರು. ಸಿಇಎನ್ ಪೊಲೀಸ್ ಠಾಣೆ ಪಿಐ ಎನ್. ವೆಂಕಟೇಶ್ ಮಾತನಾಡಿದರು. ಎಎಸ್ಪಿ ಎಸ್.ಜೆ. ಕುಮಾರಸ್ವಾಮಿ, ಸಿಇಎನ್ ಠಾಣೆ ಡಿವೈಎಸ್ಪಿ ಉಮೇಶ್, ಈಶ್ವರ್ನಾಯ್ಕ ಮತ್ತಿತರರು ಇದ್ದರು.

ಸೈಬರ್ ವಂಚನೆ ಮೊತ್ತವೇ ಅಧಿಕ
ದೇಶದಲ್ಲಿ ಕಳೆದ ವರ್ಷ ಸೈಬರ್ ಕ್ರೈಂನಲ್ಲಿ ಅಂದಾಜು 24 ಸಾವಿರ ಕೋಟಿ ರೂ. ಕಳೆದುಕೊಂಡಿದ್ದಾರೆ ಎಂದು ಸಿಇಎನ್ ಠಾಣೆ ಪಿಐ ಎನ್. ವೆಂಕಟೇಶ್ ಹೇಳಿದರು. ಜಿಲ್ಲೆಯಲ್ಲಿ ಕಳೆದ ವರ್ಷ ಮನೆಗಳವು, ದರೋಡೆ, ಸುಲಿಗೆ ಪ್ರಕರಣಗಳ ಮೊತ್ತ 4 ಕೋಟಿ ರೂ. ಆಗಿದ್ದರೆ, ಸೈಬರ್ ವಂಚನೆಯಿಂದ ಹಣ ಕಳೆದುಕೊಂಡ ಮೊತ್ತ 15.10 ಕೋಟಿ ರೂ.ಆಗಿದೆ. ಆಮಿಷಗಳಿಗೆ ಒಳಗಾಗಬಾರದು, ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಹೆಚ್ಚು ಜಾಗೃತರಾಗಬೇಕು. ಹಣ ಕಳೆದುಕೊಂಡಲ್ಲಿ ತಕ್ಷಣವೇ 1930 ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು ಎಂದರು.